ಮುಖ್ಯಮಂತ್ರಿಗಳ ವಿರುದ್ಧ ಕೀಳು ಭಾಷೆ ಬಳಸಿದ ಈಶ್ವರಪ್ಪ
ಬೈಂದೂರು, ಮಾರ್ಚ್ 05: ತಮ್ಮ ಬಿಡುಬೀಸು ಮಾತಿಗೆ ಹೆಸರಾದ ಬಿಜೆಪಿ ರಾಜ್ಯಸಭಾ ಸದಸ್ಯ ಕೆ.ಎಸ್.ಈಶ್ವರಪ್ಪ ಅವರು ಇಂದು ಮುಖ್ಯಮಂತ್ರಿಗಳನ್ನು ಕೆಳ ಮಟ್ಟದ ಭಾಷೆ ಬಳಸಿ ಟೀಕಿಸಿದ್ದಾರೆ.
ಬೈಂದೂರಿನಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ 'ಸುರಕ್ಷಾ ಯಾತ್ರೆ'ಯಲ್ಲಿ ರೋಷಾವೇಶದಿಂದ ಮಾತನಾಡಿದ ಅವರು ಮುಖ್ಯಮಂತ್ರಿಗಳಿಗೆ ಗಂಡಸ್ತನದ ಬಗ್ಗೆ ಮಾತನಾಡಿ ಸವಾಲು ಹಾಕಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೇರಲು ಈಶ್ವರಪ್ಪ ಸೂಪರ್ ಮಾಸ್ಟರ್ ಪ್ಲಾನ್
'ಮಠ ಮಾನ್ಯಗಳ ಬಗ್ಗೆ ಇಷ್ಟ ಬಂದ ಹಾಗೆ ನಿರ್ಣಯ ತೆಗೆದುಕೊಳ್ಳುವ ಸಿದ್ದರಾಮಯ್ಯ ಅವರೇ ಮುಸ್ಲಿಂ ಧಾರ್ಮಿಕ ಕೇಂದ್ರಗಳ ವಿಚಾರ ಬಂದಾಗ ನಿಮ್ಮ ಗಂಡಸುತನ ಎಲ್ಲಿ ಹೋಗಿರುತ್ತದೆ?' ಎಂದು ಪ್ರಶ್ನೆ ಮಾಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೇ 'ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ' ಎಂದಿರುವ ಈಶ್ವರಪ್ಪ ಅವರು ತಮ್ಮ ನಾಲಗೆಯನ್ನು ಇನ್ನೂ ಹರಿಬಿಟ್ಟು 'ಸಿದ್ದರಾಮಯ್ಯ ಅವರ ಮೈಯಲ್ಲಿ ಟಿಪ್ಪು ಸುಲ್ತಾನನ ರಕ್ತ ಹರಿಯುತ್ತಿದೆ' ಎಂದಿದ್ದಾರೆ.
ಬಿಜೆಪಿಯ ಯುವ ಕಾರ್ಯಕರ್ತರೆ ಹೆಚ್ಚು ತುಂಬಿದ್ದ ಕಾರ್ಯಕ್ರಮದಲ್ಲಿ ಚಪ್ಪಾಳೆ, ಶಿಳ್ಳುಗಳನ್ನು ಗಿಟ್ಟಿಸಿಕೊಳ್ಳುವ ಭರದಲ್ಲಿ ಈಶ್ವರಪ್ಪ ಅವರು ಆಕ್ಷೇಪಾರ್ಹ ಪದಗಳನ್ನು ಬಳಸಿ ಭಾಷಣ ಮಾಡಿದರು. ಚಿಂತಕರ ಚಾವಡಿ ಎಂದು ಕರೆಯಲಾಗುವ ವಿಧಾನಪರಿಷತ್ ಸದಸ್ಯ ತಾವು ಎಂಬುದನ್ನು ಮರೆತಂದಿದ್ದ ಈಶ್ವರಪ್ಪ ಅವರು, ಸಂವಿಧಾನಿಕ ಸ್ಥಾನದಲ್ಲಿರುವ ವ್ಯಕ್ತಿಯನ್ನು ಅಯೋಗ್ಯನೆಂದು, ಗಂಡಸುತನ ಇಲ್ಲದವನೆಂದು ಜರಿದರು.
ಈಶ್ವರಪ್ಪ ಅವರು ಈ ಮುಂಚೆಯೂ ಈ ರೀತಿಯ ಹೇಳಿಕೆಗಳನ್ನು ನೀಡಿ ಪೇಚಿಗೆ ಸಿಲುಕಿದ್ದರು ಪಕ್ಷವನ್ನೂ ಪೇಚಿಗೆ ಸಿಲುಕಿಸಿದ್ದರು.