ಬಾಂಬ್ ಸ್ಫೋಟ ಆಗಿದೆಯಾ? ಬೆದರಿಕೆ ಕರೆ ಬಂದ್ರೆ ಏನಾಯ್ತು? ಸಾಕಷ್ಟು ಬಾಂಬ್ ಕರೆಗಳು ಬರ್ತಾವೆ- ಸಚಿವ ಸತೀಶ್ ಜಾರಕಿಹೊಳಿ
ಹುಬ್ಬಳ್ಳಿ, ಡಿಸೆಂಬರ್, 02: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್ ಬಂದಿರುವ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿದ್ದು, ಈ ಸುದ್ದಿ ಸಿಬ್ಬಂದಿ, ಪೋಷಕರು ಸೇರಿದಂತೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಇನ್ನು ಹುಬ್ಬಳ್ಳಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಬಾಂಬ್ ಸ್ಫೋಟ ಆಗಿದೆಯಾ? ಕರೆ ಬಂದ್ರೆ ಏನಾಯ್ತು, ಅಂತಹ ಕರೆಗಳು ಸಾಕಷ್ಟು ಬರುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.
ಏನು ಆಗಿಲ್ಲ ಅಂತಾ ನಿನ್ನೆ ಸ್ಪಷ್ಟೀಕರಣವಾಗಿದೆ. ಅದ್ಯಾವುದೋ ಒಂದು ವಿಷಯಕ್ಕೆ ನಾವು ಇಷ್ಟೆಲ್ಲಾ ಸಮಯ ವ್ಯರ್ಥ ಮಾಡಿದರೆ ಹೇಗೆ?. ಅದಕ್ಕೆ ಸರ್ಕಾರ, ಪೊಲೀಸ್ ಇಲಾಖೆ ಇದೆ. ಬೇರೆ ಸಮಸ್ಯೆಗಳು ಸಾಕಷ್ಟಿವೆ. ಅದರ ಕುರಿತು ನಮಗೂ ಹೇಳುವುದಕ್ಕೆ ಬರಲ್ಲ.ವಿರೋಧ ಪಕ್ಷದವರದ್ದು ಸಮಸ್ಯೆ, ನಮ್ಮದು ಸಮಸ್ಯೆ. ಇದರಿಂದ ಕೊನೆಗೆ ಜನರು ಗೊಂದಲದಲ್ಲಿ ಸಿಲುಕುತ್ತಾರೆ ಎಂದರು.

ಲೋಕಸಭಾ ಚುನಾವಣೆ ಸಿದ್ಧತೆ ಕುರಿತು ಪ್ರತಿಕ್ರಿಯಿಸಿ, ಈಗಾಗಲೇ ನಮ್ಮ ಪಕ್ಷದಿಂದ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಆಕಾಂಕ್ಷಿಗಳ ಪಟ್ಟಿ ಕಳುಹಿಸಿದ ನಂತರ ಹೈಕಮಾಂಡ್ ಅಂತಿಮಗೊಳಿಸುತ್ತದೆ ಎಂದರು. ಇನ್ನು ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ವಿಚಾರವಾಗಿ ಪ್ರಕತಿಕ್ರಿಯಿಸಿ, ಬರಗಾಲದ ಚರ್ಚೆ ಆಗುತ್ತದೆ, ಅದಕ್ಕೆ ಪ್ರಶ್ನೆ ಇಲ್ಲ. ನಮ್ಮ ಕ್ಷೇತ್ರದ್ದು ಅಥವಾ ಜಿಲ್ಲೆಯದ್ದು ಚರ್ಚೆ ಮಾಡಿದರೆ ಅದಕ್ಕೆ ಸರ್ಕಾರ ಉತ್ತರ ಕೊಡುತ್ತದೆ ಎಂದರು.
ಲೋಕೋಪಯೋಗಿ ಇಲಾಖೆ ಸಂಬಂಧಪಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಲಾ ಮಕ್ಕಳಿಗೆ ಅನುಕೂಲಕ್ಕೆ ಕಾಲುಸಂಕ ಅಂತಾ 100 ಕಿರುಸೇತುವೆ ಗಳನ್ನು ಮಾಡುತ್ತಿದ್ದೇವೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನು 400 ಮಾಡುತ್ತೇವೆ. ಇದು ನಮ್ಮ ಇಲಾಖೆಯ ಬಹಳ ದೊಡ್ಡ ಸಾಧನೆ. ಲೋಕೋಪಯೋಗಿ ಇಲಾಖೆಯ ಬಿಲ್ ಬಾಕಿ ಇದೆ. ಅದಕ್ಕೆ ನಾವು ಹೊಣೆಗಾರರಲ್ಲ. ಕೊಡುವ ಜವಾಬ್ದಾರಿ ನಮ್ಮದು ಕೊಡುತ್ತೇವೆ. ಅದಕ್ಕೆ ನಾವು ಹೊಣೆಗಾರರಲ್ಲ ಎಂದರು.
ಹಿಂದಿನವರು 4,000 ಕೋಟಿ ಹೆಚ್ಚಿಗೆ ಮಾಡಿಟ್ಟು ಹೋಗಿದ್ದಾರೆ. ಅದಕ್ಕೆ ಎಲ್ಲಿಂದ ತರುವುದು ನಾವು. ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು. ಹೆಚ್ಚಿಗೆ ಕೊಡಿ ಅಂತಾ ಕೇಳಿದಾಗ ಅದು ಪರಿಹಾರ ಆಗುತ್ತದೆ. ಲೋಕೋಪಯೋಗಿ ಇಲಾಖೆ ಸಿಬ್ಬಂದಿಯ ವೇತನ ಆಗುತ್ತಿಲ್ಲ ಅಂತಾ ಯಾರು ಹೇಳಿದರು ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ಹೊರಹಾಕಿದರು.
ಬೆಳಗಾವಿ ರಾಜಕಾರಣದ ಬಗ್ಗೆ ಮಾತನಾಡಿದ ಅವರು, ನಾವು ಹೊಂದಾಣಿಕೆಯಿಂದ ಇದ್ದೇವೆ. ಮುಂದೆ ಏನಾದರೂ ಕೂಡ ನಾವು ಅದನ್ನು ಚರ್ಚೆ ಮಾಡಿ ಬಗೆಹರಿಸುತ್ತೇವೆ. ಅದರ ಬಗ್ಗೆ ಸಭೆ ಮಾಡಿ ಹೈಕಮಾಂಡ್ಗೆ ಲಿಸ್ಟ್ ಕೊಡುತ್ತೇವೆ ಎಂದರು.












Click it and Unblock the Notifications