'ತಾಳ್ಮೆಯಿಂದ ಇದ್ದೇವೆ, ಮಿತಿ ಮೀರಬೇಡಿ': ರೈತರಿಗೆ ಹರಿಯಾಣ ಸಿಎಂ ಎಚ್ಚರಿಕೆ
ಚಂಡೀಗಢ, ಜೂ.30: ಮೂರು ವಿವಾದಾತ್ಮಕ ಕೇಂದ್ರ ಕೃಷಿ ಕಾನೂನುಗಳನ್ನು ಪ್ರತಿಭಟಿಸುವ ರೈತರ ಕೆಂಗಣ್ಣಿಗೆ ಗುರಿಯಾಗಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬುಧವಾರ, "ರಾಜಕೀಯ ನಾಯಕರು ಪ್ರತಿಭಟನೆಗಳ ನಡುವೆಯೂ ತಾಳ್ಮೆಯಿಂದಿರುತ್ತಾರೆ, ಆದರೆ ಯಾರೊಬ್ಬರೂ ತಮ್ಮ ಮಿತಿಯನ್ನು ಮೀರುವುದು ಒಳ್ಳೆಯದಲ್ಲ," ಎಂದು ಹೇಳಿದ್ದಾರೆ.
ಘಾಜಿಪುರದ ಉತ್ತರ ಪ್ರದೇಶ-ದೆಹಲಿ ಗಡಿಯಲ್ಲಿ ಕ್ಯಾಂಪಿಂಗ್ ಮಾಡುತ್ತಿರುವ ಕೃಷಿ ವಿರೋಧಿ ಕಾನೂನು ಪ್ರತಿಭಟನಾಕಾರರು ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರ ನಡುವೆ ಇಂದು ಘರ್ಷಣೆ ನಡೆದಿದ್ದು, ಈ ಬಳಿಕ ಈ ಎಚ್ಚರಿಕೆ ನೀಡಿದ್ದಾರೆ.
"ಕಿಸಾನ್ (ರೈತ) ಎಂಬ ಪದವು ಶುದ್ಧವಾಗಿದೆ. ಎಲ್ಲರೂ ಅವರನ್ನು ಗೌರವದಿಂದ ಕಾಣುತ್ತಾರೆ. ಆದರೆ ಕೆಲವು ದುರದೃಷ್ಟಕರ ಘಟನೆಗಳಿಂದಾಗಿ ಈ ಪದವು ಕಳಂಕಿತವಾಗಿದೆ," ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

"ಸಹೋದರಿಯರು ಮತ್ತು ಹೆಣ್ಣುಮಕ್ಕಳ ಘನತೆಯನ್ನು ಕಸಿದುಕೊಳ್ಳಲಾಗಿದೆ, ಕೊಲೆಗಳು ನಡೆಯುತ್ತಿವೆ, ರಸ್ತೆಗಳು ನಿರ್ಬಂಧಿಸಲ್ಪಟ್ಟಿವೆ. ಈ ಪ್ರಜಾಪ್ರಭುತ್ವ ವಿರೋಧಿ ಘಟನೆಗಳು ನಾನು ಖಂಡಿಸುತ್ತೇನೆ," ಎಂದು ಕಿಡಿಕಾರಿದ್ದಾರೆ.
ರಾಜಕೀಯ ನಾಯಕರು ರಾಜ್ಯದ ಹಳ್ಳಿಗಳಿಗೆ ಭೇಟಿ ನೀಡಿದಾಗ ರೈತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಖಟ್ಟರ್, "ಸರ್ಕಾರವನ್ನು ನಡೆಸುತ್ತಿರುವವರಿಗೆ ಜನರನ್ನು ಭೇಟಿ ಮಾಡುವ ಜವಾಬ್ದಾರಿ ಇದೆ," ಎಂದರು.
"ನಾವು ತಾಳ್ಮೆಯನ್ನು ಕಾಪಾಡಿಕೊಂಡಿದ್ದೇವೆ ಆದರೆ ಅವರು ಗ್ರಾಮಗಳಿಗೆ ಮುಖ್ಯಮಂತ್ರಿ ಭೇಟಿ ಮಾಡಲು ಸಾಧ್ಯವಿಲ್ಲ, ಉಪಮುಖ್ಯಮಂತ್ರಿ ಭೇಟಿ ನೀಡಲು ಸಾಧ್ಯವಿಲ್ಲ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರವನ್ನು ನಡೆಸುತ್ತಿರುವವರಿಗೆ ಜನರನ್ನು ಭೇಟಿ ಮಾಡುವ ಅಥವಾ ಯಾವುದೇ ಸ್ಥಳಕ್ಕೆ ತೆರಳುವ ಜವಾಬ್ದಾರಿ ಇದೆ. ಅವರು ನಮ್ಮನ್ನು ಎಷ್ಟೇ ಪ್ರಚೋದಿಸಿದರೂ, ಅವರು ನಮ್ಮ ಹರಿಯಾಣದಲ್ಲಿ ಹುಟ್ಟಿದ ನಮ್ಮ ಸ್ವಂತ ಜನರಾಗಿದ್ದರಿಂದ ನಾವು ನಮ್ಮ ಶಾಂತತೆಯನ್ನು ಕಾಪಾಡುತ್ತಿದ್ದೇವೆ. ಆದರೆ ಯಾರೊಬ್ಬರೂ ತಮ್ಮ ಮಿತಿಯನ್ನು ಮೀರುವುದು ಒಳ್ಳೆಯದಲ್ಲ," ಎಂದು ಎಚ್ಚರಿಸಿದ್ದಾರೆ.
ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು ಕಳೆದ ವರ್ಷದಿಂದ ದೆಹಲಿಯ ಮೂರು ಗಡಿಗಳಾದ ಸಿಂಗು, ಟಿಕ್ರಿ ಮತ್ತು ಗಾಜಿಪುರದಲ್ಲಿ ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ.
ಕಾನೂನುಗಳು ಸಾಂಪ್ರದಾಯಿಕ ಬೆಳೆ ಮಾರುಕಟ್ಟೆಗಳಿಂದ ಹೊರಗುಳಿಯಲು ಕಾರಣವಾಗುತ್ತದೆ ಹಾಗೂ ಬೃಹತ್ ಕಾರ್ಪೊರೇಟ್ ಸಂಸ್ಥೆಗಳನ್ನು ಕೃಷಿ ಕ್ಷೇತ್ರಕ್ಕೆ ಆಹ್ವಾನಿಸುತ್ತದೆ, ಇದರಿಂದಾಗಿ ಅವರ ಶೋಷಣೆಗೆ ರೈತರು ಬಲಿಯಾಗುತ್ತಾರೆ ಎಂಬ ಕಾರಣಕ್ಕೆ ರೈತರು ಈ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಆಡಳಿತಕ್ಕೆ ಕಾನೂನು ಖಾತರಿ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಆದರೆ ಕಾನೂನುಗಳು ಕೃಷಿ ಕ್ಷೇತ್ರದಲ್ಲಿ ಮಧ್ಯವರ್ತಿಗಳ ಪಾತ್ರವನ್ನು ನಿವಾರಿಸುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಎಂಎಸ್ಪಿಯನ್ನು ರದ್ದುಗೊಳಿಸುವುದಿಲ್ಲ ಎಂದು ಭರವಸೆ ನೀಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಹಲವಾರು ಸುತ್ತಿನ ಮಾತುಕತೆ ನಡೆದಿದ್ದು, ಎಲ್ಲಾ ಮಾತುಕತೆ ವಿಫಲವಾಗಿದೆ. ರೈತರ ಪ್ರತಿಭಟನೆ ಮುಂದುವರೆದಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications