ಬೆಂಗಳೂರು ಟೆಕ್ಕಿಗಳೇ ಇತ್ತ ಗಮನಿಸಿ: ನೀವು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ನಿಮ್ಮ ಕಂಪೆನಿಗೆ ಹೋಗುತ್ತೆ ಮಾಹಿತಿ
ಬೆಂಗಳೂರು, ಡಿಸೆಂಬರ್ 18: ನೀವು ಬೆಂಗಳೂರಿನ ಟೆಕ್ ಮೂಲದ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಾದರೇ ಇದೋ ನಿಮಗೆ ಮಹತ್ವದ ಮಾಹಿತಿ ಇದೆ. ಇನ್ನು ಮುಂದೆ ನೀವು ರಸ್ತೆ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಈ ಮಾಹಿತಿ ನಿಮ್ಮ ಕಂಪೆನಿಗೆ ತಿಳಿಸಲಾಗುತ್ತದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಆಫೀಸ್ಗೆ ಲೇಟ್ ಆಗುತ್ತೆ, ಭಯಂಕರ ಟ್ರಾಫೀಕ್ ಎಂದು ಪಾದಚಾರಿ ಮಾರ್ಗದಲ್ಲಿ ಓಡಿಸುವುದು, ಸಿಗ್ನಲ್ಗೆ ಕಾಯದೇ ಜೋರಾಗಿ ವಾಹನ ಚಲಾಯಿಸುವುದು, ಹೆಲ್ಮೇಟ್ ಇಲ್ಲದೆ ಗಾಡಿ ಓಡಿಸುವುದು ಇವೇ ಮೊದಲಾದ ನಿಯಮ ಬಾಹಿರ ನಡೆಗಳನ್ನು ಸೆರೆ ಹಿಡಿಯುವ ಪೊಲೀಸರು ನೇರ ನಿಮ್ಮ ಮ್ಯಾನೇಜನರ್ಗೆ ಮಾಹಿತಿಯನ್ನು ಕಳುಹಿಸಲಿದ್ದಾರೆ. ಬಳಿಕ ಕಂಪೆನಿ ನಿಮ್ಮ ಮೇಲೆ ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ ಎಂದು ತಿಳಿಸಲಾಗಿದೆ.

ಅದಕ್ಕಾಗಿ ಇನ್ನು ಮುಂದೆ ನೀವು ಟ್ರಾಫಿಕ್ ಸಿಗ್ನಲ್ಗಳನ್ನು ಜಂಪ್ ಮಾಡುವ ಮೊದಲು ಅಥವಾ ರಸ್ತೆಗಳಲ್ಲಿ ವೇಗದ ಮಿತಿಯನ್ನು ಮೀರುವ ಮೊದಲು ಎರಡು ಬಾರಿ ಯೋಚಿಸಿ ಗಾಡಿ ಚಲಾಯಿಸಿ. ಏಕೆಂದರೆ ನೀವು ಯಾವುದೇ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ, ಬೆಂಗಳೂರು ಟ್ರಾಫಿಕ್ ಪೊಲೀಸರು ನೇರವಾಗಿ ನಿಮ್ಮ ಕಂಪನಿಗೆ ಸೂಚನೆ ನೀಡುತ್ತಾರೆ.
ಸಂಚಾರ ಪೊಲೀಸರ ಪ್ರಕಾರ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಭಾಗವಾಗಿ ಬೆಂಗಳೂರು ಟ್ರಾಫಿಕ್ ಪೊಲೀಸ್ನ ಪೂರ್ವ ವಿಭಾಗವು ಈ ವಾರ ನಗರದ ಹೊರವರ್ತುಲ ರಸ್ತೆ ಮತ್ತು ವೈಟ್ಫೀಲ್ಡ್ ಅನ್ನು ಒಳಗೊಂಡಿರುವ ಮಾಹಿತಿ ತಂತ್ರಜ್ಞಾನ ಕಾರಿಡಾರ್ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ವಿಶಿಷ್ಟವಾದ ಅಭಿಯಾನವನ್ನು ಪ್ರಾರಂಭಿಸಿದೆ.
ಸದ್ಯಕ್ಕೆ ಸಂಚಾರ ಪೊಲೀಸರ ಪೂರ್ವ ವಿಭಾಗಕ್ಕೆ ಮಾತ್ರ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮಾರ್ಗದುದ್ದಕ್ಕೂ ಉಲ್ಲಂಘನೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದರೆ, ಬೆಂಗಳೂರಿನ ಇತರ ಪ್ರಮುಖ ಭಾಗಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಾಫಿಕ್ ಪೊಲೀಸರು ಹೆಚ್ಚಿನ ಸಂಖ್ಯೆಯ ಸಂಚಾರ ನಿಯಮಗಳ ಉಲ್ಲಂಘನೆಗಳನ್ನು ಗಮನಿಸಿದ ನಂತರ ಈ ಕ್ರಮವನ್ನು ನಿರ್ದಿಷ್ಟ ವ್ಯಾಪ್ತಿಯಲ್ಲಿ ಪ್ರಾರಂಭಿಸಿದ್ದಾರೆ. ವಿಶೇಷವಾಗಿ ಟೆಕ್ಕಿಗಳು ತಮ್ಮ ಕಂಪೆನಿಗಳನ್ನು ವೇಗವಾಗಿ ತಲುಪುವ ಸಲುವಾಗಿ ಟ್ರಾಫಿಕ್ ಸಿಗ್ನಲ್ಗಳನ್ನು ಜಂಪ್ ಮಾಡುವ ಅಥವಾ ವೇಗದ ಮಿತಿಗಳನ್ನು ಮೀರುವ ಮೂಲಕ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಾರೆ ಎಂದು ಹಿರಿಯ ಸಂಚಾರ ಅಧಿಕಾರಿರೊಬ್ಬರು ತಿಳಿಸಿದ್ದಾರೆ.
"ನಾವು ಬೆಂಗಳೂರಿನ ಪೂರ್ವ ವಿಭಾಗದಲ್ಲಿ ಪ್ರಾಯೋಗಿಕವಾಗಿ ಈ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಹಾಗಾಗಿ, ಯಾವುದೇ ಐಟಿ ಕಂಪನಿಯ ಉದ್ಯೋಗಿಗಳು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ, ನಿರ್ದಿಷ್ಟ ಉಲ್ಲಂಘನೆಯ ಬಗ್ಗೆ ಮಾಹಿತಿಯನ್ನು ಅವರ ಕಂಪನಿಗಳಿಗೆ ಇಮೇಲ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ. ಸವಾರಿ ಮಾಡುವಾಗ ಸಂಚಾರ ನಿಯಮಗಳು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅವರಿಗೆ ಹೆಚ್ಚು ಅರಿವು ಮೂಡಿಸಲು ಮತ್ತು ಜಾಗೃತಗೊಳಿಸಲು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.
ಅಭಿಯಾನದ ಭಾಗವಾಗಿ, ನಿಯಮ ಉಲ್ಲಂಘಿಸುವವರನ್ನು ಹಿಡಿದಾಗ ಅವರು ಕೆಲಸ ಮಾಡುವ ಕಂಪನಿಯನ್ನು ಪರಿಶೀಲಿಸಲು ಮತ್ತು ಗುರುತಿಸಲು ವ್ಯಕ್ತಿಯ ಗುರುತಿನ ಚೀಟಿಯನ್ನು ಟ್ರಾಫಿಕ್ ಪೊಲೀಸರು ಪರಿಶೀಲಿಸುತ್ತಾರೆ. ಅದರ ಪ್ರಕಾರ, ಪೊಲೀಸರು ಈ ಟೆಕ್ ಕಂಪನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ ಮತ್ತು ಸವಾರರಿಂದ ಉಲ್ಲಂಘನೆಗಳ ಪಟ್ಟಿಯನ್ನು ಅವರಿಗೆ ಕಳುಹಿಸುತ್ತಾರೆ ಪೊಲೀಸ್ ಅಧಿಕಾರಿ ಹೇಳಿದರು.












Click it and Unblock the Notifications