Sabarimala: ಕರ್ನಾಟಕದಿಂದ ಶಬರಿಮಲೆಗೆ ಹೊರಟಿದ್ದ ಬಸ್-ಆಟೋ ಅಪಘಾತ: ಐವರು ಸಾವು
ಕೇರಳ, ಡಿಸೆಂಬರ್ 16: ಶಬರಿಮಲೆಯ ಅವ್ಯವಸ್ಥೆ ನಡುವೆಯೇ ಶಬರಿಮಲೆಯತ್ತ ತೆರಳುತ್ತಿರುವ ಭಕ್ತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಶಬರಿಮಲೆಯ ಮಾರ್ಗದಲ್ಲಿ ವಾಹನ ದಟ್ಟಣೆ ಕೂಡ ಆಗುತ್ತಿದ್ದು, ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕಿದೆ.
ಶಬರಿಮಲೆಯ ಮಾರ್ಗದಲ್ಲಿ ಸಾಲು ಸಾಲು ಅಪಘಾತಗಳು ಕೂಡ ಸಂಭವಿಸುತ್ತಿದ್ದು, ನಿನ್ನೆ(ಡಿಸೆಂಬರ್ 15) ಶುಕ್ರವಾರ ಸಂಜೆ ಕೇರಳದಲ್ಲಿ ಭೀಕರ ರಸ್ತೆ ಅಪಘಾತಗಳು ಸಂಭವಿಸಿದೆ. ಕರ್ನಾಟಕದಿಂದ ಶಬರಿಮಲೆಗೆ ತೆರಳುತ್ತಿದ್ದ ಬಸ್ಗೆ ಆಟೋ ಡಿಕ್ಕಿಯಾಗಿ ಐದು ಜನ ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.

ನಿನ್ನೆ ಸಂಜೆ ಐದು ಗಂಟೆ ಸುಮಾರಿಗೆ ಕೊಯಿಲಂಡಿ-ಮಂಜೇರಿ ಮಾರ್ಗದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕರ್ನಾಟಕದಿಂದ ಶಬರಿಮಲೆಗೆ ತೆರಳುತ್ತಿದ್ದ ಬಸ್ಗೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಡಿಕ್ಕಿಯಾಗಿದೆ. ಅಪಘಾತದ ಭೀಕರತೆಗೆ ಆಟೋದಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಟೋ ಡ್ರೈವರ್ ಅಬ್ದುಲ್ ಮಜೀದ್, ಪ್ರಯಾಣಿಕರಾದ ಮುಹ್ಸಿನಾ, ಥಸ್ನೀಮ್, ರಿಯಾಜ್ ಹಾಗೂ ಗುರು ಸಿಗದ ಇನ್ನಿಬ್ಬರು ಘಟನೆಯಲ್ಲಿ ಮೃತಪಟ್ಟಿದ್ದಾರೆ.
ಇನ್ನು ಅಪಘಾತದಲ್ಲಿ ಗಾಯಗೊಂಡವರನ್ನು ಕೂಡಲೇ ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಮಲಪ್ಪುರಂನಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಬಸ್ ಆಟೋ ಡಿಕ್ಕಿ ರಭಸಕ್ಕೆ ಆಟೋ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಬಸ್ನ ಮುಂಭಾಗಕ್ಕೆ ಹಾನಿಯಾಗಿದೆ.

ಅವ್ಯವಸ್ಥೆಯ ಆಗರವಾದ ಶಬರಿಮಲೆ
ಇನ್ನು ಪ್ರತಿವರ್ಷ ಕೋಟ್ಯಂತರ ಭಕ್ತರು ಭೇಟಿ ನೀಡುವ ಶಬರಿಮಲೆಯಲ್ಲಿ ವರ್ಷದಿಂದ ವರ್ಷಕ್ಕೆ ವ್ಯವಸ್ಥೆ ಹದಗೆಡುತ್ತಿದ್ದು, ಈ ವರ್ಷ ಶಬರಿಮಲೆ ಅವ್ಯವಸ್ಥೆಯ ಆಗರವಾಗಿದೆ. ಧಾರ್ಮಿಕ ಕ್ಷೇತ್ರವಾದ ಶಬರಿಮಲೆಯಲ್ಲಿ ಕೇರಳ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆ ಹೆಚ್ಚಾಗಿದೆ. ತಿಂಗಳುಗಟ್ಟಲೆ ಮಾಲೆ ಧರಿಸಿ ವ್ರತಾಚರಣೆ ಮಾಡಿ ಶಬರಿಮಲೆಗೆ ತೆರಳುವ ಭಕ್ತರು ದೇವರ ದರ್ಶನ ಇಲ್ಲದೇ ಹಿಂದಿರುಗುತ್ತಿದ್ದಾರೆ. ಸುಮಾರು ಹದಿನೆಂಟರಿಂದ ಇಪ್ಪತ್ತು ಗಂಟೆ ಸರದಿ ಸಾಲಿನಲ್ಲಿ ನಿಂತರೂ ಭದ್ರತಾ ಸಿಬ್ಬಂದಿ ದೇವರ ದರ್ಶನಕ್ಕೂ ಅವಕಾಶ ಕೊಡದೇ ಹೋಗುತ್ತದ್ದಂತೆ ಹೊರಗೆ ಹಾಕುತ್ತಿದ್ದಾರೆ ಎಂದು ಭಕ್ತರು ಆರೋಪಿಸುತ್ತಿದ್ದಾರೆ.
ಶಬರಿಮಲೆ ದೇವಸ್ಥಾನದಿಂದ ಸುಮಾರು ಮುನ್ನೂರು ಕೋಟಿ ರೂಪಾಯಿ ಆದಾಯ ಬಂದರೂ ಕೂಡ ಕೇರಳ ಸರ್ಕಾರ ಇಲ್ಲಿ ಯಾವುದೇ ಮೂಲ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ. ರಸ್ತೆ, ಬಸ್, ಶೌಚಾಲಯ ವ್ಯವಸ್ಥೆಯೂ ಇಲ್ಲದೇ ಭಕ್ತರು ಪರದಾಡುತ್ತಿದ್ದಾರೆ. ಮಾಲೆ ಧರಿಸಿ ಬಂದ ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರಿಗೂ ಯಾವುದೇ ವ್ಯವಸ್ಥೆ ಇಲ್ಲದೇ ಇರುವುದು ಶಬರಿಮಲೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.












Click it and Unblock the Notifications