ವಿದೇಶಗಳಿಗೆ ರಫ್ತಾಗುತ್ತಿರುವ ಗೋವುಗಳು ಗೋಮಾತೆಯಲ್ಲವೇ?: ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು, ಜನವರಿ 11: ಗೋವುಗಳು ಭಾರತದಲ್ಲಿ ಮಾತ್ರ ಗೋಮಾತೆಯೇ? ವಿದೇಶಕ್ಕೆ ರಫ್ತಾಗುತ್ತಿರುವ ಗೋವುಗಳು ಮಾತೆಯಲ್ಲವೇ? ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಗೋಹತ್ಯೆ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ಹೇಳುತ್ತಿರುವ ಸುಳ್ಳುಗಳು ಎಂಬ ಅಭಿಯಾನವನ್ನು ಟ್ವಿಟ್ಟರ್ನಲ್ಲಿ ನಡೆಸಿರಿವ ಅವರು, 'ಬಿಜೆಪಿ ಸರ್ಕಾರಗಳ ಐದು ಕಾಯ್ದೆಗಳ ಅಸಂಖ್ಯಾತ ಸುಳ್ಳುಗಳು' ಎಂಬ ಪಟ್ಟಿ ನೀಡಿದ್ದು, ಗೋಹತ್ಯೆ ನಿಷೇಧ ಕಾಯ್ದೆ, ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮುಂತಾದವುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತವಿರೋಧಿ, ಜನವಿರೋಧಿ ಕಾಯಿದೆಗಳ ಹಿಂದಿನ ಸತ್ಯಾಸತ್ಯತೆಯನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ "ಐದು ಕಾಯ್ದೆಗಳು, ಅಸಂಖ್ಯಾತ ಸುಳ್ಳುಗಳು" ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿದೆ ಎಂದು ಹೇಳಿದ್ದಾರೆ.
ತಾಕತ್ತಿದ್ದರೆ ಗೋಮಾಂಸ ರಫ್ತು ನಿಷೇಧಿಸಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲು
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳ ವಿರುದ್ಧ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ನಡೆಸಲಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದು ಹೋರಾಟದ ರೂಪುರೇಷೆ ಸಿದ್ಧಪಡಿಸಿ, ಜೈಲ್ ಭರೋ ಚಳವಳಿಯನ್ನೂ ಹಮ್ಮಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಮುಂದೆ ಓದಿ.
ಗೋಮಾಂಸ ರಫ್ತು ನಿಲ್ಲಿಸಲಿ
ಗೋಹತ್ಯೆ ನಿಷೇಧ ಕಾಯ್ದೆ ಕೇವಲ ನಮ್ಮ ರಾಜ್ಯದಲ್ಲಷ್ಟೇ ಜಾರಿಯಾದರೆ ಉಪಯೋಗವಿಲ್ಲ. ಇಡೀ ದೇಶಕ್ಕೆ ಅನ್ವಯವಾಗುವಂತಹ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.
ಬಿಜೆಪಿ ನಾಯಕರು ಗೋವನ್ನು ತಾಯಿಯಂತೆ ಕಾಣುವುದೇ ಆದರೆ ಮೊದಲು ಗೋಮಾಂಸ ರಫ್ತನ್ನು ನಿಲ್ಲಿಸಲಿ. ಭಾರತದಲ್ಲಿ ತಿಂದರಷ್ಟೇ ಗೋವು ಮಾತೆಯೇ? ವಿದೇಶಗಳಿಗೆ ರಫ್ತಾಗುತ್ತಿರುವ ಗೋವುಗಳು ಮಾತೆಯಲ್ಲವೇ?
ಆಮದು-ರಫ್ತಿ ಮಾಡುವವರು ಬಿಜೆಪಿಯವರು
ವಿದೇಶಗಳಿಂದ ಗೋಮಾಂಸವನ್ನು ಆಮದು ಮಾಡುವವರು ಬಿಜೆಪಿಯವರು, ವಿದೇಶಗಳಿಗೆ ರಫ್ತು ಮಾಡುತ್ತಿರುವವರು ಬಿಜೆಪಿಯವರು, ಆದರೆ ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಮಾತ್ರ ಗೋಹತ್ಯೆ ಮಾಡುವವರು ಎಂಬುದಾಗಿ ಬಿಂಬಿಸಲಾಗುತ್ತಿದೆ.
ಗೋವಾದ ಅತಿದ್ದೊಡ್ಡ ಗೋಮಾಂಸ ಮಾರುಕಟ್ಟೆ ಓಪನ್
ಅರ್ಧಬೆಲೆಗೆ ತೈಲ ಮಾರಾಟ
ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್ ಒಂದಕ್ಕೆ 110 ಡಾಲರ್ ಇದ್ದಾಗ ಪೆಟ್ರೋಲನ್ನು 60-65 ರೂಪಾಯಿಗೆ ಸರ್ಕಾರ ಮಾರಾಟ ಮಾಡಿತ್ತು. ಪ್ರಸ್ತುತ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 42 ಡಾಲರ್ ಇದೆ, ಅಂದರೆ ಈಗ ಮಾರುತ್ತಿರುವ ಅರ್ಧಬೆಲೆಗೆ ಪೆಟ್ರೋಲ್, ಡೀಸೆಲ್ ಅನ್ನು ಮಾರಾಟ ಮಾಡಬೇಕು.
ಕೃತಕ ಬೆಲೆಯೇರಿಕೆ ಸೃಷ್ಟಿ
ಅಗತ್ಯ ವಸ್ತುಗಳ ಕಾಯ್ದೆ 1955 ಕ್ಕೆ ತಿದ್ದುಪಡಿ ಮಾಡಿ ಹಲವು ಪ್ರಮುಖ ವಸ್ತುಗಳನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಅಕ್ರಮ ದಾಸ್ತಾನುಗಳ ಮೇಲೆ ದಾಳಿ ಮಾಡಿ, ಕಾನೂನು ಕ್ರಮ ಜರುಗಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲವಾಗಿದೆ. ಇದರಿಂದ ಹಲವು ವಸ್ತುಗಳ ಕೃತಕ ಬೆಲೆಯೇರಿಕೆ ಸೃಷ್ಟಿಯಾಗಲಿದೆ.
ಎಪಿಎಂಸಿ ಮುಚ್ಚಿಹೋಗಲಿವೆ
ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ ನಂತರ ರೈತರು ತಮ್ಮ ಬೆಳೆಗಳನ್ನು ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟ ಮಾಡಬೇಕಾದ ನಿಯಮವಿರುವುದಿಲ್ಲ, ಯಾರಿಗೆ ಬೇಕಾದರೂ ಮಾರಬಹುದು ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ.
ಹೆಚ್ಚು ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ರೈತರು ಖಾಸಗಿಯವರಿಗೆ ಬೆಳೆಗಳನ್ನು ಮಾರುವುದರಿಂದ ಕಾಲಕ್ರಮೇಣ ಎಪಿಎಂಸಿ ಗಳ ವಹಿವಾಟು ಸ್ಥಗಿತಗೊಂಡು, ಅವು ಮುಚ್ಚಲ್ಪಡುತ್ತವೆ. ಮುಂದೆ ರೈತರು ಬೆಳೆ ಮಾರಾಟಕ್ಕಾಗಿ ಖಾಸಗಿಯವರನ್ನೇ ಸಂಪೂರ್ಣ ಅವಲಂಬಿಸಬೇಕಾಗುತ್ತದೆ.
ಕೇಳಿದ ಬೆಲೆಗೆ ಮಾರಾಟ
ಆರಂಭದ ದಿನಗಳಲ್ಲಿ ರೈತರಿಗೆ ಲಾಭದಾಯಕವಾದರೂ ನಂತರದ ದಿನಗಳಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವ ಖಾತ್ರಿಯಿಲ್ಲ. ಒಮ್ಮೆ ಖಾಸಗಿ ಸಂಸ್ಥೆಗಳು ಮಾರುಕಟ್ಟೆಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರೆ ಅವರು ಕೇಳಿದ ಬೆಲೆಗೆ ರೈತರು ತಮ್ಮ ಬೆಳೆಗಳನ್ನು ಮಾರಬೇಕಾಗುತ್ತದೆ.
ಎಂಎಸ್ಪಿಗೆ ಕಾನೂನು ಮಾಡುತ್ತಿಲ್ಲ
ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಹಿಂದಿನ ಉದ್ದೇಶ ಎಪಿಎಂಸಿ ಗಳನ್ನು ನಾಶ ಮಾಡುವುದು ಹಾಗೂ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದನ್ನು ನಿಲ್ಲಿಸುವುದಾಗಿದೆ. ಇದಕ್ಕೆ ಪೂರಕವಾಗಿ ನಿರ್ಮಲಾ ಸೀತಾರಾಮನ್ ಅವರು " ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಮುಚ್ಚಲು ಇದು ಸಕಾಲ" ಎಂಬ ಹೇಳಿಕೆ ನೀಡಿದ್ದರು.
ರೈತರಿಗೆ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆ ಪದ್ಧತಿಯನ್ನು ನಿಲ್ಲಿಸಲ್ಲ ಎಂದು ಸರ್ಕಾರ ಕೇವಲ ಬಾಯಿಮಾತಲ್ಲಷ್ಟೇ ಹೇಳಿದೆ, ಇದನ್ನು ಕಾನೂನಿನ ಮೂಲಕ ದೃಢಪಡಿಸಿ ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದರೆ ಅದನ್ನು ಒಪ್ಪಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಿದ್ಧವಿಲ್ಲ.
ನನ್ನ ಮೇಲೆ ವೃಥಾ ಆರೋಪ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ಬಗ್ಗೆ ತಪ್ಪು ಮಾಹಿತಿ ನೀಡಿ, ಸರ್ಕಾರ ಜನರ ದಾರಿ ತಪ್ಪಿಸುತ್ತಿದೆ. ಕಾಯ್ದೆ ಜಾರಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು, ನಿರುದ್ಯೋಗಿ ಯುವಕ ಯುವತಿಯರಿಗೆ ಕೃಷಿ ಮಾಡಲು ಈ ತಿದ್ದುಪಡಿ ಅವಕಾಶ ನೀಡುತ್ತೆ ಎಂಬುದು ಸರ್ಕಾರದ ವಾದ.
ಸರ್ಕಾರ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು 79(ಎ). (ಬಿ), (ಸಿ) ನಿಯಮಗಳನ್ನು ರದ್ದುಮಾಡಿ ಯಾರು ಬೇಕಾದರೂ ಭೂಮಿಯನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಭೂಮಿ ಖರೀದಿಸುವ ಬಂಡವಾಳಶಾಹಿಗಳು ಕೃಷಿಯೇತರ ಕಾರ್ಯಗಳಿಗೆ ಭೂಮಿಯನ್ನು ಬಳಕೆ ಮಾಡುತ್ತಾರೆ. ಇದನ್ನು ನಿರ್ಬಂಧಿಸುವ ಯಾವ ನಿಯಮಗಳು ತಿದ್ದುಪಡಿಯಲ್ಲಿ ಇಲ್ಲ.
ಈ ವಿಚಾರವನ್ನು ಪ್ರಸ್ತಾಪಿಸಿದರೆ ಭೂಮಿ ಖರೀದಿಗೆ ಇದ್ದ ಕೃಷಿಯೇತರ ಆದಾಯದ ಮಿತಿಯನ್ನು 25 ಲಕ್ಷ ರೂಪಾಯಿಗೆ ಏರಿಕೆ ಮಾಡಿದ್ದು ಸಿದ್ದರಾಮಯ್ಯ ಅಂತಾರೆ. ನಮ್ಮ ಸರ್ಕಾರ ಕೃಷಿಯಲ್ಲಿ ತೊಡಗಿಕೊಂಡಿರುವ ರೈತರ ಕೃಷಿಯೇತರ ಆದಾಯ ಮಿತಿಯನ್ನು ಮಾತ್ರ ಏರಿಕೆ ಮಾಡಿತ್ತೇ ಹೊರತು, ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ.