ಅಣ್ಣ ಸೋಮಣ್ಣ, ಯಾವ ಪಾರ್ಟಿಯಲ್ಲಿದ್ದೀಯಣ್ಣಾ ನೀನು?
ಅತ್ತ ಸಿದ್ದಗಂಗಾ ಮಠದ ಸ್ವಾಮಿಗಳಿಂದ ಆಶೀರ್ವಾದ ಪಡೆದು, ದೀಕ್ಷೆ ತೊಟ್ಟವರಂತೆ ಸೀದಾ ಗೋವಿಂದರಾಜನಗರದಲ್ಲಿ ಮತದಾರನ ಮನೆಯ ಮುಂದೆ ಪ್ರತ್ಯಕ್ಷರಾಗಿ ಬಿಜೆಪಿ ಪರ ಮತಯಾಚಿಸುವ ಪ್ರೋಗ್ರಾಂ ಇತ್ತಾದರೂ ಅದೂ ಕ್ಯಾನ್ಸೆಲ್ ಮಾಡಿದ್ದಾರೆ.
ಹಾಗೆ ನೋಡಿದರೆ, ಈ ಬಾರಿಯ ಚುನಾವಣೆ ಗೊತ್ತುಗುರಿಯಿಲ್ಲದೆ ಗೊಂದಲಾಪುರದಲ್ಲಿರುತ್ತದೆ ಎಂಬುದಕ್ಕೆ ಇದು ಸಣ್ಣ ಉದಾಹರಣೆಯಷ್ಟೇ.
ಚುನಾವಣೆಗೆ ಮುನ್ನ ಅಭ್ಯರ್ಥಿಗಳು ಮತ್ತು ಪಕ್ಷಗಳೇ ಈ ಪಾಟಿ ಗೊಂದಲದಲ್ಲಿರುವಾಗ ಸಾಮಾನ್ಯ ಮತದಾರ ಇನ್ನು ಅದೇನು ಅವಾಂತರ ಸೃಷ್ಟಿಸಿಬಿಡುತ್ತಾನೋ ಎಂಬ ಸಣ್ಣ ಮಟ್ಟದ ಆತಂಕವೂ ಕಾಡತೊಡಗಿದೆ. ಹಾಗಾಗದಿರಲಿ, ಪಕ್ಷ ಯಾವುದೇ ಆದರೂ ಅದು ಮೆಜಾರಿಟಿಗೆ ಬಂದು ಪ್ರೌಢಿಮೆಯಿಂದ ರಾಜ್ಯವನ್ನು ಆಳುವಂತಾಗಲಿ ಎಂಬುದು ಈ ಕ್ಷಣದ ಆಶಯ.
ಇನ್ನು ಸನ್ಮಾನ್ಯ ಸೋಮಣ್ಣ ವಿಷಯಕ್ಕೆ ವಾಪಸಾಗುವುದಾದರೆ ಅಣ್ಣ ಸೋಮಣ್ಣ, ಯಾವ ಪಾರ್ಟಿಯಲ್ಲಿದ್ದೀಯಣ್ಣಾ? ಎಂದು ಕೇಳದೆ ಬೇರೆ ದಾರಿಯಿಲ್ಲವಾಗಿದೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ... ಎಂಬಂತಾಗಿದೆ ಸೋಮಣ್ಣನ ಈ ಕ್ಷಣದ ಸ್ಥಿತಿ.
ಬಿಜೆಪಿಯಲ್ಲೇ ಇರುತ್ತೇನೆ ಎಂದು ತಮ್ಮ ಬೆಂಬಲಿಗರ ಮುಂದೆ ಪ್ರಮಾಣ ಮಾಡಿ ಹೇಳಿದ ಬಳಿಕವೂ ಅಣ್ಣ ಸೋಮಣ್ಣ ಮತ್ತೆ ಗೊಂದಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಅಯ್ಯೋ ಯಡಿಯೂರಪ್ನೋರು ಏನಂದು ಕೊಂಡುಬಿಡುತ್ತಾರೋ ಅಂದುಕೊಳ್ಳುತ್ತಲೇ, ಅತ್ತ ದೊಡ್ಡಗೌಡರನ್ನು ಭೇಟಿಯಾಗಿ ಬರಲೇ ಎಂದೂ ಪದ್ಮನಾಭನಗರದತ್ತ ಹೊರಟೇಬಿಟ್ಟಿದ್ದರು.
ಸರಿಯಾಗಿ ಅದೇ ಕ್ಷಣಕ್ಕೆ ಯಾರೋ 'ಕೈ'ಹಿಡಿದು ಜಗ್ಗಿದಂತಾಗಿ ಹಿಂತಿರುಗಿ ನೋಡಿದ ಸೋಮಣ್ಣಗೆ ಅದು ಕಾಂಗೈ ಅನಿಸಿದ್ದೂ ನಿಜ. ಹಾಗಾಗಿ ಇರುವ ಮೂರು ಮತ್ತೊಂದು ಪಾರ್ಟಿಯಲ್ಲಿ ಆರು ಹಿತವರು ನನಗೆ? ಎಂದು ಸ್ವಗತದಲ್ಲಿ ಹಾಡಿಕೊಳ್ಳುತ್ತಾ ಅಲ್ಲೇ ಗೋವಿಂದರಾಜನಗರದಲ್ಲಿರುವ ಮಠವೊಂದರ ಕಲ್ಲುಕಟ್ಟೆ ಮೇಲೆ 'ಗೋವಿಂದರಾಜ ನಗರದ ರಾಜ' ಆಸೀನರಾಗಿದ್ದಾರೆ ಎಂಬುದು ತಾಜಾ ಸುದ್ದಿ.
ಡಿಟ್ಟೋ ನಿರಾಣಿ ಸಾಹೇಬರು: ಪಕ್ಷ ಬದಲಾವಣೆ ಹಾಗೂ ಕ್ಷೇತ್ರ ಬದಲಾವಣೆಯ ಗೊಂದಲದಲ್ಲಿರುವ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರದೂ ಇದೇ ಅತಂತ್ರ ಸ್ಥಿತಿಯಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ