ಚಾಮರಾಜನಗರ: ಶಿಕ್ಷಕಿ, ಗ್ರಾಮಸ್ಥರ ಜಗಳಕ್ಕೆ ಮಕ್ಕಳು ಬಲಿಪಶು
ಚಾಮರಾಜನಗರ, ಫೆಬ್ರವರಿ,11: ಬೀಗ ಜಡಿದ ಶಾಲೆ...ಮರದ ಕೆಳಗೆ ಮಕ್ಕಳಿಗೆ ಪಾಠ, ಪ್ರವಚನ..ಇದೇನಪ್ಪಾ ಎಂದು ಅಚ್ಚರಿಯಾಗಿರಬಹುದಲ್ಲವೆ? ಹೀಗೆ ಆಗಲು ಕಾರಣವೇನು ಎಂದು ಹುಡುಕುತ್ತಾ ಹೋದರೆ ಶಾಲೆಯ ಮುಖ್ಯ ಶಿಕ್ಷಕಿ ವಿರುದ್ಧವೇ ಗ್ರಾಮಸ್ಥರು ಹರಿಹಾಯ್ತಾರೆ.
ಈ ಸ್ಥಿತಿ ತಲೆದೋರಿರುವುದು ಚಾಮರಾಜನಗರ ಜಿಲ್ಲೆಯ ಹರವೆ ಹೋಬಳಿಯ ಮುಕ್ಕಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭುಜಗನಪುರ ಗ್ರಾಮದ ಶಾಲೆಯಲ್ಲಿ. ಶಾಲಾ ಮುಖ್ಯ ಶಿಕ್ಷಕಿ ಮತ್ತು ಗ್ರಾಮಸ್ಥರ ನಡುವಿನ ಸಂಬಂಧ ಎಣ್ಣೆ ಸೀಗೇಕಾಯಿಯಂತಾಗಿದ್ದು, ಮುಖ್ಯ ಶಿಕ್ಷಕಿ ಮಂಜುಳ ಸೌಭಾಗ್ಯ ಗ್ರಾಮಸ್ಥರ ಮಾತಿಗೆ ಸರಿಯಾಗಿ ಪ್ರತಿಕ್ರಿಯಿಸದೆ ಇರುವುದರಿಂದ ಬೇಸತ್ತು ಶಾಲೆಗೆ ಬೀಗ ಜಡಿದಿದ್ದೇವೆ ಎನ್ನುವುದು ಗ್ರಾಮಸ್ಥರ ಜವಾಬಾಗಿದೆ.[ಪೋಷಕರೇ, ಮಕ್ಕಳನ್ನು ಫೆವಿಕಾಲ್, ಪೇಯಿಂಟ್ ನಿಂದ ದೂರವಿರಿಸಿ]
ಮಂಜುಳಸೌಭಾಗ್ಯ ಶಾಲೆಗೆ ಕಳೆದ 18 ವರ್ಷಗಳ ಹಿಂದೆ ಶಿಕ್ಷಕಿಯಾಗಿ ನೇಮಕವಾಗಿದ್ದರು. ಈಗ ಮುಖ್ಯ ಶಿಕ್ಷಕಿಯಾಗಿದ್ದು ಶಾಲೆ ಮಾತ್ರ ಅಭಿವೃದ್ಧಿಯಾಗಿಲ್ಲ. ಮೂವತ್ತು ಮಕ್ಕಳಿರುವ ಶಾಲೆಯಲ್ಲಿ ಇದೀಗ 9 ಮಕ್ಕಳಿದ್ದಾರೆ. ಸ್ವತಃ ಮಂಜುಳಾ ಮಂಜುಳಸೌಭಾಗ್ಯ ಅವರು ಮಕ್ಕಳಿಗೆ ಟಿಸಿ ಕೊಟ್ಟು ಕಳುಹಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಲಾ ಮುಖ್ಯಶಿಕ್ಷಕಿ ಮತ್ತು ಗ್ರಾಮಸ್ಥರ ನಡುವಿನ ಹಗ್ಗಜಗ್ಗಾಟದಿಂದಾಗಿ ಭುಜಗನಪುರ ಗ್ರಾಮದ ಶಾಲೆ ಬರಡಾಗುತ್ತಿದೆ. ಮಕ್ಕಳು ಉಸಿರುಕಟ್ಟಿದ ವಾತಾವರಣದಲ್ಲಿ ಪಾಠ ಕಲಿಯಬೇಕಾಗಿದೆ. ಈಗಾಗಲೇ ಇವರ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಪರಿಹಾರ ಮಾತ್ರ ಸಿಕ್ಕಿಲ್ಲ.[ಕೆಆರ್.ಪೇಟೆ ಸರ್ಕಾರಿ ಶಾಲಾ ಮಕ್ಕಳಿಗೆ ಆಕಾಶವೇ ಸೂರು!]
ಮುಖ್ಯಶಿಕ್ಷಕಿಯನ್ನು ಗ್ರಾಮದಿಂದ ಬೇರೆಡೆಗೆ ವರ್ಗಾವಣೆ ಮಾಡುಬೇಕೆಂದು ಪಟ್ಟು ಹಿಡಿದಿರುವ ಗ್ರಾಮಸ್ಥರು ಶಾಲೆ ಬೀಗ ತೆಗೆಯುವುದಿಲ್ಲ ಎನ್ನುತ್ತಿದ್ದಾರೆ. ನೀವು ಜಡಿದರೂ ಮುಖ್ಯ ಶಿಕ್ಷಕಿ ಮಂಜುಳಸೌಭಾಗ್ಯ ಮಕ್ಕಳಿಗೆ ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ.
ಇವರ ಕಚ್ಚಾಟದಿಂದ ಮಕ್ಕಳು ಪರೀಕ್ಷಾ ಸಮಯದಲ್ಲಿ ಸರಿಯಾದ ಪಾಠವೂ ಇಲ್ಲದೆ, ಬಿಸಿಯೂಟವೂ ಇಲ್ಲದೆ ಸುಡುಬಿಸಿಲಿನಲ್ಲಿ ಕುಳಿತು ಮರುಗುವಂತಾಗಿದೆ. ಸಂಬಂಧಿಸಿದ ಶಿಕ್ಷಣಾಧಿಕಾರಿಗಳು ಸಮಸ್ಯೆಯನ್ನು ಹೇಗೆ ಪರಿಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.[ಸೂರಿಲ್ಲದ ಮಂಗಳೂರಿನ ಕಿತ್ತಳೆ ವ್ಯಾಪಾರಿ 'ಹಾಜಬ್ಬ' ಅಕ್ಷರ ಸ್ನೇಹಿ]