ಜಲಪಾತದ ಸುಳಿಗೆ ಸಿಕ್ಕಿ ಟಿಸಿಎಸ್ ಟೆಕ್ಕಿ ಸಾವು
ತಿರುವನಂತಪುರ, ಅ.4: ವಯನಾಡಿನ ಮೀನ್ಮುಟ್ಟಿ ಜಲಪಾತದ ಬಳಿ ಕಲ್ಲರ ಹೊಳೆಯಲ್ಲಿ ಹರ್ಯಾಣದ ಯುವ ಸಾಫ್ಟ್ ವೇರ್ ಇಂಜಿನಿಯರ್ ಬುಧವಾರ ನೀರು ಪಾಲಾಗಿದ್ದಾನೆ. ಜತೆಗೆ ಆತನ ಸ್ನೇಹಿತನೂ ಮುಳುಗಿದ್ದು, ಅವನ ಮೃತದೇಹ ಸಿಕ್ಕಿಲ್ಲ.
ತಿರುವನಂತಪುರದ ಟೆಕ್ನೊಪಾರ್ಕ್ನಲ್ಲಿರುವ Tata Consultancy Services- TCS ಸಾಫ್ಟ್ ವೇರ್ ಕಂಪನಿಯಲ್ಲಿ ತರಬೇತಿಗಾಗಿ ಬಂದಿದ್ದ ಅವರು ಕಲ್ಲರ ಹೊಳೆಗೆ ಪಿಕ್ ನಿಕ್ ಗೆಂದು ಹೋಗಿದ್ದರು. ಮೃತ ಟೆಕ್ಕಿಯನ್ನು ಹರ್ಯಾಣದ ಮಹೇಶ್ ಕುಮಾರ್ (39) ಎಂದು ಗುರುತಿಸಲಾಗಿದೆ. ಆತನ ಸ್ನೇಹಿತ ರಾಜಸ್ಥಾನದ ಅತುಲ್ ಯಾದವ್ (24) ದೇಹ ಇನ್ನೂ ಪತ್ತೆಯಾಗಿಲ್ಲ.
TCS ಕಂಪನಿಯಿಂದ ಒಟ್ಟು ಒಂಬತ್ತು ಮಂದಿ ಗಾಂಧಿ ಜಯಂತಿಯಂದು ರಜಾ ದಿನ ಕಳೆಯಲು ಮೀನ್ಮುಟ್ಟಿ ಜಲಪಾತ ವೀಕ್ಷಣೆಗೆ ಬಂದಿದ್ದರು. 150 ಅಡಿ ಆಳದ ಜಲಪಾತದ ಸುಳಿಗೆ ಸಿಕ್ಕಿ ಒದ್ಲಾಡುತ್ತಿದ್ದ ಗೆಳೆಯ ಅತುಲ್ ಯಾದವನನ್ನು ಬಚಾವು ಮಾಡಲು ಟೆಕ್ಕಿ ಮಹೇಶ್ ಕುಮಾರ ದುರ್ಗಮ ಪ್ರದೇಶದತ್ತ ಸಾಗಿದ್ದಾನೆ. ಆದರೆ ನೀರಿನಲ್ಲಿ ಇಬ್ಬರೂ ಕೊಚ್ಚಿಹೋಗಿದ್ದಾರೆ. ಸ್ಥಳೀಯ ಗಾರ್ಡ್ ಗಳ ಎಚ್ಚರಿಕೆಯನ್ನು ಧಿಕ್ಕರಿಸಿ ಈ ಯುವ ತಂಡ ನೀರಿಗೆ ಇಳಿದಿತ್ತು.
ಪಶ್ಚಿಮ ಘಟ್ಟಗಳಲ್ಲಿ ಕಲ್ಲರ ಬಳಿಯಿರುವ Meenmutty ಹೊಳೆ ಬಹಳ ಅಪಾಯಕಾರಿ ಸ್ಥಳ. 1991ರಲ್ಲಿ ಇಲ್ಲಿನ ಸರಕಾರಿ ದಂತ ವೈದ್ಯಕೀಯ ಕಾಲೇಜಿನ 8 ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದಾರೆ. 2006ರಲ್ಲಿ ಸ್ನಾನ ಮಾಡುತ್ತಿದ್ದ ನಾಲ್ವರು ಯುವಕರು ನೀರು ಪಾಲಾಗಿದ್ದರು. ಕಳೆದ ವರ್ಷ ಒಬ್ಬ ಬಾಲಕ ಮುಳುಗಿದ್ದಾನೆ.