'ಹಿಂದೂ' ಪದದ ಹೇಳಿಕೆ ಕುರಿತು ಸತೀಶ್ ಜಾರಕಿಹೊಳಿ ಸ್ಪಷ್ಟನೆ
ಬೆಳಗಾವಿ, ನವೆಂಬರ್ 07: ಹಿಂದೂ ಪದದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ತಾವು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಅವರು, ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.
ಹಿಂದೂ ಎಂಬ ಪದವು ಪರ್ಷಿಯನ್ ಭಾಷೆಗೆ ಸಂಬಂಧಿಸಿದ್ದಾಗಿದೆ ಎಂಬುದನ್ನು ನಾನು ಭಾಷಣದಲ್ಲಿ ಉಲ್ಲೇಖಿಸಿದ್ದೇನೆ. ಈ ಕುರಿತು ಹಲವಾರು ಪುಸ್ತಕಗಳು, ಪತ್ರಿಕೆಗಳಲ್ಲಿಯೂ ಉಲ್ಲೇಖವಾಗಿದೆ. ಹಿಂದೂ ಪದವು ಪರ್ಷಿಯನ್ ಭಾಷೆಯಿಂದ ಬಂದಿದ್ದು, ಅದರ ಕುರಿತು ಚರ್ಚೆ ನಡೆಯಬೇಕಿದೆ ಎಂಬುದಾಗಿ ಹೇಳಿರುವ ಬಗ್ಗೆ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಹಾಗಿದ್ದರೆ ಹಿಂದೂ ಧರ್ಮದ ಬಗ್ಗೆ ಸತೀಶ್ ಜಾರಕಿಹೊಳಿ ನೀಡಿದ್ದ ಹೇಳಿಕೆ ಏನು? ಆ ಹೇಳಿಕೆಯು ವಿವಾದವಾಗಿ ಬೆಳೆದಿದ್ದು ಹೇಗೆ? ಮಾಧ್ಯಮಗಳ ವರದಿ ಮತ್ತು ತಮ್ಮ ಭಾಷಣದ ಉಲ್ಲೇಖದ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ ನೀಡಿರುವ ಸ್ಪಷ್ಟನೆಯಲ್ಲಿ ಏನಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ನಾನು ಉಲ್ಲೇಖಿಸಿರುವುದರಲ್ಲಿ ತಪ್ಪಿಲ್ಲ ಎಂದ ಜಾರಕಿಹೊಳಿ
ನಾನು ಹಿಂದೂ ಪದದ ಬಗ್ಗೆ ನೀಡಿರುವ ಹೇಳಿಕೆ ಕುರಿತು ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ವಿಮರ್ಶೆ, ಟೀಕೆ-ಟಿಪ್ಪಣಿಗಳನ್ನು ಮಾಡಲಾಗುತ್ತಿದೆ. ಆದರೆ ನಿನ್ನೆಯ ಭಾಷಣದಲ್ಲಿ ನಾನು ಹೇಳಿದ್ದು ಬೇರೆ ರೀತಿಯಾಗಿದೆ. ಹಿಂದೂ ಶಬ್ದವು ಪರ್ಷಿಯನ್ ಭಾಗದಿಂದ ಬಂದಿರುವ ಬಗ್ಗೆ ಉಲ್ಲೇಖಿಸಿದ್ದು ನಿಜ. ಆನಂತರದಲ್ಲಿ ಇದರ ಬಗ್ಗೆ ಸಂಪೂರ್ಣ ಚರ್ಚೆಯಾಗಬೇಕು ಎಂದು ಹೇಳಿದೆ. ಈ ರೀತಿ ದೇಶಾದ್ಯಂತ ಸಾವಿರಾರು ಭಾಷಣಗಳು ನಡೆದಿವೆ. ಆದರೆ ನನ್ನ ಭಾಷಣವನ್ನು ಹೆಚ್ಚಾಗಿ ತೋರಿಸುತ್ತಿರುವುದು, ಈ ಕುರಿತು ಸ್ಪಷ್ಟನೆ ನೀಡುವುದು ನನ್ನ ಕರ್ತವ್ಯವಾಗಿದೆ.
ಯಾವುದೇ ಹಿಂದೂ ಧರ್ಮವಿರಲಿ, ಪಾರ್ಸಿಯಿರಲಿ, ಇಸ್ಲಾಂ ಇರಲಿ, ಬೌದ್ಧ ಇರಲಿ, ಜೈನ ಇರಲಿ ಅದನ್ನು ಮೀರಿ ಬೆಳೆಯಬೇಕಾದ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಹೀಗಾಗಿ ನಾನು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಪರ್ಷಿಯನ್ ಶಬ್ಧದಿಂದ ಬಂದಿರುವುದಕ್ಕೆ ನೂರಾರು ಸಾಕ್ಷ್ಯಗಳಿವೆ. ಅದರಲ್ಲಿ ಮುಖ್ಯವಾಗಿ ಆರ್ಯ ಸಮಾಜದ ಸಂಸ್ಥಾಪಕರಾದ ದಯಾನಂದ ಸರಸ್ವತಿ ರಚಿಸಿರುವ ಸತ್ಯಾರ್ಥ ಪ್ರಕಾಶ ಪುಸ್ತಕದಲ್ಲಿ ಉಲ್ಲೇಖವಿದೆ. ಅದೇ ರೀತಿ ಡಾ. ಜಿಎಸ್ ಪಾಟೀಲ್ ಬರೆದಿರುವ ಬಸವ ಭಾರತ ಪುಸ್ತಕದಲ್ಲಿಯೂ ಇದೆ. ಬಾಲಗಂಗಾಧರ ತಿಲಕ ಅವರ ಕೇಸರಿ ಪತ್ರಿಕೆಯಲ್ಲೂ ಉಲ್ಲೇಖವಿದೆ. ಇದು ಕೇವಲ ಉದಾಹರಣೆಯಷ್ಟೇ, ಇಂಥ ನೂರಾರು ಸಾವಿರಾರು ಉದಾಹರಣೆಗಳು ನಿಮಗೆ ಸಿಗುತ್ತವೆ.

ಮಾಧ್ಯಮ ವರದಿಗಳನ್ನೇ ಪ್ರಶ್ನೆ ಮಾಡಿದ ಸತೀಶ್ ಜಾರಕಿಹೊಳಿ
ಉಕ್ರೇನ್-ರಷ್ಯಾ ಮತ್ತು ಸರ್ಜಿಕಲ್ ಸ್ಟೈಕ್ ಮಾದರಿಯಲ್ಲಿ ಸುದ್ದಿಯನ್ನು ಬಿತ್ತರಿಸುತ್ತಿವೆ. ಡಿಕೆ ರವಿ ಹತ್ಯೆ, ಡಿಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ, ವಿನಾಯಕ್ ಬಾಳಿಗಾ ಹತ್ಯೆ ಮತ್ತು ಶಿವಮೊಗ್ಗದ ಹರ್ಷ ಹತ್ಯೆ ಪ್ರಕರಣವಿರಬಹುದು, ಪರೇಶ್ ಮೇಸ್ತಾ ಪ್ರಕರಣದಲ್ಲಿ ಇಡೀ ಕರಾವಳಿ ಭಾಗವೇ ಹೊತ್ತಿ ಉರಿಯಿತು. ದಯವಿಟ್ಟು ನೈಜ ಸುದ್ದಿಗಳನ್ನು ತೋರಿಸುವುದಕ್ಕೆ ತಾವು ಪ್ರಯತ್ನಿಸಿ. ಅನವಶ್ಯಕವಾಗಿ ಹಿಂದೂ ಧರ್ಮದ ವಿಷಯದಲ್ಲಿ ಈ ರೀತಿ ಸುದ್ದಿ ಮಾಡುವುದು ತರವಲ್ಲ. ಹಿಂದೂಗಳ ಕೊಲೆಯಾದರೆ ಅದಕ್ಕೆ ವಿಶೇಷ ಸ್ಥಾನಮಾನ, ದಲಿತರು ತೀರಿ ಹೋದಾಗ ಅದಕ್ಕೆ ಯಾವುದೇ ಸ್ಥಾನಮಾನವಿಲ್ಲ, ಇದು ನಿಲ್ಲಬೇಕು ಎಂದು ಮನವಿ ಮಾಡಿಕೊಂಡರು.

ದಯವಿಟ್ಟು ದೊಡ್ಡ ಅಪರಾಧದ ರೀತಿ ಬಿಂಬಿಸಬೇಡಿ
ನನಗೆ ಎಲ್ಲಾ ಧರ್ಮಗಳೂ ಅಷ್ಟೇ. ಯಾವುದೇ ಧರ್ಮ ಮತ್ತು ಜಾತಿಯನ್ನು ನಂಬದೇ ಇರುವಂತಹ ವ್ಯಕ್ತಿ ನಾನು. ಜಾತಿ-ಧರ್ಮಗಳಿಂದ ಬಹಳ ದೂರವಿರುವ ವ್ಯಕ್ತಿಯಾಗಿದ್ದೇನೆ. ಹೀಗಾಗಿ ಈ ರೀತಿಯ ಬಿಂಬಿಸುವುದು ಸೂಕ್ತವಲ್ಲ. ಇನ್ನೊಂದು ಬಾರಿ ನನ್ನ ಭಾಷಣವನ್ನು ಕೇಳಿ ನಂತರದಲ್ಲಿ ನಿಮ್ಮ ಚರ್ಚೆಯನ್ನು ಮುಂದುವರಿಸಿರಿ. ಏನು ನೀವು ವಿದ್ವಾಂಸರನ್ನು ಕರೆಸಿ ಅದರ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ, ಅದನ್ನು ಮುಂದುವರಿಸಬಹುದು. ಅದನ್ನು ಯಾರಿಗೋ ಲಾಭವಾಗಲು ನೀವು ಮಾಡುತ್ತಿದ್ದೀರೋ ಅದು ಖಂಡಿತವಾಗಿಯೂ ಲಾಭವನ್ನು ತಂದು ಕೊಡುವುದಿಲ್ಲ ಎಂದರು.

ವಿಕಿಪೀಡಿಯಾವನ್ನು ಒಮ್ಮೆ ಚೆಕ್ ಮಾಡಿ
ನನ್ನ ಭಾಷಣವನ್ನು ಸರಿಯಾಗಿ ಒಮ್ಮೆ ಕೇಳಿ ಅದರಲ್ಲಿ ತಪ್ಪಿದ್ದರೆ ನಿಮ್ಮ ವಿದ್ವಾಂಸರನ್ನು ಇಟ್ಟುಕೊಂಡು ಚರ್ಚೆಯನ್ನು ಮುಂದುವರಿಸಿ. ಇಲ್ಲದಿದ್ದರೆ ಇದನ್ನು ಇಲ್ಲಿಗೆ ನಿಲ್ಲಿಸಿ ಬಿಡಿ. ಹಾಗೆ ಮಾಡದಿದ್ದರೆ, ನಾವು ಕೂಡ ಮಾಧ್ಯಮಗಳ ವಿರುದ್ಧ ಮಾನಹಾನಿ ಮೊಕದ್ದಮೆ ಹಾಗೂ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸತೀಶ್ ಜಾರಕಿಹೊಳಿ ತಮ್ಮ ಸ್ಪಷ್ಟನೆ ಸಂದರ್ಭದಲ್ಲಿ ಉಲ್ಲೇಖಿಸಿದರು.
ನಾನು ಯಾವುದೇ ಧರ್ಮ ಅಥವಾ ಭಾಷೆಗೆ ಅವಮಾನ ಮಾಡಿರುವ ಬಗ್ಗೆ ಪ್ರಶ್ನೆಯೇ ಇಲ್ಲ. ಅದು ಪದವು ಪರ್ಷಿಯನ್ ಎಂದು ಹೇಳಿದ್ದೇನೆ. ವಿಕಿಪೀಡಿಯಾ ಎಂಬ ಸಂಸ್ಥೆಯಲ್ಲೂ ಈ ಅಂಶವಿದ್ದು, ಅದರ ಕುರಿತು ಚರ್ಚೆಯಾಗಲಿ ಎಂದು ಹೇಳಿದ್ದೇನೆ. ಇದರ ಹೊರತಾಗಿ ಅದು ಸತೀಶ್ ಜಾರಕಿಹೊಳಿಯ ಮಾತಾಗಿರಲಿಲ್ಲ. ಅದನ್ನು ನೀವು ಎಲ್ಲೆಲ್ಲಿಗೋ ಕಲ್ಪನೆ ಕೊಡುತ್ತಿದ್ದೀರಾ ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದರು.

ವಿವಾದ ಎಂದು ಹೇಳಲಾದ ಹೇಳಿಕೆಯಲ್ಲಿ ಏನಿದೆ?
ಹಿಂದೂ ಪದದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆಯು ವಿವಾದವಾಗಿ ಚರ್ಚೆ ಆಗುತ್ತಿತ್ತು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಪದಕ್ಕೆ ಅಸಭ್ಯವಾದ ಅರ್ಥವಿದೆ ಎಂದಿದ್ದರು. "ಹಿಂದೂ ಎಂಬ ಪದವು ಎಲ್ಲಿಂದ ಹುಟ್ಟಿತು? ಅದು ನಮ್ಮದೇ? ಇದು ಪರ್ಷಿಯನ್, ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಜಕಿಸ್ತಾನ್ ಪ್ರದೇಶದಿಂದ ಬಂದಿದೆ. ಹಿಂದೂ ಪದಕ್ಕೂ ಭಾರತಕ್ಕೂ ಏನು ಸಂಬಂಧ? ಹಾಗಾದರೆ ನೀವು ಅದನ್ನು ಹೇಗೆ ಒಪ್ಪಿಕೊಳ್ಳುತ್ತೀರಿ? ಇದರ ಬಗ್ಗೆ ಚರ್ಚೆಯಾಗಬೇಕು,'' ಎಂದು ಹೇಳಿದ್ದರು.












Click it and Unblock the Notifications