ಚಾಮರಾಜನಗರ ಲೋಕ ಅಖಾಡದಲ್ಲಿ ಕೈ-ಕಮಲ ಜಿದ್ದಾಜಿದ್ದಿ! ಸಿಎಂಗೂ ಪ್ರತಿಷ್ಠೆಯಾದ ಕ್ಷೇತ್ರ
ಚಾಮರಾಜನಗರ, ಏಪ್ರಿಲ್ 22: ತಮ್ಮ ತವರು ಕ್ಷೇತ್ರಕ್ಕೊಳಪಡುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನ್ನು ಗೆಲ್ಲಿಸಿಯೇ ತೀರಬೇಕು ಎಂಬ ಹಠಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬಿದ್ದಂತೆ ಕಾಣಿಸುತ್ತಿದೆ. ಇನ್ನೊಂದೆಡೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಹೆಚ್.ಸಿ.ಮಹದೇವಪ್ಪ ಅವರು ತಮ್ಮ ಪುತ್ರ ಸುನೀಲ್ ಬೋಸ್ ಅವರನ್ನು ಕಣಕ್ಕಿಳಿಸಿರುವ ಕಾರಣದಿಂದ ಕ್ಷೇತ್ರ ಬಿಟ್ಟು ಹೊರ ಬಾರದೆ ಪ್ರಚಾರ ನಡೆಸುತ್ತಿದ್ದು, ಬಿಜೆಪಿ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಳ್ಳುವತ್ತ ಹೋರಾಟ ನಡೆಸುತ್ತಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ನ ಭದ್ರಕೋಟೆಯಾಗಿತ್ತು. ಆದರೆ ಕಳೆದ 2019ರ ಚುನಾವಣೆಯಲ್ಲಿ ವಿ.ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ಕಾಂಗ್ರೆಸ್ ಭದ್ರಕೋಟೆಗೆ ಬಿಜೆಪಿ ಲಗ್ಗೆಯಿಟ್ಟಿತು. ಈ ಬಾರಿ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರಿಂದ ಬಿಜೆಪಿಯು ಅಭ್ಯರ್ಥಿಯನ್ನಾಗಿ ಕೊಳ್ಳೇಗಾಲದ ಮಾಜಿ ಶಾಸಕ ಎಸ್.ಬಾಲರಾಜ್ ಅವರನ್ನು ಕಣಕ್ಕಿಳಿಸಿದೆ.

ಒಮ್ಮೆ ಶಾಸಕರಾಗಿ ಆಯ್ಕೆಯಾದ ಬಾಲರಾಜ್ ಅವರು ಬಳಿಕ ರಾಜಕೀಯವಾಗಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಬೇರೆ ಪಕ್ಷಗಳಿಗೆ ವಲಸೆ ಹೋಗಿ ಬಂದಿದ್ದಾರೆ. ಎಲ್ಲಿಯೂ ಅವರಿಗೆ ರಾಜಕೀಯ ಭವಿಷ್ಯ ಉಜ್ವಲವಾಗಲೇ ಇಲ್ಲ. ಕಳೆದ ಹದಿನಾಲ್ಕು ವರ್ಷಗಳ ಬಳಿಕ ಅವರು ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿ ಮತನೀಡಿ ರಾಜಕೀಯ ವನವಾಸದಿಂದ ಮುಕ್ತಿಗೊಳಿಸಿ ಎಂಬ ಮನವಿಯನ್ನು ಜನರ ಮುಂದೆ ಮಾಡುತ್ತಿದ್ದಾರೆ.
1962ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ರಚನೆ
ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುನೀಲ್ ಬೋಸ್ ಪ್ರಭಾವಿ ರಾಜಕಾರಣಿಯ ಪುತ್ರ ಜತೆಗೆ ತಂದೆಯ ಕೃಪಾಶೀರ್ವಾದವೂ ಅವರ ಮೇಲಿದೆ. ಮೊದಲ ಬಾರಿಗೆ ನೇರವಾಗಿ ಲೋಕ ಅಖಾಡಕ್ಕಿಳಿಯುತ್ತಿರುವ ಅವರನ್ನು ಮತದಾರರು ಸ್ವೀಕರಿಸಿ ತಮ್ಮ ಕ್ಷೇತ್ರದಿಂದ ದೆಹಲಿ ಸಂಸತ್ತಿಗೆ ಕಳುಹಿಸಿಕೊಡುತ್ತಾರಾ ಗೊತ್ತಿಲ್ಲ. ಸದ್ಯಕ್ಕೆ ಬಾಲರಾಜ್ ಮತ್ತು ಸುನೀಲ್ ಬೋಸ್ ನಡುವೆ ಫೈಟ್ ಅಂತೂ ಇದ್ದೇ ಇದೆ.

ಹಾಗೆನೋಡಿದರೆ ಚಾಮರಾಜನಗರ ಲೋಕಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಚಾಮರಾಜನಗರ ಜಿಲ್ಲೆಯ 4 ಮತ್ತು ಮೈಸೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ 1962ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ರಚನೆ ಮಾಡಲಾಗಿದೆ. ಅದಕ್ಕಿಂತ ಹಿಂದೆ ಮೈಸೂರು ಲೋಕಸಭಾ ದ್ವಿಸದಸ್ಯ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ತದನಂತರ ಪ್ರತ್ಯೇಕಗೊಳಿಸಲಾಗಿದೆ.
ಕಾಂಗ್ರೆಸ್ ಭದ್ರಕೋಟೆಯಾಗಿ ಉಳಿದಿತ್ತು
ಚಾಮರಾಜನಗರ ಲೋಕಸಭಾ ಕ್ಷೇತ್ರವು ಪ್ರತ್ಯೇಕಗೊಂಡ ನಂತರದ ರಾಜಕೀಯ ಇತಿಹಾಸವನ್ನು ಮೆಲುಕು ಹಾಕಿದ್ದೇ ಆದರೆ ವಿ.ಶ್ರೀನಿವಾಸಪ್ರಸಾದ್ ಅವರು ಕ್ಷೇತ್ರಕ್ಕೆ ಭೇಟಿ ನೀಡುವವರೆಗೆ ಇದು ಕಾಂಗ್ರೆಸ್ ನ ಭದ್ರಕೋಟೆಯಾಗಿಯೇ ಮುಂದುವರೆದಿತ್ತು. ಕ್ಷೇತ್ರ ರಚನೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಎಸ್.ಎಂ.ಸಿದ್ದಯ್ಯ ಗೆಲುವು ಪಡೆದಿದ್ದರು. ಅವರ ರಾಜಕೀಯ ಇತಿಹಾಸ ನೋಡಿದರೆ, ಅವರು 1962, 1967, 1972ರ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲುವು ಪಡೆಯುತ್ತಲೇ ಬಂದಿದ್ದರು.

1977ರಲ್ಲಿ ಕಾಂಗ್ರೆಸ್ನಿಂದ ಬಿ.ರಾಚಯ್ಯ ಸ್ಪರ್ಧೆ ಮಾಡಿ ಗೆದ್ದರು. 1984, 1989, 1991ರಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ವಿ.ಶ್ರೀನಿವಾಸಪ್ರಸಾದ್ ವಿಜಯಮಾಲೆ ಧರಿಸಿದರು. ಇದೆಲ್ಲದರ ನಡುವೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಬದಲಾದ ಸ್ಥಳೀಯ ರಾಜಕಾರಣದಿಂದಾಗಿ ಜನತಾದಳ ಪ್ರವೇಶಿಸಿತು. 1996, 1998ರಲ್ಲಿ ಜನತಾಳದ ಅಭ್ಯರ್ಥಿ ಎ.ಸಿದ್ದರಾಜು ಜಯಗಳಿಸಿದರು. ಇದಾದ ನಂತರ 1999ರಲ್ಲಿ ಜೆಡಿಯುನಿಂದ ವಿ.ಶ್ರೀನಿವಾಸಪ್ರಸಾದ್ ಸ್ಪರ್ಧಿಸಿ ಗೆಲುವು ಪಡೆದರು.
2019ರಲ್ಲಿ ಖಾತೆ ತೆರೆದ ಬಿಜೆಪಿ
ಇನ್ನು 2004ರಲ್ಲಿ ಜೆಡಿಎಸ್ನಿಂದ ಕಾಗಲವಾಡಿ ಶಿವಣ್ಣ ಸ್ಪರ್ಧೆ ಮಾಡಿ ಸಂಸದರಾದರು. ಕಾಂಗ್ರೆಸ್ ನಿಂದ ತಪ್ಪಿ ಹೋಗಿದ್ದ ಕ್ಷೇತ್ರವನ್ನು ಮರಳಿ ಪಡೆಯುವಲ್ಲಿ 2009ರಲ್ಲಿ ಆರ್.ಧ್ರುವನಾರಾಯಣ್ ಪಡೆಯುವಲ್ಲಿ ಯಶಸ್ವಿಯಾದರು. ಆ ನಂತರ 2014ರಲ್ಲೂ ಗೆಲುವಿನ ನಾಗಾಲೋಟದಲ್ಲಿ ಮುಂದುವರೆದರು. ಬದಲಾದ ರಾಜಕೀಯದಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಶ್ರೀನಿವಾಸಪ್ರಸಾದ್ ಅವರು ಮೋದಿ ಅಲೆ ಜತೆಗೆ ತಮ್ಮ ಸ್ವಂತ ವರ್ಚಸ್ಸಿನಲ್ಲಿ ಗೆಲುವು ಪಡೆದು ಕ್ಷೇತ್ರದಲ್ಲಿ ಕಮಲ ಅರಳಿಸಿದರು.
ಈ ಬಾರಿ ಚುನಾವಣೆಯಲ್ಲಿ ಮತದಾರರು ಯಾರನ್ನು ಕೈಹಿಡಿಯುತ್ತಾರೆ ಎಂಬುದು ಮಾತ್ರ ನಿಗೂಢವಾಗಿದೆ. ಎರಡು ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಹಗಲು ರಾತ್ರಿ ಎನ್ನದೆ ಶ್ರಮವಹಿಸುತ್ತಿದ್ದಾರೆ. ಮತದಾರರು ಯಾರ ಕೈಹಿಡಿಯುತ್ತಾರೋ ಅವರಿಗೆ ಗೆಲುವು ಖಚಿತವಾಗಿದೆ. ಆದರೆ ಎರಡು ಕಡೆಯಿಂದಲೂ ಕಠಿಣ ಪೈಪೋಟಿಗಳಿರುವುದು ಎದ್ದು ಕಾಣಿಸುತ್ತಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಒಟ್ಟು 8 ವಿಧಾನಸಭೆ ಕ್ಷೇತ್ರಗಳಲ್ಲಿ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ವರುಣ, ಎಚ್.ಡಿ.ಕೋಟೆ, ತಿ.ನರಸೀಪುರ, ನಂಜನಗೂಡು ಹೀಗೆ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಮತದಾರರು ಯಾರ ಕೈಹಿಡಿಯುತ್ತಾರೆ?
ಜಿಲ್ಲೆಯ ಹನೂರು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಗೆದ್ದಿದೆ. ಸದ್ಯ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಇದೊಂದು ಕ್ಷೇತ್ರದಲ್ಲಿ ಹಾಲಿ ಶಾಸಕರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಾರಾ ಗೊತ್ತಿಲ್ಲ. ಇನ್ನು ಲೋಕಸಭಾ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಯನ್ನು ಮತದಾರರು ಪ್ರತ್ಯೇಕವಾಗಿ ನೋಡುವುದರಿಂದ ಯಾವುದನ್ನೂ ಅಷ್ಟು ಸಲುಭವಾಗಿ ಹೇಳಲಾಗುವುದಿಲ್ಲ. ಜಿಲ್ಲೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಗಟ್ಟಿಯಾಗಿ ನಿಂತರೆ ಬಿಜೆಪಿ ಲಾಭ ತರಬಹುದೇನೋ?
ಕಳೆದ ಬಾರಿ ವಿ.ಶ್ರೀನಿವಾಸಪ್ರಸಾದ್ ಬಹುದೊಡ್ಡ ಅಂತರದಿಂದ ಗೆಲುವು ಸಾಧಿಸಿರಲಿಲ್ಲ ಕೇವಲ 1817 ಮತಗಳ ಅಂತರದಲ್ಲಷ್ಟೆ ಗೆಲುವು ಸಾಧಿಸಿದ್ದರು. ಈ ಬಾರಿ ಯುವ ಮತದಾರರು ಎಂಟ್ರಿ ಕೊಟ್ಟಿರುವುದರಿಂದ ಅವರ ಮತವೂ ಬಹುಮುಖ್ಯ ಪಾತ್ರವಹಿಸಲಿದೆ. ಒಟ್ಟಾರೆ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಮತ್ತು ಕಾಂಗ್ರೆಸ್ಗೂ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಮತದಾರರು ಯಾರ ಕೈಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications