ಹುಷಾರು, ಹುಷಾರು.. ತರಕಾರಿ ಮಾರಾಟ ಮಾಡುವವರಿಗೂ ಕೊರೊನಾ!
ಅಡುಗೆ ಮಾಡಲು ತರಕಾರಿ, ದಿನಸಿ ಬೇಕೆಂದು.. ಅವುಗಳನ್ನು ಖರೀದಿ ಮಾಡುವ ಮುನ್ನ ದಯವಿಟ್ಟು ಎಚ್ಚರ ವಹಿಸಿ... ಯಾಕಂದ್ರೆ, ಹಣ್ಣು-ತರಕಾರಿ ಮಾರಾಟಗಾರರು, ದಿನಸಿ ಅಂಗಡಿಯವರಿಂದಲೇ ನಿಮಗೂ ಕೊರೊನಾ ವೈರಸ್ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ, ಆಹಾರ ಸಾಮಾಗ್ರಿ ತರಬೇಕು ಅಂತ ಮನೆಯಿಂದ ಏನಾದರೂ ಹೊರಗೆ ಕಾಲಿಟ್ಟರೆ, ನೀವು ತುಂಬಾ ಜಾಗೃತವಾಗಿರಬೇಕು.
ತರಕಾರಿ, ದಿನಸಿ ಅಂಗಡಿ ಮತ್ತು ಸೂಪರ್ ಮಾರ್ಕೆಟ್ ಗೆ ಹೋಗುವ ಮುನ್ನ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಸಾಧ್ಯವಾದರೆ ನಿಮ್ಮ ಕೈಗೆ ಗ್ಲೌಸ್ ಧರಿಸಿ. ನಿಮ್ಮ ಜೊತೆ ಸ್ಯಾನಿಟೈಸರ್ ಕೂಡ ಇರಲಿ.
ಕೊರೊನಾ ಭಯದಿಂದ ರಸ್ತೆಯಲ್ಲಿ ಅನಾಥವಾದ 3 ಸಾವಿರ ರೂಪಾಯಿ!
ಇಷ್ಟೆಲ್ಲಾ ನಾವ್ಯಾಕೆ ಹೇಳ್ತಿದ್ದೀವಿ ಅಂದ್ರೆ, ಕಳೆದ 48 ಗಂಟೆಗಳಲ್ಲಿ 8 ಮಂದಿ ತರಕಾರಿ ಮಾರಾಟಗಾರರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಫಾರಿನ್ ಟ್ರಾವೆಲ್ ಹಿಸ್ಟರಿ ಹೊಂದಿಲ್ಲದ ತರಕಾರಿ ಮಾರಾಟಗಾರರಿಗೆ ಕೊರೊನಾ ಸೋಂಕು ತಗುಲಿದ್ದು ಹೇಗೆ ಎಂಬುದು ತಿಳಿದುಬಂದಿಲ್ಲ.
ಅಹಮದಾಬಾದ್ ನಲ್ಲಿ ಪ್ರಕರಣ
ಅಹಮದಾಬಾದ್ ನಲ್ಲಿರುವ ಎಂಟು ಮಂದಿ ತರಕಾರಿ ಮಾರಾಟಗಾರರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇವರೆಲ್ಲರೂ ಅಹಮದಾಬಾದ್ ನಲ್ಲಿರುವ ವಿವಿಧ ಮಂಡಿಗಳಲ್ಲಿ ತರಕಾರಿ ವ್ಯಾಪಾರಸ್ಥರು. ಹಣ್ಣು-ತರಕಾರಿ, ದಿನಸಿ ಮಾರಾಟಗಾರರು 'ಸೂಪರ್-ಸ್ಪ್ರೆಡರ್' ವರ್ಗಕ್ಕೆ ಬರಲಿದ್ದು, ಇವರುಗಳಿಂದ ನೂರಾರು ಜನರಿಗೆ ಸೋಂಕು ತಗಲುವ ಅಪಾಯ ಇದೆ ಎನ್ನುತ್ತಾರೆ ಕಾರ್ಪೋರೇಷನ್ ಅಧಿಕಾರಿಗಳು.
ಮೂರು ದಿನಗಳ ಹಿಂದೆ
ಮೂರು ದಿನಗಳ ಹಿಂದೆಯಷ್ಟೇ ಜಮಲ್ ಪುರದ ಮೂವರು ತರಕಾರಿ ಮಾರಾಟಗಾರರಿಗೆ ಕೋವಿಡ್-19 ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಅವರನ್ನು ಪ್ರತ್ಯೇಕವಾಗಿರಿಸಿ, ಚಿಕಿತ್ಸೆ ನೀಡಿದ ಬಳಿಕ ಆ ಪ್ರದೇಶದ ಸಾವಿರಾರು ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಮಾರಾಟ ಮಾಡುವವರು ಮಾಸ್ಕ್ ಧರಿಸಿರಬೇಕು
''ಆಹಾರ/ಅವಶ್ಯ ಸಾಮಾಗ್ರಿ ಖರೀದಿ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಮಾರಾಟಗಾರರೂ ಮಾಸ್ಕ್ ಧರಿಸಿದ್ದಾರೆಯೇ ಎಂಬುದನ್ನು ಖಚಿತ ಪಡಿಸಿಕೊಂಡ ಬಳಿಕ ಖರೀದಿ ಆರಂಭಿಸಿ. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಿ. ಮಾರಾಟಗಾರರಿಗೆ ಅನಾರೋಗ್ಯ ಕಾಡಿದರೆ, ದಯವಿಟ್ಟು ಮನೆಯಲ್ಲೇ ಇರಿ'' ಎಂದು ಮುನಿಸಿಪಾಲ್ ಕಮಿಷನರ್ ವಿಜಯ್ ನೇಹ್ರಾ ಮನವಿ ಮಾಡಿದ್ದಾರೆ.
ತರಕಾರಿಗಳನ್ನು ತಪ್ಪದೆ ತೊಳೆಯಿರಿ
ಅಂಗಡಿಯಿಂದ ತಂದ ತರಕಾರಿಗಳನ್ನು ನೇರವಾಗಿ ಫ್ರಿಡ್ಜ್ ನಲ್ಲೋ ಅವರ ಅಡುಗೆ ಮನೆಯ ಕಟ್ಟೆಯ ಮೇಲೋ ಇಡುವ ಮುನ್ನ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯಿರಿ. ಸಾಧ್ಯವಾದರೆ ಸ್ವಲ್ಪ ಉಪ್ಪನ್ನು ಹಾಕಿ ತೊಳೆಯಿರಿ. ಹಸಿ ತರಕಾರಿಗಳನ್ನು ತಿನ್ನಬೇಡಿ. ಬೇಯಿಸಿದ ತರಕಾರಿಗಳನ್ನು ಸೇವಿಸಿ.