ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಸಿಕ್ತು ಬ್ರಹ್ಮಾಸ್ತ್ರ!
ಬೆಂಗಳೂರು, ನವೆಂಬರ್ 09; ಕರ್ನಾಟಕ ರಾಜಕಾರಣದಲ್ಲಿ ಹೊಸ ಬೆಳವಣಿಗೆಯಾಗಿದೆ. ಇದುವರೆಗೆ ರಾಜ್ಯ ಸರ್ಕಾರದ ವಿರುದ್ಧ ಅರ್ಥಾತ್ ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾಡಿದ ಹೋರಾಟಗಳು ಹೊಳೆ ನೀರಿನಲ್ಲಿ ಹುಣಸೆ ಹಣ್ಣು ಕಿವುಚಿದಂತಾಗಿದೆ. ಇದುವರೆಗೆ ಪೇ ಸಿಎಂ, ಸೇ ಸಿಎಂ ಸೇರಿದಂತೆ ಹಲವು ಅಭಿಯಾನಗಳನ್ನು ಮಾಡಿಕೊಂಡು ಬಂದಿದ್ದ ಕಾಂಗ್ರೆಸ್ ನಾಯಕರ ಪರಿಸ್ಥಿತಿ ಈಗ ಕೋಲು ಕೊಟ್ಟು ಹೊಡೆಸಿಕೊಂಡಂತಾಗಿದೆ.
ಇಷ್ಟಕ್ಕೂ ಆಗಿದ್ದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ನೀಡಿದ ಅದೊಂದು ಹೇಳಿಕೆ. ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆ ಕಾಂಗ್ರೆಸ್ ನಾಯಕರ ಪಾಲಿಗೆ ತಲೆನೋವಾಗಿ ಪರಿಣಮಿಸಿದರೂ ಬಿಜೆಪಿಗೆ ಮಾತ್ರ ಬ್ರಹ್ಮಾಸ್ತ್ರವಾಗಿದೆ. ಕಾಂಗ್ರೆಸ್ ನಾಯಕರ ಹಿಂದೂ ವಿರೋಧಿ ಧೋರಣೆಯನ್ನೇ ಬಿಜೆಪಿ ಚುನಾವಣಾ ಅಸ್ತ್ರ ಮಾಡಿಕೊಂಡು ಇಲ್ಲಿವರೆಗೆ ಬಂದಿದೆ.
Recommended Video
ಬಿಜೆಪಿ ಭದ್ರಕೋಟೆ ಕೊಡಗು, ಹಾಲಿ ಶಾಸಕರಿಗಿಲ್ಲ ಟಿಕೆಟ್ ಚಿಂತೆ!
ಅಧಿಕಾರದಲ್ಲಿದ್ದ ಕಾಂಗ್ರೆಸ್ ಸೋಲು ಕಾಣಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಕಾರಣವಾಗಿತ್ತು. ಸಿದ್ದರಾಮಯ್ಯ ಅವರ ಹೇಳಿಕೆಗಳು, ಕೆಲವು ನಿರ್ಧಾರಗಳು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸಹಕಾರಿಯಾಗಿತ್ತು. ಅದಾದ ನಂತರವೂ ರಾಜ್ಯದಲ್ಲಿ ನಡೆದ ಕೆಲವೊಂದು ಧರ್ಮಕ್ಕೆ ಸಂಬಂಧಿಸಿದ ಘಟನೆಗಳು ಮತ್ತು ಅದಕ್ಕೆ ಕಾಂಗ್ರೆಸ್ನ ಕೆಲವು ನಾಯಕರು ನೀಡಿದ ಪ್ರತಿಕ್ರಿಯೆಗಳು ಹಿಂದೂ ವಿರೋಧಿ ಹೇಳಿಕೆ ಎಂಬಂತೆ ಬಿಜೆಪಿ ನಾಯಕರು, ಹಿಂದೂಪರ ಸಂಘಟನೆಗಳ ಮುಖಂಡರು ಖಂಡಿಸಿದ್ದರು.
ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಕಾಂಗ್ರೆಸ್ ವರಿಷ್ಠರಿಗೆ ಸಲಹೆ ನೀಡಿದ ಸಿದ್ದರಾಮಯ್ಯ
ಚುನಾವಣೆ ಸಂದರ್ಭದಲ್ಲಿ ಧರ್ಮ ಮತ್ತು ಭಾವನಾತ್ಮಕ ವಿಚಾರವನ್ನು ಬಳಸಿಕೊಂಡು ಮತದಾರರನ್ನು ಸೆಳೆಯುವಲ್ಲಿ ಬಿಜೆಪಿ ನಾಯಕರು ನಿಸ್ಸೀಮರು ಎಂಬುದಾಗಿ ಕೆಲವು ಕಾಂಗ್ರೆಸ್ ಮುಖಂಡರೇ ಹೇಳಿಕೊಂಡು ಬರುತ್ತಿದ್ದರು. ಆದರೆ ಈಗ ಸತೀಶ್ ಜಾರಕಿಹೊಳಿ ಅವರ ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ ಎಂಬ ಹೇಳಿಕೆ ರಾಜ್ಯ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಜತೆಗೆ ಇದನ್ನು ಚುನಾವಣೆ ಅಸ್ತ್ರವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ ಹಿಂದೆ ಬಿದ್ದಿಲ್ಲ. ಈಗಾಗಲೇ ಪ್ರತಿಭಟನೆಗಳು ಶುರುವಾಗಿವೆ.
'ಹಿಂದೂ' ಪದದ ಹೇಳಿಕೆ ಕುರಿತು ಸತೀಶ್ ಜಾರಕಿಹೊಳಿ ಸ್ಪಷ್ಟನೆ
ನುಣುಚಿಕೊಳ್ಳುತ್ತಿರುವ 'ಕೈ' ನಾಯಕರು
ಈಗಾಗಲೇ ಬೇರೆ ಧರ್ಮದ ವಿಚಾರದಲ್ಲಿ ಕಾಂಗ್ರೆಸ್ ತೆಗೆದುಕೊಂಡ ನಿಲುವುಗಳು ಮತ್ತು ಕಾಂಗ್ರೆಸ್ ನಾಯಕರ ವೀರಾವೇಶದ ಹೇಳಿಕೆಗಳನ್ನು ನೋಡಿರುವ ಜನ ಇದೀಗ ಕಾಂಗ್ರೆಸ್ ನಾಯಕರು ಅದು ವೈಯುಕ್ತಿಕ ಹೇಳಿಕೆ ಎಂಬಂತೆ ಮೌನವಾಗಿಯೇ ತಿಪ್ಪೆ ಸಾರುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಈ ದ್ವಿಮುಖ ನೀತಿಯಿಂದಲೇ ಎಲ್ಲೋ ಒಂದು ಕಡೆ ಕಾಂಗ್ರೆಸ್ ನೆಲಕಚ್ಚಲು ಕಾರಣಾಗಿದೆ ಎಂದರೆ ತಪ್ಪಾಗಲಾರದು.
ಕಾಂಗ್ರೆಸ್ ನಲ್ಲಿಯೇ ಅಸಮಾಧಾನ
ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಿದ ತಕ್ಷಣಕ್ಕೆ ಇತರೆ ಧರ್ಮದವರ ಸಿಂಪತಿ ಗಿಟ್ಟಿಸಿಕೊಳ್ಳಬಹುದು ಅದನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸಿಕೊಳ್ಳಬಹುದು ಎಂಬ ಲೆಕ್ಕಾಚಾರಗಳು ಕೆಲವು ನಾಯಕರ ತಲೆಯಲ್ಲಿದೆ. ಹೀಗಾಗಿಯೇ ಅವರು ಗೊತ್ತಿದ್ದೋ ಗೊತ್ತಿಲ್ಲದೆಯೋ ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಆದರೆ ಈ ಬಾರಿ ಶಾಸಕ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗೆ ಪಕ್ಷದಲ್ಲಿಯೇ ಅಸಮಾಧಾನ ಶುರುವಾಗಿದೆ.
ಕೆಪಿಸಿಸಿ ಅಧ್ಯಕ್ಷರಿಗೆ ಹೊಸ ತಲೆನೋವು
ಧರ್ಮದ ವಿಚಾರದಲ್ಲಿ ಯಾವುದೇ ಪರ-ವಿರೋಧದ ಹೇಳಿಕೆ ನೀಡದೆ ಬ್ಯಾಲೆನ್ಸ್ ಮಾಡಿಕೊಂಡು ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಈಗ ತಲೆ ಕೆಡಿಸಿಕೊಳ್ಳುವಂತಾಗಿದೆ. ಸಿದ್ದರಾಮಯ್ಯ ಅವರು ಬಹಳಷ್ಟು ವಿಚಾರಗಳಲ್ಲಿ ಪರ ವಹಿಸಿಕೊಂಡು ಮಾತನಾಡುತ್ತಿದ್ದರಾದರೂ ಈಗ ತಾನೇನಾದರೂ ಮಾತನಾಡಿದರೆ ಅದು ಮತ್ತಷ್ಟು ವಿವಾದವಾಗಬಹುದು ಎಂಬ ಕಾರಣಕ್ಕೆ ತಮ್ಮದೇ ಪಕ್ಷದ ನಾಯಕನ ಪರ ನಿಲ್ಲದೇ ನುಣುಚಿಕೊಳ್ಳುತ್ತಿದ್ದಾರೆ. ಆದರೆ ಕೆಲವು ಕಾಂಗ್ರೆಸ್ ನಾಯಕರೇ ಈ ಹೇಳಿಕೆಯನ್ನು ಖಂಡಿಸಿದ್ದಾರೆ.
ಬಿಜೆಪಿಗೆ ಇದು ಚುನಾವಣಾ ಅಸ್ತ್ರನಾ?
ಹಾಗೆ ನೋಡಿದರೆ ಬಿಜೆಪಿ ಪಕ್ಷ ನಿಂತಿದ್ದೇ ಹಿಂದುತ್ವದ ಮೇಲೆ. ಹೀಗಿರುವಾಗ ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದರೆ ಸುಮ್ಮನಿರುತ್ತಾ? ಹೇಳಿಕೇಳಿ ಚುನಾವಣೆ ಹತ್ತಿರ ಬರುತ್ತಿದೆ. ಈ ಸಮಯದಲ್ಲಿ ಬಿಜೆಪಿ ಅದನ್ನು ಜೀವಂತವಾಗಿ ಇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷವೇ ಹಿಂದೂ ವಿರೋಧಿ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಲಿದೆ. ಇದೀಗ ರಾಜ್ಯದಾದ್ಯಂತ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಚರ್ಚೆಗಳು ಅಭಿಯಾನಗಳು ಆರಂಭವಾಗಿವೆ.
ಈ ವಿಚಾರವನ್ನು ಬಿಜೆಪಿ ಚುನಾವಣೆ ತನಕವೂ ಜೀವಂತವಾಗಿರಿಸಿಕೊಂಡರೆ, ಈಗ ಆಗಿರುವ ಅಘಾತದಿಂದ ಕಾಂಗ್ರೆಸ್ ಹೇಗೆ ಹೊರಗೆ ಬರುತ್ತದೆ ಎಂಬುದೇ ಕುತೂಹಲಕಾರಿಯಾಗಿದೆ. ಚುನಾವಣೆ ಹತ್ತಿರ ಬರುತ್ತಿದೆ. ಇನ್ನಾದರೂ ರಾಜಕೀಯ ನಾಯಕರು ಮಾತನಾಡುವಾಗ ಎಚ್ಚರಿಕೆ ವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.