ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ ಎಂದ ಕಾಂಗ್ರೆಸ್ ನಾಯಕ: ವಿಜಯೇಂದ್ರ ಏನಂದ್ರು?
ಮೈಸೂರು, ಏಪ್ರಿಲ್ 22: ಈ ದೇಶಕ್ಕೆ ಹಿಡಿದಿರುವ ಶನಿ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿ. ಅದು ಬಿಟ್ಟು ಹೋಗಲಿ ಎಂದು ದೇವರಲ್ಲಿ ಕೈಮುಗಿದು ಬೇಡಿಕೊಂಡಿದ್ದೇವೆ ಎಂದು ಮಾಜಿ ಸ್ಪೀಕರ್ ರಮೇಶ್ಕುಮಾರ್ ಅವರ ಹೇಳಿಕೆ ಖಂಡನೀಯ. ಬಿಜೆಪಿ ಇದನ್ನು ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಅವರ ಯೋಗ್ಯತೆ ಅವರ ಕ್ಷೇತ್ರದ ಜನತೆಗೆ ಗೊತ್ತಿದೆ. ಹಾಗಾಗಿಯೇ ಅವರನ್ನು ಜನರು ಸೋಲಿಸಿದ್ದಾರೆ. ಆಚಾರವಿಲ್ಲದ ನಾಲಿಗೆ ಎಂಬಂತೆ ಅವರ ನಾಲಿಗೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು ಆರೂವರೆ ಕೋಟಿ ಜನರಿಗೆ ಮುಖ್ಯಮಂತ್ರಿ ಎಂಬುದನ್ನು ಮರೆತು ಈ ದೇಶದ ಗೌರವಾನ್ವಿತ ಪ್ರಧಾನಮಂತ್ರಿಗಳ ಕುರಿತು ಅವರು ನೀಡಿದ 'ಒಬ್ಬ ನಾಲಾಯಕ್ ಪ್ರಧಾನಮಂತ್ರಿ' ಎಂಬ ಉದ್ಧಟತನದ ಹೇಳಿಕೆ ನೀಡಿದ್ದು ಖಂಡನೀಯ ಎಂದರು. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಈ ದರಿದ್ರ ಕಾಂಗ್ರೆಸ್ ಸರಕಾರಕ್ಕೆ ಗ್ಯಾರಂಟಿ ಬಿಡಿ, ನಾಡಿನ ಮಹಿಳೆಯರಿಗೆ ರಕ್ಷಣೆ ಕೊಡಲಾಗದೆ ನಾಲಾಯಕ್ತನ ಪ್ರದರ್ಶನ ಮಾಡುತ್ತಿದೆ ಎಂದು ಆಕ್ಷೇಪಿಸಿದರು.
ಇಂಥ ನಾಲಾಯಕ್ ಸರಕಾರಕ್ಕೆ ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ಸೂಚಿಸಿದರು. ನೇಹಾ ಅವರ ಹತ್ಯೆ ಆದಾಗ ಮುಖ್ಯಮಂತ್ರಿ, ಯಾವುದೇ ಸಚಿವರು ಅವರ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಆ ಕುಟುಂಬಕ್ಕೆ ಧೈರ್ಯ ಹೇಳಿಲ್ಲ. ಅದರ ಬದಲಾಗಿ ತೇಜೋವಧೆಯ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಮುಖ್ಯಮಂತ್ರಿಗಳು ದುಶ್ಶಾಸನ ಪ್ರವೃತ್ತಿ ತೋರುತ್ತಿದ್ದಾರೆ ಎಂದು ಹೇಳಿದರು
ನಾಡಿನ ತಾಯಂದಿರು, ಹೆಣ್ಮಕ್ಕಳು ಕಾಂಗ್ರೆಸ್ಸಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದರು. ರಾಜ್ಯದ ಜನರು ಸಿಎಂ, ಗೃಹಸಚಿವರಿಂದ ಇಂಥ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡು ಆ ಕುಟುಂಬದ ತೇಜೋವಧೆ ಮಾಡುವ ನೀಚಕೃತ್ಯಕ್ಕೆ ಕಾಂಗ್ರೆಸ್ ಸರಕಾರ ಇಳಿದಿದೆ. ಇವರಿಗೆ ಧಿಕ್ಕಾರ, ಧಿಕ್ಕಾರ ಎಂದು ರಾಜ್ಯದ ಮಹಿಳೆಯರು ಕೂಗುತ್ತಿದ್ದಾರೆ ಎಂದು ವಿಜಯೇಂದ್ರ ಅವರು ವಿವರಿಸಿದರು.
ಕೊಲೆಗಡುಕರನ್ನು ಒದ್ದು ಒಳಗೆ ಹಾಕುವ ಬದಲಾಗಿ ಅವರಿಗೆ ರಕ್ಷಣೆ ಕೊಡುವ ಕೆಲಸವನ್ನು ರಾಜ್ಯದ ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.
ರಾಜ್ಯದಲ್ಲಿ ಮಿತಿಮೀರುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳು, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಹಾಗೂ ಹದಗೆಟ್ಟ ಕಾನೂನು ಸುವ್ಯವಸ್ಥೆ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕರೆಯನ್ವಯ ಬಿಜೆಪಿ ವತಿಯಿಮದ ರಾಜ್ಯದೆಲ್ಲೆಡೆ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಹಿಂದೂ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡದ ತುಘಲಕ್ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಓಲೈಕೆ ರಾಜಕಾರಣಕ್ಕಾಗಿ ಸಮಾಜಘಾತುಕ ಶಕ್ತಿಗಳನ್ನು ಬೆಂಬಲಿಸುವ ಹಾಗೂ ಹಿಂದೂಗಳ ರಕ್ಷಣೆಗೆ ಕಿಂಚಿತ್ತೂ ಕಾಳಜಿ ವಹಿಸದ ಕಾಂಗ್ರೆಸ್ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂಬ ಕರೆ ನೀಡಲಾಯಿತು.












Click it and Unblock the Notifications