Belagavi Politics: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಡಿಸಿಎಂಗೆ ಜಾರಕಿಹೊಳಿ ಸವಾಲು: ಬಿಜೆಪಿ ವಾಗ್ದಾಳಿ
ಬೆಂಗಳೂರು, ಅಕ್ಟೊಬರ್ 20: ಕರ್ನಾಟಕ ಸರ್ಕಾರದಲ್ಲಿನ ಆಂತರಿಕ ಅಸಮಾಧಾನ ಇದೀಗ ಬೆಳಗಾವಿಯಲ್ಲಿ ಸ್ಪೋಟಿಸಿದ್ದು, ಈ ಕುರಿತು ಕರ್ನಾಟಕ ಬಿಜೆಪಿಯು ಕಾಂಗ್ರೆಸ್ನ ಕಾಲೆಳೆದಿದೆ. ಯಾವುದೇ ಪುಕಾರು ಹಬ್ಬಿಸಿದರೂ ಸಹಿತ ಸತ್ಯವನ್ನು ಮರೆಮಾಚುವಂತಿಲ್ಲ ಎಂದು ಟೀಕಿಸಿದೆ.
ಸಚಿವ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಮೇಲಿನ ಅಸಮಾಧಾನ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಳಗಾವಿ ಭೇಟಿ ಕುರಿತು ಬಿಜೆಪಿ ಶುಕ್ರವಾರ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸೈಡ್ಲೈನ್ ಮಾಡಲು ಸತೀಶ್ ಜಾರಕಿಹೊಳಿಯವರು ಸರ್ಕಸ್ ನಡೆಸಿದ್ದಾರೆ ಬಿಜೆಪಿ ಹೇಳಿದೆ.

ಬೆಳಗಾವಿ ಕಾಂಗ್ರೆಸ್ ನಾಯಕರ ಒಳ ಜಗಳ ಇಡೀ #ATMSarkara ವನ್ನೇ ಬುಡ ಸಮೇತ ಅಲುಗಾಡಿಸುತ್ತಿದೆ. ಖಾಸಗಿ ವಿಚಾರಕ್ಕೆ ಬೆಳಗಾವಿಗೆ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅದೇನೇ ಪುಕಾರು ಹಬ್ಬಿಸಿದರೂ ಅಸಲಿ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದೆ.
ಹೆಬ್ಬಾಳ್ಕರ್ ವಿರುದ್ಧ "ಮೌನಂ ಕಲಹ ನಾಸ್ತಿ"
ಸಚಿವ ಸತೀಶ್ ಜಾರಕಿಹೊಳಿಯವರು ಬಹಿರಂಗವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ "ಮೌನಂ ಕಲಹ ನಾಸ್ತಿ" ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ. ಒಂದು ಕಡೆ ಜೈಲಿಗೆ ಹೋಗುವ ಭೀತಿಯಲ್ಲಿರುವ ಉಪಮುಖ್ಯಮಂತ್ರಿಗಳು ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಕೆಡವಿ ಪಕ್ಷವನ್ನು ಒಡೆದು ಹೋಗಲೇಬೇಕೆಂಬ ನಿರ್ಧಾರ ಮಾಡಿಕೊಂಡಂತಿದೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.

ಸದ್ಯ ಜನತೆ ಬೆಳಗಾವಿಯಲ್ಲಿನ ಬೆಳವಣಿಗೆಗಳತ್ತ ನೋಡುತ್ತಿದ್ದಾರೆ. ಆ ಭಾಗದ ಇಬ್ಬರು ಸಚಿವರಿಗೆ ಕಾಂಗ್ರೆಸ್ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ವರ್ತಿಸುತ್ತಿದೆ ಎಂದು ಆರೋಪಗಳು ಕೇಳಿ ಬಂದಿವೆ.
ಬೆಳಗಾವಿ ವಿಚಾರದಲ್ಲಿ ಲಕ್ಷ್ಮೀ ಹಸ್ತಕ್ಷೇಪ?
ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಕಾರಣದಿಂದಲೇ ಸಚಿವ ಸತೀಶ್ ಜಾರಕಿಹೊಳಿ ಅವರು ಸ್ವಪಕ್ಷದ ನಾಯಕ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಮೂಲಕ ಬಂಡಾಯದ ಬಿಸಿ ತಟ್ಟುವಂತೆ ಮಾಡಿದ್ದು, ಇದು ರಾಜ್ಯ ಸರ್ಕಾರ ತಲೆನೋವಾಗಿ ಪರಿಣಮಿಸಿದೆ.
ಬೆಳಗಾವಿ ವಿಚಾರದಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ಜಾರಕಿಹೊಳಿಯವರ ಶಿಫಾರಸು ಪರಿಗಣಿಸದೇ ಹೆಬ್ಬಾಳ್ಕರ್ ಅವರಿಗೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತಿದೆ ಎನ್ನಲಾಗಿದೆ. ಈ ಮೂಲಕ ರಾಜ್ಯ ಸರ್ಕಾರ ಹೆಬ್ಬಾಳ್ಕರ್ ಅವರನ್ನು ಪೋಷಿಸುತ್ತಿದೆ ಎಂಬ ಮಾತುಗಳು ಸತೀಶ್ ಜಾರಿಕಿಹೋಳಿ ಅವರ ಬಣದಿಂದ ಕೇಳಿ ಬಂದಿವೆ.
ಸತೀಶ್ ಜಾರಕಿಹೊಳಿ ಅವರ ಅಸಮಾಧಾನ ಬಹಿರಂಗಗೊಳ್ಳುತ್ತಿದ್ದಂತೆ ಶಮನಕ್ಕೆ ಮುಂದಾದ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೆಳಗಾವಿಗೆ ದೌಡಾಯಿಸಿದ್ದಾರೆ. ಆದರೆ ಇದನ್ನು ಒಪ್ಪಿಕೊಳ್ಳದ ಅವರು ಖಾಸಗಿ ವಿಚಾರಕ್ಕೆ ಬಂದಿರುವುದಾಗಿ ತಿಳಿಸಿದ್ದನ್ನು ಬಿಜೆಪಿ ಲೇವಡಿ ಮಾಡಿದೆ.












Click it and Unblock the Notifications