ಯೋಗಿ ಆದಿತ್ಯನಾಥ್ ಯಾರು? ಏನವರ ಹಿನ್ನೆಲೆ?

ಶನಿವಾರ ಬಿಜೆಪಿ ಯೋಗಿ ಆದಿತ್ಯನಾಥ್ ರನ್ನು ಯುಪಿ ಮುಖ್ಯಮಂತ್ರಿ ಎಂದು ಘೋಷಿಸುತ್ತಿದ್ದಂತೆ ಪರ ವಿರೋಧ ಚರ್ಚೆಗಳು ದೇಶದೆಲ್ಲೆಡೆ ಹುಟ್ಟಿಕೊಂಡಿವೆ. ಈ ಚರ್ಚೆಗಳು ಹುಟ್ಟಿಕೊಂಡಿದ್ದಕ್ಕೆ ಮೂಲಕ ಕಾರಣ ಯೋಗಿ ಆದಿತ್ಯನಾಥ್ ಹಿನ್ನಲೆ.

ಬೆಂಗಳೂರು, ಮಾರ್ಚ್ 19: ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ, ಬಿಜೆಪಿಯ ಫೈರ್ ಬ್ರಾಂಡ್ ನಾಯಕ ಯೋಗಿ ಆದಿತ್ಯನಾಥ್ ಸದ್ಯ ಸುದ್ದಿ-ಗದ್ದಲದ ಕೇಂದ್ರಕ್ಕೆ ಬಂದಿದ್ದಾರೆ.

ಸಂಸತ್ತಿನಲ್ಲಿ ಗೋರಖ್ ಪುರವನ್ನು ಐದು ಬಾರಿ ಪ್ರತಿನಿಧಿಸಿದ ಆದಿತ್ಯಾನಾಥ್ ರನ್ನು ಶನಿವಾರ ಬಿಜೆಪಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಎಂದು ಘೋಷಿಸುತ್ತಿದ್ದಂತೆ ಪರ ವಿರೋಧ ಚರ್ಚೆಗಳು ದೇಶದೆಲ್ಲೆಡೆ ಹುಟ್ಟಿಕೊಂಡಿವೆ. ಈ ಚರ್ಚೆಗಳು ಹುಟ್ಟಿಕೊಂಡಿದ್ದಕ್ಕೆ ಮೂಲಕ ಕಾರಣ ಯೋಗಿ ಆದಿತ್ಯನಾಥ್ ಹಿನ್ನಲೆ. ಹಾಗಾದರೆ ಅವರ ಹಿನ್ನಲೆ ಏನು? ಇಲ್ಲಿದೆ ಮಾಹಿತಿ[ಯೋಗಿ ಆದಿತ್ಯನಾಥರ ಟಾಪ್ 5 ವಿವಾದಾತ್ಮಕ ಹೇಳಿಕೆ]

1998ರ ಮಾಡೆಲ್

1998ರ ಮಾಡೆಲ್

ಜೂನ್ 5, 1972ರಲ್ಲಿ ಹುಟ್ಟಿದ ಆದಿತ್ಯನಾಥ್ ತಮ್ಮ ಮನೆ ತೊರೆದು ರಾಜಕೀಯಕ್ಕೆ ಕಾಲಿಟ್ಟಿದ್ದು 1996ರಲ್ಲಿ. ಉತ್ತರಾಖಂಡ್ ಗೆ ಸೇರಿದ ಪೌರಿ ಗರ್ವಾಲ್ ನ ಪಾಂಚೇರ್ ಯೋಗಿಯ ಹುಟ್ಟೂರು. ಅವರ ಮೂಲ ಹೆಸರು ಅಜಯ್ ಮೋಹನ್ ಬಿಶ್ತ್. ಮುಂದೆ ನಾಥ ಪಂಥದ ದೀಕ್ಷೆ ತೆಗೆದುಕೊಂಡು ತಮ್ಮ ಹೆಸರನ್ನು ಯೋಗಿ ಆದಿತ್ಯನಾಥ್ ಎಂದು ಬದಲಾಯಿಸಿಕೊಂಡಿದ್ದರು.

 ಬಿಎಸ್ಸಿ ಶಿಕ್ಷಣ

ಬಿಎಸ್ಸಿ ಶಿಕ್ಷಣ

1993ರಲ್ಲಿ ಘರ್ವಾಲ್ ವಿಶ್ವವಿದ್ಯಾಲಯದಿಂದ ಯೋಗಿ ಬಿಎಸ್ಸಿ ಪದವಿ ಪಡೆದುಕೊಂಡಿದ್ದಾರೆ. ಆದಿತ್ಯನಾಥ್ ಪದವಿ ಮುಗಿಯುವ ಹೊತ್ತಿಗೆ ದೇಶದಲ್ಲಿ, ಅದರಲ್ಲೂ ಉತ್ತರ ಪ್ರದೇಶದಲ್ಲಿ ರಾಮ ಜನ್ಮಭೂಮಿ ಹೋರಾಟ ಉತ್ತುಂಗದಲ್ಲತ್ತು. ಸಹಜವಾಗಿ ಇದು ಆದಿತ್ಯನಾಥ್ ಮೇಲೆಯೂ ಪ್ರಭಾವ ಬೀರಿತ್ತು.[ಹಿಂದೆ ಬಿಜೆಪಿಗೇ ಬಿಸಿ ಮುಟ್ಟಿಸಿದ್ರೂ ಕಮಲ ಪಕ್ಷಕ್ಕೆ ಯೋಗಿಯೇ ಅಚ್ಚುಮೆಚ್ಚು]

 1998ರ ಮಹಾ ತಿರುವು

1998ರ ಮಹಾ ತಿರುವು

1990ರಲ್ಲಿ ರಾಮ ಜನ್ಮಭೂಮಿ ಹೋರಾಟದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದ ಬಿಜಿಪಿಯ ಮಾಜಿ ಸಂಸತ್ ಸದಸ್ಯ ಮಹಾಂತಾ ಅವಿದ್ಯಾನಾಥ್ ಸಂಪರ್ಕಕ್ಕೆ ಬರುತ್ತಾರೆ ಯೋಗಿ. ಅಲ್ಲಿಂದ ಅವರ ಬದುಕಿನ ಎರಡನೇ ಅಧ್ಯಾಯ ತೆರೆದುಕೊಳ್ಳುತ್ತದೆ.

ಮಹಾಂತಾ ಅವಿದ್ಯಾನಾಥ್ ತಮ್ಮ ಉತ್ತರಾಧಿಕಾರಿ ಪಟ್ಟವನ್ನು ಯೋಗಿ ಆದಿತ್ಯನಾಥ್ ಗೆ ದಯಪಾಲಿಸಿದ್ದರು. ಅಲ್ಲಿಂದ ಮುಂದಿನದು ಯೋಗಿಯ ಶಕೆ. ತಮ್ಮ ದ್ವೇಷ ಭಾಷಣದ ಮೂಲಕ ವಿವಾದಿತ ಹಿಂದೂ ನಾಯಕರಾಗಿ ಆದಿತ್ಯನಾಥ್ ಉದಯಿಸಿದ್ದು ಇವತ್ತಿಗೆ ಇತಿಹಾಸ.

 ಸಂಸತ್ ಸದಸ್ಯ

ಸಂಸತ್ ಸದಸ್ಯ

1998ರಲ್ಲಿ ಗೋರಖ್ ಪುರ್ ನಲ್ಲಿ ಚುನಾವಣೆಗೆ ನಿಂತ ಆದಿತ್ಯನಾಥ್ ನೇರ ಸಂಸತ್ತಿಗೆ ಪ್ರವೇಶ ಗಿಟ್ಟಿಸಿದ್ದರು. ಅಲ್ಲಿಂದ ಮುಂದೆ ಅವರನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಾಗಲೇ ಇಲ್ಲ. ಐದು ಬಾರಿ ಭಾರೀ ಮತಗಳ ಅಂತರದಿಂದ ಗೋರಖ್ ಪುರ್ ಎಂಪಿ ಸ್ಥಾನವನ್ನು ಕೈವಶ ಮಾಡಿಕೊಂಡಿದ್ದರು ಆದಿತ್ಯನಾಥ್. ಅವರಿಗೆ ಪೈಪೋಟಿ ಅಂತ ಕೊಟ್ಟಿದ್ದೆಂದರೆ ಅದು ಸಮಾಜವಾದಿ ಪಕ್ಷದ ಜಮುನಾ ನಿಶಾದ್ ಮಾತ್ರ. 2004ರಲ್ಲಿ ಆದಿತ್ಯನಾಥ್ ಕೇವಲ 5,000 ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಇದೊಂದು ನಿದರ್ಶನ ಬಿಟ್ಟರೆ ಯೋಗಿಯನ್ನು ಸೋಲಿಸುವುದು ಬಿಡಿ, ಸರಿಯಾಗಿ ಸ್ಪರ್ಧೆ ಒಡ್ಡಲೂ ಯಾರಿಂದಲೂ ಸಾಧ್ಯವಾಗಿಲ್ಲ.[ಯೋಗಿಯ ಆತ್ಮಕಥೆ: ಉ.ಪ್ರ. ನೂತನ ಸಿಎಂ ಬಗ್ಗೆ ತಿಳಿಯಬೇಕಾದ 5 ವಿಚಾರ]

 ಗೋರಖ್ ಪುರ್ ದೇವಸ್ಥಾನದ ಮುಖ್ಯ ಗುರು

ಗೋರಖ್ ಪುರ್ ದೇವಸ್ಥಾನದ ಮುಖ್ಯ ಗುರು

ಫೆಬ್ರವರಿ 1994ರಲ್ಲಿ ಆದಿತ್ಯನಾಥ್ ಗೋರಖ್ ಪುರ್ ದೇವಸ್ಥಾನದಲ್ಲಿ ನಾಥ ಪಂಥದ ದೀಕ್ಷೆ ಸ್ವೀಕರಿಸಿದ್ದರು. ಈ ದೀಕ್ಷೆ ಪ್ರಕಾರ ಆದಿತ್ಯನಾಥ್ ಕಿವಿ ಚುಚ್ಚಲಾಗಿತ್ತು. ನಂತರ ಯೋಗಿ ಅವಿದ್ಯಾನಾಥ್ ಶಿಷ್ಯರಾಗಿ ಯೋಗಿ ಆದಿತ್ಯನಾಥ್ ಗುರುತಿಸಿಕೊಂಡಿದ್ದರು. ಅವಿದ್ಯಾನಾಥರನ್ನು ಆದಿತ್ಯನಾಥ್ ಗುರೂಜಿ ಎಂದು ಕರೆಯುತ್ತಿದ್ದರು. 2014ರಲ್ಲಿ ಅವಿದ್ಯಾನಾಥ್ ಸಾವನ್ನಪ್ಪಿದ ನಂತರ ಆದಿತ್ಯನಾಥ್ ಗೋರಖ್ ಪುರ್ ದೇವಸ್ಥಾನದ ಮುಖ್ಯ ಗುರುವಿನ ಪಟ್ಟಕ್ಕೆ ಏರಿದ್ದರು.

 ವಿವಾದಿತ ನಾಯಕ ಆದಿತ್ಯನಾಥ್

ವಿವಾದಿತ ನಾಯಕ ಆದಿತ್ಯನಾಥ್

ಯೋಗಿಯ ಮೊದಲ ವಿವಾದ ಆರಂಭವಾಗಿದ್ದು 1999ರಲ್ಲಿ. ಅಂದು ಮಹಾರಾಜ್ ಗಂಜ್ ಜಿಲ್ಲೆಯ ಪಂಚ್ ರುಖಿಯಾ ಗ್ರಾಮದಲ್ಲಿ ಸ್ಮಶಾನಭೂಮಿಯನ್ನು ವಶಕ್ಕೆ ಪಡೆಯಲು ಅಲ್ಲಿ ಅಶ್ವಥ್ಥ ಮರಗಳನ್ನು ನೆಡಿಸಿದ್ದರು. ಆಗ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಅವರ ಮೇಲೆ ಹಲವು ಕೇಸುಗಳನ್ನು ಜಡಿಯಲಾಗಿತ್ತು.[ಯೋಗಿ ಆದಿತ್ಯ ನಾಥ್ ಉ.ಪ್ರ ಸಿಎಂ; ಮೌರ್ಯ, ಶರ್ಮಾ ಡಿಸಿಎಂ]

 ಜೈಲಿಗೆ ಆದಿತ್ಯನಾಥ್

ಜೈಲಿಗೆ ಆದಿತ್ಯನಾಥ್

2007ರಲ್ಲಿ ಇನ್ನೇನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಆದಿತ್ಯನಾಥ್ ಜೈಲು ಪಾಲಾಗಿದ್ದರು. ಗೋರಖ್ ಪುರ್ ಕೋಮು ದಂಗೆಗೆ ಪ್ರೇರಣೆ ನೀಡಿದ ಆರೋಪದಲ್ಲಿ 15 ದಿನ ಆದಿತ್ಯನಾಥ್ ಜೈಲಿನಲ್ಲಿ ಕಳೆಯಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ಗಲಭೆಯಿದಾಗಿ ಹಲವು ಮುಸ್ಲಿಮರು ಪ್ರಾಣವನ್ನೂ ಕಳೆದುಕೊಂಡಿದ್ದರು.

ಗಲಭೆಯೊಂದರಲ್ಲಿ ಹಿಂದೂ ಯುವಕನೊಬ್ಬನನ್ನು ಕೊಲೆ ಮಾಡಿಲಾಗಿತ್ತು. ತರುವಾಯ ಗುಂಪನ್ನುದ್ದೇಶಿಸಿ ಆದಿತ್ಯನಾಥ್ ಉದ್ರೇಕಕಾರಿ ಭಾಷಣ ಬಿಗಿದಿದ್ದರು. ಮರುಕ್ಷಣವೇ ಕೋಮು ಗಲಭೆಯ ಬೆಂಕಿ ಹೊತ್ತಿಕೊಂಡಿತ್ತು. ಇವತ್ತಿಗೂ ಈ ಪ್ರಕರಣದ ವಿಚಾರಣೆಯನ್ನು ಆದಿತ್ಯನಾಥ್ ಎದುರಿಸುತ್ತಿದ್ದಾರೆ.

 ಬಿಜೆಪಿ ಮೇಲೆ ತಿರುಗಿ ಬಿದ್ದ ಯೋಗಿ

ಬಿಜೆಪಿ ಮೇಲೆ ತಿರುಗಿ ಬಿದ್ದ ಯೋಗಿ

2007ರಲ್ಲಿ ಕೋಮು ಗಲಭೆಯಲ್ಲಿ ಜೈಲು ಪಾಲಾದಾಗ ಬಿಜೆಪಿ ತನ್ನ ಸಹಾಯಕ್ಕೆ ಧಾವಿಸಲಿಲ್ಲ ಎದು ಯೋಗಿ ಆದಿತ್ಯಾಥ್ ಕೇಸರಿ ಪಕ್ಷದ ಮೇಲೆಯೇ ಸಿಟ್ಟಾಗಿದ್ದರು. ಬಿಜೆಪಿಯ ಅಭ್ಯರ್ಥಿಗಳ ವಿರುದ್ಧವೇ ಯೋಗಿ ಆದಿತ್ಯನಾಥ್ ತಮ್ಮ ಹಿಂದೂ ಯುವ ವಾಹಿನಿಯಿಂದ ಸ್ಪರ್ಧಿಗಳನ್ನು ಕಣಕ್ಕಿಳಿಸಿ ಸುದ್ದಿಯಾಗಿದ್ದರು. ಹಿಂದೂ ಮಹಾಸಭಾದಿಂದ ರಾಧಾ ಮೋಹನ್ ದಾಸ್ ಅಗರ್ವಾಲ್ ಎಂಬುವವರನ್ನು ನಿಲ್ಲಿಸಿ ಯೋಗಿ ಗೆಲ್ಲಿಸಿಕೊಂಡು ಬಿಟ್ಟಿದ್ದರು. ಈ ಮೂಲಕ ಬಿಜೆಪಿಗೆ ತೀಕ್ಷ್ಣ ಸಂದೇಶವನ್ನೂ ರವಾನಿಸಿದ್ದರು.

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗಲೂ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂದು ಬಿಜೆಪಿಯ ಕೇಂದ್ರ ನಾಯಕತ್ವದ ವಿರುದ್ಧ ಯೋಗಿ ಸಿಟ್ಟಾಗಿದ್ದರು.

 ಸಂತರ ಮಾತಿಗೆ ಬೆಲೆ ಕೊಡದ ಬಿಜೆಪಿ

ಸಂತರ ಮಾತಿಗೆ ಬೆಲೆ ಕೊಡದ ಬಿಜೆಪಿ

ಯೋಗಿ ಆದಿತ್ಯನಾಥ್ ರನ್ನು ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂಬ ಕೂಗು ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಸಂತರ ವಲಯದಿಂದಲೇ ಕೇಳಿ ಬಂದಿತ್ತು. 2016ರಲ್ಲೇ ಗೋರಖ್ ಪುರ್ ದೇವಸ್ಥಾನದಲ್ಲಿ ಸಭೆ ನಡೆಸಿದ್ದ ಅಯೋಧ್ಯೆ ಮೊದಲಾದ ಪ್ರದೇಶಗಳ ಸಂತರು ಯೋಗಿಯವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಬೇಕು. ಆದಿತ್ಯನಾಥ್ ಮುಖ್ಯಮಂತ್ರಿಯಾದರೆ ಮಾತ್ರ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಸಾಧ್ಯ ಎಂದು ಹೇಳಿದ್ದರು. ಆದರೆ ಕೂಗು ಎಷ್ಟೇ ಬಲವಾದರೂ ಬಿಜೆಪಿ ಮಾತ್ರ ಕಿವಿ ಮೇಲೆ ಹಾಕಿಕೊಂಡಿರಲಿಲ್ಲ.

 ಮತ ದ್ರುವೀಕರಣದ ನೇತಾರ

ಮತ ದ್ರುವೀಕರಣದ ನೇತಾರ

ಮತ ದ್ರುವೀಕರಣ ಮಾಡಿ 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ಮಾಡಿದವರು ಯೋಗಿ ಆದಿತ್ಯನಾಥ್. ಹಿಂದೂ ಮತ್ತು ಮುಸ್ಲಿಂ ಹಬ್ಬಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸಗಳಾಗುತ್ತವೆ ಎಂಬ ವಿಚಾರದಿಂದ ತಮ್ಮ ದ್ರುವೀಕರಣ ತಂತ್ರವನ್ನು ಯೋಗಿ ಆರಂಭಿಸಿದ್ದರು. ಖಬರಿಸ್ತಾನ್ ಮತ್ತು ಶಂಶಾನ್ ಗಳಿಗೆ ಸ್ಥಳ ಮೀಸಲಿಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದೂ ಆಪಾದಿಸಿದ್ದರು. ಮುಂದೆ ಇದನ್ನೇ ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿಯೂ ಪ್ರಸ್ತಾಪಿಸಿ ಅದು ದೊಡ್ಡ ಸುದ್ದಿಯಾಗಿತ್ತು. ಲವ್ ಜಿಹಾದ್, ಗೋ ಹತ್ಯೆ, ಬಲವಂತದ ಮತಾಂತರ ಹೀಗೆ ಮತ ದ್ರುವೀಕರಣಕ್ಕೆ ಬೇಕಾದ ವಿಚಾರಗಳೆಲ್ಲಾ ಅವರ ಮಾತುಗಳಲ್ಲಿ ಹಾದು ಹೋಗಿತ್ತು.

 ಗೆಲುವಿನಲ್ಲಿ ಪ್ರಮುಖ ಪಾತ್ರ

ಗೆಲುವಿನಲ್ಲಿ ಪ್ರಮುಖ ಪಾತ್ರ

ಚುನಾವಣೆಯಲ್ಲಿ ಆದಿತ್ಯನಾಥ್ ಬೆಂಬಲಿಗರಿಗೆ ಟಿಕೆಟ್ ನಿರಾಕರಿಸಿದಾಗ ಅವರೆಲ್ಲಾ ಬಿಜೆಪಿ ವಿರುದ್ಧವೇ ಬಂಡಾಯವೆದ್ದಿದ್ದರು. ಬಂಡಾಯ ಅ಻ಭ್ಯರ್ಥಿಗಳು ಶಿವಸೇನೆಯ ಬೆಂಬಲದೊಂದಿಗೆ ಬಿಜೆಪಿ ವಿರುದ್ಧವೇ ಸ್ಪರ್ಧಿಸಲು ಹೊರಟಿದ್ದರು. ಕೊನೆಗೆ ಇವರನ್ನೆಲ್ಲಾ ಯೋಗಿ ಬಿಜೆಪಿಯಿಂದಲೇ ಕಿತ್ತು ಬಿಸಾಕಿದರು. ಕೊನೆಗೆ ಯೋಗಿ ಒತ್ತಾಯದ ಮೇರೆಗೆ ಅವರೆಲ್ಲಾ ನಾಮಪತ್ರ ಹಿಂತೆಗೆದುಕೊಂಡು ಬಿಜೆಪಿಯನ್ನು ಸೋಲಿನಿಂದ ಬಚಾವು ಮಾಡಿದ್ದರು.

ಇಷ್ಟೆಲ್ಲಾ ವರ್ಣರಂಜಿತ ಹಿನ್ನಲೆಯ ಯೋಗಿ ಆದಿತ್ಯನಾಥ್ ಕೆಲವೇ ಕ್ಷಣಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+