Heavy Rain: ಭಕ್ತರೇ ಎಚ್ಚರ.. ಕೇರಳದಲ್ಲಿ ಭಾರೀ ಮಳೆ- ಶಬರಿಮಲೆಯಲ್ಲಿ ಹೈಅಲರ್ಟ್, ಮಾಹಿತಿ, ವಿವರ
ತಿರುವನಂತಪುರಂ, ನವೆಂಬರ್ 21: ಕೇರಳದಲ್ಲಿ ಈಶಾನ್ಯ ಮುಂಗಾರು ಮತ್ತೆ ಚುರುಕಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಗುರುವಾರದವರೆಗೆ ಕೇರಳದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕನ್ಯಾಕುಮಾರಿ ಪ್ರದೇಶ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ಮೇಲಿನ ಚಂಡಮಾರುತದ ಪ್ರಭಾವದಿಂದಾಗಿ ಈ ಮಳೆಯು ಸುರಿಯಲಿದೆ ಎಂದು ತಿಳಿದುಬಂದಿದೆ.

ತಿರುವನಂತಪುರಂ, ಕೊಲ್ಲಂ ಮತ್ತು ಎರ್ನಾಕುಲಂ ಜಿಲ್ಲೆಗಳಿಗೆ ಮಂಗಳವಾರ ಹಳದಿ ಎಚ್ಚರಿಕೆ ನೀಡಲಾಗಿದೆ. ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಇಡುಕ್ಕಿ ಮತ್ತು ಪತ್ತನಂತಿಟ್ಟದಲ್ಲಿ ಗುರುವಾರದವರೆಗೂ ಭಾರೀ ಮಳೆ ಮುಂದುವರಿಯಲಿದೆ. ಮುಂದಿನ ಎರಡು ದಿನಗಳವರೆಗೆ ಇಡುಕ್ಕಿಗೆ ಆರೆಂಜ್ ಅಲರ್ಟ್ ಮತ್ತು ಎರ್ನಾಕುಲಂನಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ತಿರುವನಂತಪುರಂ, ಪತ್ತನಂತಿಟ್ಟ ಮತ್ತು ಇಡುಕ್ಕಿಯ ಗುಡ್ಡಗಾಡು ಪ್ರದೇಶಗಳಲ್ಲಿ ಮಂಗಳವಾರ ಮಳೆಯಾಗಿದೆ. ಭಕ್ತರ ದಂಡು ಹರಿದು ಬರುತ್ತಿರುವ ಶಬರಿಮಲೆಯಲ್ಲೂ ಭಾರೀ ಮಳೆಯಾಗಿದೆ.
ಈಶಾನ್ಯ ಮಾನ್ಸೂನ್ ಋತುವಿನಲ್ಲಿ ಇದುವರೆಗಿನ ಕೇರಳದಲ್ಲಿ ಹೆಚ್ಚಿನ ಮಳೆಯಾಗಿದೆ. ಅಕ್ಟೋಬರ್ 1 ರಿಂದ ನವೆಂಬರ್ 21 ರ ವರೆಗೆ ಶೇ 12 ರಷ್ಟು ಮಳೆಯಾಗಿದೆ. 66 ಪ್ರತಿಶತ ಅಧಿಕ ಮಳೆಗೆ ಪತ್ತನಂತಿಟ್ಟ ಸಾಕ್ಷಿಯಾಗಿದೆ. ಈ ಋತುವಿನಲ್ಲಿ ಇಲ್ಲಿ ಅತಿ ಹೆಚ್ಚು ಮಳೆಯಾಗಿದೆ. ತಿರುವನಂತಪುರಂ (ಶೇ 37) ಮತ್ತು ಆಲಪ್ಪುಳದಲ್ಲಿ (ಶೇ 28) ಅಧಿಕ ಮಳೆಯಾಗಿದೆ. ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದೆ.

ಶಬರಿಮಲೆಯಲ್ಲಿ ಎಡಿಆರ್ಎಫ್ ತಂಡ
ಮಂಡಲ-ಮಕರವಿಳಕ್ಕು ಋತುವಿನಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಶಬರಿಮಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಚೆನ್ನೈ ನಾಲ್ಕನೇ ಬೆಟಾಲಿಯನ್ನ ಉಮಾ ಎಂ ರಾವ್ ನೇತೃತ್ವದ 65 ಸದಸ್ಯರ ತಂಡ ಮಂಗಳವಾರ ಶಬರಿಮಲೆ ತಲುಪಿದೆ. ಈ ಪೈಕಿ 45 ಸಿಬ್ಬಂದಿಯನ್ನು ಸನ್ನಿಧಾನಂ ಮತ್ತು 20 ಸಿಬ್ಬಂದಿಯನ್ನು ಪಂಬಾದಲ್ಲಿ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎನ್ಡಿಆರ್ಎಫ್ ತಂಡವು ವೈದ್ಯಕೀಯ ನೆರವು ಸೇರಿದಂತೆ ಎಲ್ಲಾ ರೀತಿಯ ತುರ್ತು ಸೇವೆಗಳನ್ನು ಒದಗಿಸುತ್ತದೆ. ಸೀಸನ್ ಮುಗಿಯುವವರೆಗೂ ಈ ಬೆಟಾಲಿಯನ್ ಶಬರಿಮಲೆಯಲ್ಲಿಯೇ ಇರಲಿದೆ. ಕಳೆದ ಋತುವಿನಲ್ಲಿಯೂ ಈ ತಂಡವು ತನ್ನ ಸೇವೆಯನ್ನು ನೀಡಿತ್ತು ಎಂದು ವರದಿಯಾಗಿದೆ.
ತಮಿಳುನಾಡಿನಲ್ಲೂ ಭಾರೀ ಮಳೆ
ತಮಿಳುನಾಡಿನ ತಿರುನೆಲ್ವೇಲಿ, ತೆಂಕಶಿ ಮತ್ತು ಥೇಣಿ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದೆ. ರಾಮನಾಥಪುರಂ, ವಿರುದುನಗರ, ತೂತುಕುಡಿ, ಮಧುರೈ, ದಿಂಡಿಗಲ್, ತಿರುಪುರ್, ಕೊಯಮತ್ತೂರು, ನೀಲಗಿರಿ, ತಿರುವಳ್ಳೂರು, ರಾಣಿಪೇಟ್, ಕಾಂಚೀಪುರಂ, ಚೆನ್ನೈ, ಚೆಂಗಲ್ಪಟ್ಟು, ನಾಗಪಟ್ಟಣಂ, ಮೈಲಾಡುತುರೈ ಮತ್ತು ತಿರುವೂರು ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications