ಅಸೆಂಬ್ಲಿ ಚುನಾವಣೆ: ಕುಮಾರಸ್ವಾಮಿ ನಡೆಸಿದ ಸಮೀಕ್ಷೆ ಹೇಳೋದೇ ಬೇರೆ?
ಕೇಂದ್ರ ಮತ್ತು ರಾಜ್ಯ ಗುಪ್ತಚರದಳಗಳ ಮಾಹಿತಿ ಪ್ರಕಾರ ನಮ್ಮ ಪಕ್ಷ ಮುಂದಿದೆ, ಕಾಂಗ್ರೆಸ್ ಪಕ್ಷಕ್ಕೆ ಕಳೆದ ಬಾರಿ ಬಂದ ಸೀಟಿನ ಅರ್ಧದಷ್ಟೂ ಸೀಟು ಸಿಗುವುದಿಲ್ಲ.
ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಯಾವ ಪಕ್ಷ ಸದ್ಯದ ಮಟ್ಟಿಗೆ ಮುನ್ನಡೆ ಸಾಧಿಸಲಿದೆ ಎಂದು ಸಿಫೋರ್ ಸಂಸ್ಥೆ ಇತ್ತೀಚೆಗೆ ನೀಡಿದ ಸಮೀಕ್ಷಾ ಫಲಿತಾಂಶಕ್ಕೂ, ಜೆಡಿಎಸ್ ನಡೆಸಿದ ಸರ್ವೇಗೂ ಅಜಗಜಾಂತರದ ವ್ಯತ್ಯಾಸವಿದೆ.
ಈಗ ಚುನಾವಣೆ ನಡೆದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಿಫೋರ್ ನಡೆಸಿದ ಸಮೀಕ್ಷೆ, ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯನವರ ಕಚೇರಿಯಲ್ಲಿ ಕೂತು ನಡೆಸಿದ ಸಮೀಕ್ಷೆಯೇ ಹೊರತು, ರಾಜ್ಯಾದ್ಯಂತ ಜನರ ಅಭಿಪ್ರಾಯ ನಡೆಸಿ ಸಿದ್ದವಾದ ಸರ್ವೇಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅಮಿತ್ ಶಾ ಕರ್ನಾಟಕಕ್ಕೆ ಬಂದ ಕಾರಣ ಬಿಚ್ಚಿಟ್ಟ ಎಚ್ಡಿಕೆ
ಬೆಂಗಳೂರಿನಲ್ಲಿ (ಆ 23) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ನಮ್ಮ ಮೂಲಗಳಿಂದ ನಾವೂ ಸಮೀಕ್ಷೆ ನಡೆಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಯ ಸರ್ವೇಗೂ ನಮ್ಮ ಸರ್ವೇಗೂ ತಾಳೆಯಾಗುತ್ತಿದೆ.
ಕೇಂದ್ರ ಮತ್ತು ರಾಜ್ಯ ಗುಪ್ತಚರದಳಗಳ ಮಾಹಿತಿ ಪ್ರಕಾರ ನಮ್ಮ ಪಕ್ಷ ಮುಂದಿದೆ, ಕಾಂಗ್ರೆಸ್ ಪಕ್ಷಕ್ಕೆ ಕಳೆದ ಬಾರಿ ಬಂದ ಸೀಟಿನ ಅರ್ಧದಷ್ಟೂ ಸೀಟು ಸಿಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಿ ಫೋರ್ ಸಮೀಕ್ಷೆ: ಬರೀ ಬೊಗಳೆ ಎಂದ ಓದುಗರು
ಸಿಫೋರ್ ಸಂಸ್ಥೆಯ ಮುಖ್ಯಸ್ಥ ಪ್ರೇಮಚಂದ ಪಲೇಟಿ ಮತ್ತು ಕೆಂಪಯ್ಯ ಪರಮಾಪ್ತರು, ಹಾಗಾಗಿ ತಮಗೆ ಬೇಕಾದಂತೆ ಸಮೀಕ್ಷಾ ವರದಿಯನ್ನು ಸಿದ್ದಪಡಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಡಿ ಕೆ ಶಿವಕುಮಾರ್ ಪರವಾಗಿ ಮಾತನಾಡಿದ ಕುಮಾರಸ್ವಾಮಿ, ಮುಂದೆ ಓದಿ..
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ
2017ರ ಜುಲೈ 19ರಿಂದ ಆಗಸ್ಟ್ 10ರವರೆಗೆ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಭರ್ಜರಿ ಬಹುಮತ ಪಡೆಯಲಿದ್ದು, ಸ್ವಂತ ಬಲದಿಂದ ಅಧಿಕಾರಕ್ಕೇರಲಿದೆ ಎಂದು ಸಿ ಫೋರ್ ಸಂಸ್ಥೆ ಪ್ರಕಟಿಸಿತ್ತು.
ಸಿಫೋರ್ ನೀಡಿದ ಚುನಾವಣಾಪೂರ್ವ ಸಮೀಕ್ಷೆ
ಸಿಫೋರ್ ನೀಡಿದ ಸಮೀಕ್ಷೆಯಲ್ಲಿ ಕಾಂಗ್ರೆಸ್ 120 ರಿಂದ 132, ಬಿಜೆಪಿಗೆ 60 ರಿಂದ 72, ಜೆಡಿಎಸ್ 24ರಿಂದ 30 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ ಶೇ 43, ಬಿಜೆಪಿ ಶೇ 32 ಮತ್ತು ಜೆಡಿಎಸ್ ಶೇ 17 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಸರ್ವೇಯಲ್ಲಿ ತಿಳಿಸಿತ್ತು.
ಖಾಸಗಿವರಿಂದ ಮತ್ತು ಗುಪ್ತಚರ ವರದಿಯ ಪ್ರಕಾರ ಜೆಡಿಎಸ್ ಎಲ್ಲರಿಗಿಂತ ಮುಂದೆ
ಸರ್ವೇ ಬಗ್ಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ನಾವು ಖಾಸಗಿಯವರಿಂದ ನಡೆಸಿದ ಸಮೀಕ್ಷೆ ಮತ್ತು ಗುಪ್ತಚರ ವರದಿಯ ಪ್ರಕಾರ ಜೆಡಿಎಸ್ ಪಕ್ಷಕ್ಕೆ 113, ಕಾಂಗ್ರೆಸ್ಸಿಗೆ 24 ರಿಂದ 32 ಮತ್ತು ಬಿಜೆಪಿಗೆ 65 ರಿಂದ 70 ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಎಚ್ದಿಕೆ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಮನೆಯ ಮೇಲೆ ಆದಾಯ ತೆರಿಗೆ ದಾಳಿ
ಡಿ ಕೆ ಶಿವಕುಮಾರ್ ಮನೆಯ ಮೇಲೆ ಆದಾಯ ತೆರಿಗೆ ದಾಳಿಯ ವೇಳೆ ಏನೂ ಸಿಗಲಿಲ್ಲ. ಹಾಗಾಗಿ, ಬಿಜೆಪಿಯವರು ಅವರ ರಾಜೀನಾಮೆ ಕೇಳುವುದರಲ್ಲಿ ಅರ್ಥವಿಲ್ಲ. ಅಮಿತ್ ಶಾ ಹೇಳಿದಂತೆ ವರ್ತಿಸುವುದನ್ನು ಬಿಟ್ಟು ರಾಜ್ಯ ಬಿಜೆಪಿ ನಾಯಕರು ವಸ್ತುಸ್ಥಿತಿ ಅರಿತು ಮಾತನಾಡಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನನ್ನ ಮಗ ಇನ್ನೊಬ್ಬರ ಅಧೀನದಲ್ಲಿ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ
ಅತ್ತ ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಗೌಡ್ರು, ನನ್ನ ಮಗ ಇನ್ನೊಬ್ಬರ ಅಧೀನದಲ್ಲಿ ಕೆಲಸ ಮಾಡುವುದನ್ನು ನನ್ನ ಜೀವ ಇರುವವರೆಗೆ ಬಿಡುವುದಿಲ್ಲ. ಪೂರ್ಣ ಬಹುಮತ ಬಂದರೆ ಅಧಿಕಾರ ನಡೆಸುತ್ತೇವೆ, ಅರವತ್ತು ಎಪ್ಪತ್ತು ಸ್ಥಾನ ಸಿಕ್ಕಿದರೆ ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.