ಶಬರಿಮಲೆ ದೇವಳದಲ್ಲಿ ಕಾಲ್ತುಳಿತ, ನಾಲ್ವರು ಗಂಭೀರ
ಇಡುಕ್ಕಿ, ಡಿಸೆಂಬರ್ 25 : ಶಬರಿಮಲೆ ದೇವಸ್ಥಾನದಲ್ಲಿ ಭಾನುವಾರ, ಕ್ರಿಸ್ಮಸ್ ಸಂಜೆ ಕಾಲ್ತುಳಿತ ಸಂಭವಿಸಿದ್ದು, 20 ಜನರು ಗಾಯಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿಯಿರುವ ಮಲಿಕಾಪುರಂ ದೇಗುಲದ ಬಳಿ, ಪ್ರಸಾದ (ಅರವಣ) ತಯಾರಿಸುವ ಘಟಕದ ಬಳಿ ಕಾಲ್ತುಳಿತ ಸಂಭವಿಸಿದೆ. ಗಾಯಗೊಂಡವರನ್ನು ಪಂಪ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲ್ತುಳಿತಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸದ್ಯಕ್ಕೆ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಗಾಯಗೊಂಡ ಹೆಚ್ಚಿನವರು ಹೊರರಾಜ್ಯದವರು ಎಂದು ತಿಳಿದುಬಂದಿದೆ. [700 ಬಲಿಪಡೆದ ಮೆಕ್ಕಾ ಕಾಲ್ತುಳಿತ ದುರಂತದ ಚಿತ್ರಗಳು]
ಕಾಲ್ತುಳಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಪಂಪ ನದಿಯಿಂದ ಮುಖ್ಯ ದೇಗುಲಕ್ಕೆ ಸಾಗುವ ದಾರಿಯಲ್ಲಿ ಭಕ್ತರ ಚಲನವಲನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
2011ರ ಜನವರಿ 15ರಂದು ಇಡುಕ್ಕಿ ಜಿಲ್ಲೆಯ ಪುಲಮೇಡು ಎಂಬಲ್ಲಿ ಜೀಪೊಂದು ಭಕ್ತಾದಿಗಳ ಮೇಲೆ ಉರುಳಿ, ನಂತರ ಸಂಭವಿಸಿದ್ದ ಕಾಲ್ತುಳಿತದಲ್ಲಿ 104 ಜನ ಸತ್ತು 40 ಭಕ್ತರು ಗಾಯಗೊಂಡಿದ್ದರು. ಇವರಲ್ಲಿ 30 ಭಕ್ತರು ಕರ್ನಾಟಕದವರಾಗಿದ್ದರು. [ಶಬರಿಮಲೆ ದುರಂತ : ರಾಜ್ಯದ 30 ಸಾವು]