ಶ್ರೇಯಸ್ ಅಯ್ಯರ್ ನಾಯಕತ್ವದ ಬಗ್ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಅಸಮಾಧಾನ
Shreyas Iyer: ಶ್ರೇಯಸ್ ನಾಯಕತ್ವದಲ್ಲಿ ಟೀಮ್ ಇಂಡಿಯಾವು ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯ ಪಂದ್ಯಗಳಲ್ಲಿ ಸತತ ಸೋಲು ಕಾಣುತ್ತಾ ಬಂದಿದೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಅಯ್ಯರ್ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಇದೀಗ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಟಿ20 ಕ್ರಿಕೆಟ್ ತಂಡದ ನೂತನ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿರುವ ಶ್ರೇಯಸ್ ಅಯ್ಯರ್ ಅವರು ಸರಣಿ ಸೋಲಿನ ಬೆನ್ನಲ್ಲೇ ತೀವ್ರ ಟೀಕೆಗೆ ಒಳಗಾಗಿದೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಗಳಲ್ಲಿ ಭಾತರ ತಂಡವನ್ನು ಮುನ್ನಡೆಸಿದ್ದಾರೆ. ಇನ್ನೂ ಇಂದಿನ ಇಂಗ್ಲೆಂಡ್ ವಿರುದ್ಧ ಕೊನೆಯ 5ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವ ರೀತಿ ಪ್ರದರ್ಶನ ತೋರಲಿದೆ ಎಂಬುದು ಕುತೂಹಲವಾಗಿದೆ.

ಅಯ್ಯರ್ ನಾಯಕತ್ವದ ಬಗ್ಗೆ ಚರ್ಚೆ
ಇನ್ನೂ ಅಯ್ಯರ್ ನಾಯಕನಾಗಿ ತಮ್ಮ ಮೊದಲ ಸರಣಿ ಜಯಕ್ಕಾಗಿ ಇನ್ನೂ ಕಾಯುತ್ತಿದ್ದಾರೆ. ಸತತ ಸರಣಿ ಸೋಲುಗಳು ಅವರ ಆನ್-ಫೀಲ್ಡ್ ನಿರ್ಧಾರಗಳು ಮತ್ತು ತಂತ್ರಗಳ ಬಗ್ಗೆ ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತವು ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ಪರದಾಡಿದೆ.
ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಹೇಳಿದ್ದೇನು?
ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಮತ್ತು ಮಾಜಿ ಆಯ್ಕೆಗಾರರಾದ ಸಬಾ ಕರೀಮ್ ಅವರು ಅಯ್ಯರ್ ಅವರ ನಾಯಕತ್ವದ ನಿರ್ಧಾರಗಳನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಜಿಯೋಹಾಟ್ಸ್ಟಾರ್ನೊಂದಿಗೆ ಮಾತನಾಡಿದ ಅವರು, ಐಪಿಎಲ್ನಲ್ಲಿ ಶ್ರೇಯಸ್ ಅಯ್ಯರ್ ತೋರುತ್ತಿದ್ದ ಚಾಣಾಕ್ಷತನ ಮತ್ತು ತಂತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಶ್ರೇಯಸ್ ಅಯ್ಯರ್ ನಾಯಕನಾಗಿ ತನ್ನ ಪ್ರಭಾವವನ್ನು ಬೀರಬೇಕಾದ ಸಮಯ ಈಗ ಬಂದಿದೆ. ಐಪಿಎಲ್ನಲ್ಲಿ ನಾವು ಅವರಲ್ಲಿ ನೋಡಿದ ಅದ್ಭುತ ನಾಯಕತ್ವ ಇಲ್ಲಿ ಇನ್ನೂ ಕಾಣುತ್ತಿಲ್ಲ,' ಎಂದು ಕರೀಮ್ ಹೇಳಿದ್ದಾರೆ. ಬ್ರಿಸ್ಟಲ್ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಲೈನ್ ಅಪ್ ಕುರಿತು ಮಾತನಾಡಿದ ಅವರು, 'ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ತಿಲಕ್ ವರ್ಮಾ ಅವರ ಬದಲಿಗೆ ಶಿವಂ ದುಬೆ ಅವರನ್ನು 5ನೇ ಕ್ರಮಾಂಕದಲ್ಲಿ ಕಳುಹಿಸಿದ ನಿರ್ಧಾರ ಸರಿಯಲ್ಲ. ಐಪಿಎಲ್ನಲ್ಲಿ ಅಯ್ಯರ್ ಎಂದಿಗೂ ಇಂತಹ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ,' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಕೇವಲ ಮೈದಾನದ ತಂತ್ರಗಳಷ್ಟೇ ಅಲ್ಲದೆ ಪಂದ್ಯದ ಒತ್ತಡದ ಸಂದರ್ಭಗಳಲ್ಲಿ ಸಹ ಆಟಗಾರರೊಂದಿಗೆ ನಡೆಸುವ ಸಂವಹನ ಕೂಡ ಒಬ್ಬ ನಾಯಕನಿಗೆ ಅತ್ಯಂತ ಮುಖ್ಯವಾಗಿರುತ್ತದೆ. ನಾಯಕನಾಗಿ ಕ್ರೀಸ್ನಲ್ಲಿರುವಾಗ ಜೊತೆಯಾಟಗಾರನಿಗೆ ರವಾನಿಸುವ ಸಂದೇಶಗಳು ಪಂದ್ಯದ ಗತಿಯನ್ನು ಬದಲಿಸಬಲ್ಲವು. ಈ ಹೊಸ ಜವಾಬ್ದಾರಿಗೆ ಹೊಂದಿಕೊಳ್ಳಲು ಅಯ್ಯರ್ಗೆ ಇನ್ನು ಸ್ವಲ್ಪ ಸಮಯ ಬೇಕಾಗಬಹುದು,' ಎಂದೂ ಹೇಳಿದ್ದಾರೆ.
ಭರ್ಜರಿ ಕಮ್ಬ್ಯಾಕ್ ಮಾಡುವ ಭರವಸೆ
ಬ್ರಿಸ್ಟಲ್ನಲ್ಲಿ ನಡೆದ ಟಿ20 ಸರಣಿಯ 4ನೇಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತ ನೀಡಿದ 159 ರನ್ಗಳ ಗುರಿಯನ್ನು ಕೇವಲ 13.5 ಓವರ್ಗಳಲ್ಲಿ ಒಂದೇ ವಿಕೆಟ್ ನಷ್ಟಕ್ಕೆ ಬೆನ್ನಟ್ಟಿತು. ಪಂದ್ಯದ ನಂತರ ಮಾತನಾಡಿದ ನಾಯಕ ಅಯ್ಯರ್, ತಂಡವು ಸದ್ಯ ಲಯಕ್ಕೆ ಮರಳುವ ಹಂತದಲ್ಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. 'ತಂಡದಲ್ಲಿ ಹಲವು ಯುವ ಆಟಗಾರರಿದ್ದು, ವಿದೇಶಿ ಪಿಚ್ಗಳ ಪರಿಸ್ಥಿತಿಗೆ ಹೊಂದಿಕೊಳ್ಳುವಾಗ ತಪ್ಪುಗಳು ಸಹಜ. ಈ ತಪ್ಪುಗಳಿಂದ ಬೇಗ ಪಾಠಗಳನ್ನು ಕಲಿತು ಮುಂದಿನ ಪಂದ್ಯಗಳಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಲಿದ್ದೇವೆ,' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೇಯಸ್ ಅಯ್ಯರ್ ಅವರು ಆ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿ ಅಜೇಯ 80 ರನ್ ಗಳಿಸಿದರು. ಆದರೂ ಗೆಲುವಿಗೆ ನೆರವಾಗದ ಕಾರಣ ಆ ಪ್ರದರ್ಶನ ತಮಗೆ ತೃಪ್ತಿ ನೀಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇನ್ನೂ ಅಯ್ಯರ್ ಪಡೆಯು ಸರಣಿಯ ವೈಟ್ವಾಷ್ನಿಂದ ತಪ್ಪಿಸಿಕೊಳ್ಳಬೇಕಂದ್ರೆ ಇಂದು ನಡೆಯುವ 5ನೇ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿದೆ.












Click it and Unblock the Notifications