ಗೋಹತ್ಯೆ ನಿಷೇಧ: ವಿಧಾನಸಭೆ ಚುನಾವಣೆಗೆ ಬಿಜೆಪಿಯ ಹೊಸ ದಾಳ?!
ಉಡುಪಿ, ಮಾರ್ಚ್ 06: ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಗೋ ಹತ್ಯೆ ನಿಷೇಧವೇ ಬಿಜೆಪಿಯ ಪ್ರಬಲ ದಾಳವಾಗಲಿದೆಯಾ..?! ಕರ್ನಾಟಕ ಬಿಜೆಪಿ ಕರಾವಳಿಯ ಭಾಗದಲ್ಲಿ ನಡೆಸುತ್ತಿರುವ ಜನಸುರಕ್ಷಾ ಯಾತ್ರೆ ಅಂಥದೊಂದು ಸುಳಿವು ನೀಡಿದೆ!
ಬೈಂದೂರು ಮತ್ತು ಉಡಪಿಯಲ್ಲಿ ಮಾ.05 ರಂದು ನಡೆದ ಜನಸುರಕ್ಷಾ ಯಾತ್ರೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಾಡುವ ಮೊದಲ ಕೆಲಸವೆಂದರೆ 'ಗೋ ಹತ್ಯೆ ನಿಷೇಧ ಎಂದಿದ್ದಾರೆ.'
ಮುಖ್ಯಮಂತ್ರಿಯಾಗಬೇಕೆಂದು ಕನಸು ಕಂಡಿಲ್ಲ- ಅನಂತಕುಮಾರ್ ಹೆಗ್ಡೆ
ಭಾರತೀಯ ಪರಂಪರೆಯಲ್ಲಿ ದೇವರ ಸ್ಥಾನ ಪಡೆದ ಗೋವುಗಳ ರಕ್ಷಣೆಗೆ ತಾವು ಬದ್ಧ ಎಂದು ಭರವಸೆ ನೀಡುವುದರಿಂದ ಕೋಟ್ಯಂತರ ಹಿಂದುಗಳನ್ನು ಓಲೈಸುವುದು ಸುಲಭ! ಆದ್ದರಿಂದಲೇ ಚುನಾವಣೆ ಎದುರಿಸುವ ಹೊಸ ಅಸ್ತ್ರವನ್ನಾಗಿ ಬಿಜೆಪಿ 'ಗೋಹತ್ಯೆ ನಿಷೇಧ'ವನ್ನು ಬಳಸಿಕೊಳ್ಳುತ್ತಿದೆ.
ಅಭಯ ನೀಡದಿದ ಈಶ್ವರಪ್ಪ
ನಮ್ಮ ಸರ್ಕಾರ ಗೋಹತ್ಯೆ ನಿಷೇಧಕ್ಕೆ ಬೆಂಬಲ ನೀಡಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ, ಗೋ ಹತ್ಯೆಗೆ ಮತ್ತೆ ಅವಕಾಶ ನೀಡಿತು. ನಾವು ಅಧಿಕಾರಕ್ಕೆ ಬಂದರೆ ಮೊದಲು ಮಾಡುವ ಕೆಲಸವೆಂದರೆ ಗೋ ಹತ್ಯೆ ನಿಷೇಧ ಎಂದು ಈಶ್ವರಪ್ಪ ಸ್ಪಷ್ಟವಾಗಿ ಉಚ್ಚರಿಸಿದ್ದಾರೆ. ಬಿಜೆಪಿಜಯ ನಾಲ್ಕು ದಿನಗಳ ಜನಸುರಕ್ಷಾ ಯಾತ್ರೆಯಲ್ಲಿ ಗೋಹತ್ಯೆಗೆ ಸಂಬಂಧಿಸಿದ ಬಿತ್ತಿಚಿತ್ರ ಪ್ರದರ್ಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮುಖ್ಯಮಂತ್ರಿಗಳ ವಿರುದ್ಧ ಕೀಳು ಭಾಷೆ ಬಳಸಿದ ಈಶ್ವರಪ್ಪ
ಹಿಂದುಗಳ ಹತ್ಯೆಯ ವಿರುದ್ಧವೂ ಧ್ವನಿ
ಬಿಜೆಪಿಯ ಇತರ ನಾಯಕರು ಹಿಂದು ಕಾರ್ಯಕರ್ತರ ಹತ್ಯೆಯ ಕುರಿತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಕಾನೂನು ಸುವ್ಯವಸ್ಥೆಯನ್ನು ದೂರುತ್ತಿದ್ದಾರೆ. ಆದರೆ ಈಶ್ವರಪ್ಪ ಅವರು ಮಾತ್ರ ಗೋ ಹತ್ಯೆ ನಿಷೇಧವನ್ನೇ ಪ್ರಮುಖ ದಾಳವನ್ನಾಗಿಸಿಕೊಂಡಿದ್ದಾರೆ. ಇಂದು(ಮಾ.6) ಉತ್ತ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಜನಸುರಕ್ಷಾ ಯಾತ್ರೆಗೆ ಆಗಮಿಸುತ್ತಿರುವುದರಿಂದ ಯಾತ್ರೆಗೆ ಮತ್ತಷ್ಟು ಕಳೆಬರಲಿದೆ!
ಶೋಭಾ ಕರಂದ್ಲಾಜೆ ಜೊತೆ ವೇದಿಕೆ ಹಂಚಿಕೊಂಡ ಈಶ್ವರಪ್ಪ!
ಅಚ್ಚರಿಯ ವಿಷಯ ಎಂದರೆ ಈಶ್ವರಪ್ಪ ಅವರು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರೊಂದಿಗೆ ವೇದಿಕೆ ಹಂಚಿಕೊಂಡರು! ಬಿ ಎಸ್ ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ನಡುವೆ ಎಣ್ಣೆ ಸೀಗೇಕಾಯಿ ಸಂಬಂಧವಿದ್ದಿದ್ದರಿಂದ ಯಡಿಯೂರಪ್ಪ ಬಣದ ಶೋಭಾ ಅವರೊಂದಿಗೂ ಈಶ್ವರಪ್ಪ ಅವರು ವೇದಿಕೆ ಹಂಚಿಕೊಳ್ಳುವುದು ಕಡಿಮೆಯೇ. ಆದರೆ ವಿರೋಧಗಳನ್ನೆಲ್ಲ ಮರೆತು ಇಬ್ಬರೂ ವೇದಿಕೆ ಹಂಚಿಕೊಂಡಿದ್ದು ಅಚ್ಚರಿ ಎನ್ನಿಸಿತ್ತು.
ಗೌರಿ ಹತ್ಯೆಗೆ ಸಿದ್ದರಾಮಯ್ಯ ಸರ್ಕಾರವನ್ನು ದೂರಿದ ಶೋಭಾ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ವಿಷಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹಿಂದುಗಳ ಮೇಲೆ ಬಲೆಬೀಸಲು ಪ್ರಯತ್ನಿಸುತ್ತಿದೆ ಎಂದು ಇದೇ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಎಂ ಎಂ ಕಲಬುರ್ಗಿ ಹತ್ಯೆಯ ಅಪರಾಧಿಗಳನ್ನು ಪತ್ತೆ ಮಾಡಲು ವಿಫಲವಾದ ಸರ್ಕಾರ ಗೌರಿ ಲಂಕೇಶ್ ಹತ್ಯೆಯಲ್ಲಿ ಹಿಂದುಗಳನ್ನು ಸಿಲುಕಿಸಲು ಪ್ರಯತ್ನಿಸುತ್ತಿದೆ ಎಂದು ಆವರು ಹೇಳಿದರು.