ಕರ್ನಾಟಕ ಪೊಲೀಸರು ದೇಶದಲ್ಲೇ ಬೆಸ್ಟ್ ಎಂದ ಡಿ.ಕೆ.ಶಿವಕುಮಾರ್: ಆ ಕೆಲಸಕ್ಕೆ ಖಾಕಿ ಬೆನ್ನುತಟ್ಟಿದ ಸಿಎಂ
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆಯ ದಕ್ಷತೆ ಮತ್ತು ಕರ್ತವ್ಯ ನಿಷ್ಠೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ಲಾಘಿಸಿದ್ದಾರೆ. ಮಾದಕ ವಸ್ತು ಜಾಲದ (Drugs) ವಿರುದ್ಧ ಕರ್ನಾಟಕ ಪೊಲೀಸರು ಮಾಡಿರುವ ಸಾಧನೆ ಇಡೀ ದೇಶಕ್ಕೇ ಮಾದರಿ ಎಂದು ಬೆನ್ನುತಟ್ಟಿರುವ ಅವರು, ಇಲಾಖೆಗೆ ಬಲ ತುಂಬಲು ಹೊಸ ವಾಹನಗಳನ್ನು ಸಹ ವಿತರಣೆ ಮಾಡಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ವಿವಿಧ ಜಿಲ್ಲಾ ಘಟಕಗಳ ಬಳಕೆಗೆ ಅನುಕೂಲವಾಗುವಂತೆ 32 ಅತ್ಯಾಧುನಿಕ ಮೊಬೈಲ್ ಫೋರೆನ್ಸಿಕ್ ವ್ಯಾನ್ಗಳು ಹಾಗೂ 75 ಹೊಸ ಬೊಲೆರೋ ವಾಹನಗಳನ್ನು ರಸ್ತೆಗಿಳಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ರಕ್ಷಣೆಯಲ್ಲಿ ಗಡಿ ಕಾಯುವ ಸೈನಿಕನ ಪಾತ್ರ ಎಷ್ಟು ಮುಖ್ಯವೋ? ರಾಜ್ಯದೊಳಗಿನ ಶಾಂತಿ-ನೆಮ್ಮದಿಗೆ ಆರಕ್ಷಕರ ಪಾತ್ರ ಅಷ್ಟೇ ಮುಖ್ಯ. ಇವರಿಬ್ಬರ ನಿರಂತರ ಶ್ರಮದಿಂದಲೇ ದೇಶ ಮತ್ತು ರಾಜ್ಯದ ಜನತೆ ನೆಮ್ಮದಿಯಿಂದ ಇರುವಂತಾಗಿದೆ. ಇಂದು ಇಲಾಖೆಗೆ ಹಸ್ತಾಂತರಿಸಲಾಗಿರುವ ಹೊಸ ವಾಹನಗಳು ಪೊಲೀಸರ ಕರ್ತವ್ಯ ನಿರ್ವಹಣೆಗೆ ಹೆಚ್ಚಿನ ಶಕ್ತಿ ತುಂಬಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಗೆ ಮೆಚ್ಚುಗೆ
ಕರ್ನಾಟಕ ಪೊಲೀಸರು ಮಾದಕ ವಸ್ತುಗಳ ಪತ್ತೆ ಹಚ್ಚುವಿಕೆ ಮತ್ತು ಜಪ್ತಿ ಮಾಡುವಲ್ಲಿ ಮಾಡಿರುವ ಸಾಧನೆಯನ್ನು ಸಿಎಂ ಉಲ್ಲೇಖಿಸಿದರು. ರಾಜ್ಯ ಪೊಲೀಸ್ ಅಧಿಕಾರಿಗಳು ಈಗಾಗಲೇ ಸಾವಿರಾರು ಡ್ರಗ್ ಪೆಡ್ಲರ್ಗಳನ್ನು ಜೈಲಿಗಟ್ಟುವ ಮೂಲಕ ದಾಖಲೆ ಬರೆದಿದ್ದಾರೆ. ಕರ್ನಾಟಕ ಪೊಲೀಸರ ಕಾರ್ಯಕ್ಷಮತೆ ಮತ್ತು ತನಿಖಾ ಸಾಮರ್ಥ್ಯವನ್ನು ಇಡೀ ದೇಶವೇ ಇಂದು ಕೊಂಡಾಡುತ್ತಿದೆ. ಹಗಲಿರುಳೆನ್ನದೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಬೆನ್ನಿಗೆ ರಾಜ್ಯ ಸರ್ಕಾರ ಮತ್ತು ಜನತೆ ಸದಾ ಇರಲಿದ್ದಾರೆ ಎಂದು ಭರವಸೆ ನೀಡಿದರು.
ಅಪರಾಧ ತಡೆಗೆ ಹೊಸ ವಾಹನಗಳ ವಿತರಣೆ
ಇಂದು ವಿತರಿಸಲಾದ ಅತ್ಯಾಧುನಿಕ ಬೊಲೆರೋ ಹಾಗೂ ಫೋರೆನ್ಸಿಕ್ ವಾಹನಗಳು ಜಿಲ್ಲಾ ಮಟ್ಟದಲ್ಲಿ ತನಿಖಾ ಪ್ರಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸಲಿವೆ. ತಂತ್ರಜ್ಞಾನ ಆಧಾರಿತ ಈ ವಾಹನಗಳ ನೆರಕೆಯಿಂದ ಅಪರಾಧಿಗಳನ್ನು ಆದಷ್ಟು ಬೇಗ ಪತ್ತೆಹಚ್ಚಲು ಸುಲಭವಾಗಲಿದೆ. ಇದರೊಂದಿಗೆ ಸಾರ್ವಜನಿಕರಲ್ಲಿ ಪೊಲೀಸರ ಮೇಲಿರುವ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುವ ರೀತಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸಿಎಂ ಕಿವಿಮಾತು ಹೇಳಿದರು. ಈ ಸಮಾರಂಭದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಾಸಕ ರಿಜ್ವಾನ್ ಅರ್ಷದ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಇಲಾಖೆಯ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.













Click it and Unblock the Notifications