Breaking: ಡಿ.23ರಂದೇ ಸಂಸತ್ ಚಳಿಗಾಲ ಅಧಿವೇಶನ ಮುಕ್ತಾಯ ಸಾಧ್ಯತೆ
ನವದೆಹಲಿ, ಡಿಸೆಂಬರ್ 20: ಸಂಸತ್ತಿನ 2022ರ ಚಳಿಗಾಲದ ಅಧಿವೇಶನವು ನಿಗದಿತ ಸಮಯಕ್ಕಿಂತ ಒಂದು ವಾರ ಮುಂಚಿತವಾಗಿ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಲೋಕಸಭೆಯ ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ 23ರ ವೇಳೆಗೆ ಕೊನೆಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಕಳೆದ ಡಿಸೆಂಬರ್ 7ರಂದು ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನವು ಈ ಹಿಂದೆ ಡಿಸೆಂಬರ್ 29ರವರೆಗೆ ಮುಂದುವರೆಸಲು ನಿರ್ಧರಿಸಲಾಗಿತ್ತು. ಇದಕ್ಕೂ ಮುನ್ನ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಕೆಲವು ಟೀಕೆಗಳ ಬಗ್ಗೆ ಬಿಜೆಪಿ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ರಾಜ್ಯಸಭೆಯಲ್ಲಿ ಬಿರುಸಿನ ಚರ್ಚೆ:
ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ನಾಯಕರ ನಡುವಿನ ತೀವ್ರ ವಾಗ್ವಾದದಲ್ಲಿ ತೊಡಗಿದ್ದರಿಂದ ರಾಜ್ಯಸಭೆಯು ಬಿರುಸಿನ ಆರಂಭವನ್ನು ಕಂಡಿತು.
ಖರ್ಗೆ ಕ್ಷಮೆಯಾಚನೆಗೆ ಬಿಜೆಪಿ ಪಟ್ಟು:
ಸೋಮವಾರ ರಾಜಸ್ಥಾನದ ಭಾರತ್ ಜೋಡೋ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, 'ಮನೆಯಲ್ಲಿರುವ ನಿಮ್ಮ ನಾಯಿಯೂ ದೇಶಕ್ಕಾಗಿ ಸತ್ತಿದೆಯೇ..?" ಎಂದು ಬಿಜೆಪಿಗರನ್ನು ಕುರಿತು ಟೀಕಿಸಿದ್ದರು. ಈ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿಯಿತು.












Click it and Unblock the Notifications