ಅಮಿತ್ ಶಾ ಕರ್ನಾಟಕಕ್ಕೆ ಬಂದ ಕಾರಣ ಬಿಚ್ಚಿಟ್ಟ ಎಚ್ಡಿಕೆ!
ಬೆಂಗಳೂರು, ಆಗಸ್ಟ್. 23 : 'ಬಿಜೆಪಿ ನಾಯಕರಿಗೆ ಕರ್ನಾಟಕದ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ಅಮಿತ್ ಶಾ ಅವರಿಗೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ಗುರಿ, ಜನರ ಸಮಸ್ಯೆಗಳ ಬಗ್ಗೆ ಅವರು ಮಾತನಾಡಲೇ ಇಲ್ಲ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಬುಧವಾರ ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ, 'ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಹಲವು ಬೆಳವಣಿಗೆಗಳು ಆಗುತ್ತಿವೆ. ಎಲ್ಲವನ್ನು ನಾನು ಗಮನಿಸುತ್ತಿದ್ದೇನೆ' ಎಂದರು.

'ಅಮಿತ್ ಶಾ ಕರ್ನಾಟಕಕ್ಕೆ ಬಂದು ಹೋಗಿದ್ದಾರೆ. ಅವರು ಬಂದಾಗ ನಾನು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಅವರು ಬಿಜೆಪಿ ನಾಯಕರ ಜೊತೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಿಲ್ಲ. ಬರಗಾಲ, ಕುಡಿಯುವ ನೀರಿನ ಸಮಸ್ಯೆ, ರೈತರ ಸಮಸ್ಯೆಗಳ ಬಗ್ಗೆ ಅವರು ಮಾತನಾಡಲಿಲ್ಲ' ಎಂದು ಹೇಳಿದರು.
ಹಾಸ್ಯಾಸ್ಪದ : 'ಡಿ.ಕೆ.ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಾಗ ಬಿಜೆಪಿ ನಾಯಕರು ಸುಮ್ಮನಿದ್ದರು. ಅಮಿತ್ ಶಾ ಬಂದು ಹೋದ ಮೇಲೆ ರಾಜೀನಾಮೆ ಕೇಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿಯವರು ಡಿ.ಕೆ.ಶಿವಕುಮಾರ್ ರಾಜೀನಾಮೆ ಕೇಳಿದ್ದು ಹಾಸ್ಯಾಸ್ಪದ' ಎಂದರು.
'ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆದಾ ಅಕ್ರಮ ಹಣ, ಆಸ್ತಿ ಸಿಕ್ಕಿದ್ದು ಖಚಿತವಾದರೆ ರಾಜೀನಾಮೆ ಕೇಳಬಹುದಿತ್ತು. ಆದರೆ, ಐಟಿ ದಾಳಿಯಲ್ಲಿ ಅಂತದ್ದೇನು ಸಿಕ್ಕಿಲ್ಲ. ಆದರೂ ರಾಜೀನಾಮೆ ಕೇಳುತ್ತಿರುವುದು ಬಾಲಿಶತನ ತೋರಿಸುತ್ತದೆ' ಎಂದು ವ್ಯಂಗ್ಯವಾಡಿದರು.












Click it and Unblock the Notifications