ಕುಮಾರಸ್ವಾಮಿ ಅವರು ಇಂತಹ ಯಾವುದಾದರೂ ಒಂದು ಕೆಲಸ ಮಾಡಿದ್ದಾರಾ? : ಡಿ ಕೆ ಶಿವಕುಮಾರ್ ಪ್ರಶ್ನೆ
ಬೆಂಗಳೂರು, ಏಪ್ರಿಲ್ 22: ನಮ್ಮ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಶಾಲೆಗೆ 10 ಕೋಟಿ ರೂ ವೆಚ್ಚದಲ್ಲಿ 3 ಅಂತಾರಾಷ್ಟ್ರೀಯ ಮಟ್ಟದ ಶಾಲೆಗಳನ್ನು ನಿರ್ಮಿಸಲು ಮುಂದಾಗಿದ್ದೇವೆ. ಸುರೇಶ್ ಅವರು ಸತ್ತೇಗಾಲದಿಂದ ಮಾಗಡಿಗೆ ನೀರು ತಂದರೆ ಕುಮಾರಸ್ವಾಮಿ ನಾನು ತಂದಿದ್ದೇನೆ ಎಂದ್ರು, ಕುಮಾರಸ್ವಾಮಿ ಅವರು ಇಂತಹ ಯಾವುದಾದರೂ ಒಂದು ಕೆಲಸ ಮಾಡಿದ್ದಾರಾ? ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಈ ಕುರಿತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪ್ರಚಾರದ ವೇಳೆ ಮಾತನಾಡಿದ ಅವರು, ಈ ಭಾಗದ ಹಳ್ಳಿಯ ಮಕ್ಕಳು ಶಿಕ್ಷಣಕ್ಕಾಗಿ ನಗರ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಲು ಪಂಚಾಯ್ತಿ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಶಾಲೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ನಮ್ಮ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಶಾಲೆಗೆ 10 ಕೋಟಿ ರೂ ವೆಚ್ಚದಲ್ಲಿ 3 ಅಂತಾರಾಷ್ಟ್ರೀಯ ಮಟ್ಟದ ಶಾಲೆಗಳನ್ನು ನಿರ್ಮಿಸಲು ಮುಂದಾಗಿದ್ದೇವೆ. ಇಡೀ ದೇಶದಲ್ಲಿ ಇಂತಹ ಯೋಜನೆ ಇಲ್ಲ. ಇಡೀ ರಾಜ್ಯದಲ್ಲಿ ಇಂತಹ 2 ಸಾವಿರ ಶಾಲೆ ಮಾಡಲು ಮುಂದಾಗಿದ್ದೇವೆ. ಹೀಗೆ ನಿಮ್ಮ ಬದುಕಿನಲ್ಲಿ ಬದಲಾವಣೆ ಮಾಡಲು ನಾವು ಮುಂದಾಗಿದ್ದೇವೆ.

ಈ ಕ್ಷೇತ್ರದಲ್ಲಿ ಕುಮಾರಸ್ವಾಮಿ, ದೇವೇಗೌಡರು ಸಂಸದರಾಗಿದ್ದರು. ಸುರೇಶ್ ಪ್ರತಿ ಪಂಚಾಯ್ತಿಗೆ ಭೇಟಿ ನೀಡಿ ಪಂಚಾಯ್ತಿ ಸದಸ್ಯನಂತೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದರೆ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ರಾಮನಗರ, ಮಾಗಡಿ ಭಾಗದ ಬಡವರಿಗಾಗಿ ಏನಾದರೂ ಮಾಡಿದ್ದಾರಾ? ಬಡವರಿಗೆ ನಿವೇಷನ ಹಂಚಿದ್ದಾರಾ? ಕುಡಿಯುವ ನೀರನ್ನು ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಸಂಸದರಾಗಿದ್ದಾರೆ, 2 ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ತಂದೆ ಒಮ್ಮೆ ಮುಖ್ಯಮಂತ್ರಿ, ಒಮ್ಮೆ ಪ್ರಧಾನಿಯಾಗಿದ್ದಾರೆ. ಈ ಭಾಗದ ಜನ ದೇವೇಗೌಡರು, ಅವರ ಮಗ ಹಾಗೂ ಸೊಸೆಗೆ ಅಧಿಕಾರ ಕೊಟ್ಟಿದ್ದಾರೆ. ಈಗ ಅಳಿಯನನ್ನು ಕರೆದುಕೊಂಡು ಬಂದಿದ್ದಾರೆ. ಜೆಡಿಎಸ್ ಪಕ್ಷ ಇದ್ದರೂ ಗೌಡರ ಅಳಿಯನನ್ನು ದಳದಿಂದ ಯಾಕೆ ನಿಲ್ಲಿಸಲಿಲ್ಲ. ಅವರ ಪಕ್ಷ ಹಾಗೂ ಚಿಹ್ನೆಗೆ ಶಕ್ತಿ ಇಲ್ಲವೇ? ಇನ್ನು ಕುಮಾರಸ್ವಾಮಿ ಇಲ್ಲಿನ ಜನರನ್ನು ಬಿಟ್ಟು ಮಂಡ್ಯದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜಾತ್ಯಾತೀತ ತತ್ವದ ಮೇಲೆ ನಾವು ಜೆಡಿಎಸ್ ಪಕ್ಷಕ್ಕೆ ಬೇಷರತ್ ಬೆಂಬಲ ನೀಡಿ ಎಲ್ಲರ ವಿರೋಧದ ನಡುವೆ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ ಅದನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಅವರಿಂದ ಸಾಧ್ಯವಾಗಲಿಲ್ಲ. ಕುಮಾರಸ್ವಾಮಿ ಅವರು ತಮ್ಮ ಬೆನ್ನಿಗೆ ಚೂರಿ ಹಾಕಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿ ನಾಯಕರನ್ನು ಕರೆದುಕೊಂಡು ನಮ್ಮ ಆದಿ ಚುಂಚನಗಿರಿ ಮಠಕ್ಕೆ ಕರೆದುಕೊಂಡು ಹೋಗಿದ್ದಾರೆ.
ನಾನು ವಿಷ ಹಾಕಿದೆ ಎಂದು ಹೇಳುತ್ತಿದ್ದಾರೆ. ನಾನು ಯಾವ ರೀತಿ ವಿಷ ಹಾಕಿದೆ ಎಂದು ಅವರು ಹೇಳಬೇಕಲ್ಲವೇ? ಸುರೇಶ್ ಅವರು ಸಂಸದರಾಗಿದ್ದಾಗ ನಾನು ಇಂಧನ ಸಚಿವರಾಗಿದ್ದಾಗ ಇಲ್ಲಿ ಶಾಸಕರಿಲ್ಲದಿದ್ದರೂ ಪ್ರತಿ ಇಬ್ಬರು ರೈತರನ್ನು ಸೇರಿಸಿ ಒಂದೊಂದು ಟ್ರಾನ್ಸ್ ಫಾರಂ ಅನ್ನು ಉಚಿತವಾಗಿ ಹಾಕಿಸಬೇಕು ಎಂದು ಕೇಳಿದರು. ನಾನು ಇಲ್ಲಿನ ರೈತರಿಗೆ ಈ ಸೌಲಭ್ಯ ಕಲ್ಪಿಸಿದ್ದೇವೆ. ಅದರಿಂದ ನಿಮಗೆ ಪ್ರಯೋಜನ ಆಗಿದೆಯಲ್ಲವೇ? ನೀವು ನಮಗೆ ಅಧಿಕಾರ ನೀಡುವುದೇ ನಿಮಗೆ ಅನುಕೂಲವಾಗಲಿ, ಒಳ್ಳೆಯದಾಗಲಿ ಎಂದು.
ಇಲ್ಲಿ ಹಾಲು ಉತ್ಪಾದಕರಿದ್ದೀರಿ. ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡಲಿಲ್ಲವೇ. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ವಿದೇಶದಿಂದ ಕಪ್ಪು ಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ನಿಮ್ಮಲ್ಲಿ ಯಾರಿಗಾದರೂ ಆ ಹಣ ಬಂತೇ? ವರ್ಷಕ್ಕೆ 22 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ನಿಮಗೆ ಉದ್ಯೋಗ ಕೊಟ್ಟರಾ? ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ನಿಮ್ಮ ಆದಾಯ ಡಬಲ್ ಆಯಿತಾ? ನಮ್ಮ ಪಕ್ಷ ಕಳೆದ ಚುನಾವಣೆಗೂ ಮುನ್ನ ಐದು ಗ್ಯಾರಂಟಿ ಯೋಜನೆ ಪ್ರಕಟಿಸಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಕೊಟ್ಟ ಮಾತಿನಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಅನುಮೋದನೆ ಕೊಟ್ಟೆವು.
ಆಮೂಲಕ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿದೆವು. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ಕೊಟ್ಟೆವು. ಗೃಹಜ್ಯೋತಿ ಯೋಜನೆ ಮೂಲಕ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಇದರ ಜತೆ ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆ ಮೂಲಕ ನಿರುದ್ಯೋಗಿ ಯುವಕರಿಗೆ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ನಮ್ಮ ಈ ಯೋಜನೆಗಳಿಂದ ಬಡ ಕುಟುಂಬಗಳಿಗೆ ಪ್ರತಿ ತಿಂಗಳು 4-5 ಸಾವಿರ ಉಳಿತಾಯವಾಗುತ್ತಿದೆ.
ನಮ್ಮ ಈ ಯೋಜನೆಗಳನ್ನು ಬಿಜೆಪಿ ಹಾಗೂ ಕುಮಾರಸ್ವಾಮಿ ಅವರು ಲೇವಡಿ ಮಾಡಿದರು. ಆದರೆ ನಾವು ಕೊಟ್ಟ ಮಾತಿನಂತೆ ಈ ಯೋಜನೆ ಜಾರಿ ಮಾಡಿದೆವು. ನಮ್ಮ ಗ್ಯಾರಂಟಿ ಯೋಜನೆಯಿಂದ ಉಳಿತಾಯವಾದ ಹಣದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಕೆಲವರು ಮಕ್ಕಳಿಗೆ ಚಿನ್ನದ ಸರ ಮಾಡಿಸಿದ್ದಾರೆ, ಮತ್ತೆ ಕೆಲವರು ಟಿವಿ, ಫ್ರಿಡ್ಜ್ ಖರೀದಿ ಮಾಡಿದ್ದಾರೆ. ಈ ಮಧ್ಯೆ ನಮ್ಮ ಈ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳುತ್ತಾರೆ ಎಂದರು.












Click it and Unblock the Notifications