ಬಳ್ಳಾರಿ ರೆಡ್ಡಿಗೆ ವಾರಂಟ್ ಜಾರಿಗೊಳಿಸದ ಪೊಲೀಸರ ವಿರುದ್ಧ ಕ್ರಮ
ಸಮನ್ಸ್ ಜಾರಿ ಮಾಡದ ಮತ್ತು ನ್ಯಾಯಾಲಯಕ್ಕೆ ಜನಾರ್ದನ ರೆಡ್ಡಿಯನ್ನು ಹಾಜರು ಪಡಿಸದ ಪೊಲೀಸರ ಕ್ರಮ ಪ್ರಶ್ನಿಸಿ ವಕೀಲ ಜಿಆರ್ ಮೋಹನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೇಹರ್ ಮತ್ತು ನ್ಯಾ. ಅಶೋಕ್ ಬಿ. ಹಿಂಚಿಗೇರಿ ಅವರ ವಿಭಾಗೀಯ ಪೀಠ, ಬುಧವಾರ ಈ ಆದೇಶ ನೀಡಿದೆ.
ಪೊಲೀಸ್ ಅಧಿಕಾರಿಗಳೇ ಕಾರಣ: ಬುಧವಾರ ವಿಚಾರಣೆಗೆ ಹಾಜರಾದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ಎಂ ಜಾಮ್ದಾರ್, ಜನಾರ್ದನ ರೆಡ್ಡಿಗೆ ನ್ಯಾಯಾಲಯ ಸಮನ್ಸ್ ಹಾಗೂ ವಾರೆಂಟ್ ಜಾರಿತ್ತು. ರೆಡ್ಡಿಗೆ ಅವುಗಳನ್ನು ತಲುಪಿಸುವಲ್ಲಿ, ನಿವೃತ್ತ ಡಿಜಿ-ಐಜಿಪಿ ಡಾ. ಅಜಯ್ ಕುಮಾರ್ ಸಿಂಗ್, ಬಳ್ಳಾರಿ ಎಸ್ಪಿಯಾಗಿದ್ದ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ 9 ಮಂದಿ ಪೊಲೀಸ್ ಅಧಿಕಾರಿಗಳು ಬೇಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ವಿಭಾಗೀಯ ಪೀಠದ ಗಮನಕ್ಕೆ ತಂದರು.
ಪೊಲೀಸ್ ಅಧಿಕಾರಿಗಳು ರೆಡ್ಡಿಯು ಬಳ್ಳಾರಿಯಲ್ಲೆ ಇದ್ದರೂ ಕೂಡ, ಅವರು ನಮ್ಮ ಕೈಗೆ ಸಿಗುತ್ತಿಲ್ಲ. ಪ್ರವಾಸದಲ್ಲಿದ್ದಾರೆ ಆದುದರಿಂದ ಸಮನ್ಸ್ ತಲುಪಿಸಲು ಸಾಧ್ಯವಾಗಲಿಲ್ಲ ಎಂಬಿತ್ಯಾದಿ ಸುಳ್ಳು ಕಾರಣಗಳನ್ನು ನೀಡಿ ನ್ಯಾಯಾಲಯವನ್ನು ದಿಕ್ಕು ತಪ್ಪಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುವ ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೂಡ ಕೈಗೊಳ್ಳಲಿಲ್ಲ.
ಕರ್ತವ್ಯ ನಿಷ್ಠೆ ತೋರಿಸುವಲ್ಲಿ ವಿಫಲವಾದ ಕೆಳವರ್ಗದ ಅಧಿಕಾರಿಗಳಾದ ತೋರಂಗಲ್ ಸಿಪಿಸಿಯಾಗಿದ್ದ ಸಿ. ಸೂರ್ಯ ನಾರಾಯಣ ಮತ್ತು ಪಿಎಸ್ಐ ಎಂ.ಉಮೇಶ್ ಮತ್ತು ಸಂಡೂರು ಸಿಪಿಐಯಾಗಿದ್ದ ವೈ.ಎಚ್. ರಮಾಕಾಂತ್ರನ್ನು ಗೃಹ ಇಲಾಖೆ ಅಮಾನತುಗೊಳಿಸಿದೆ. ಆದರೆ, ಮೇಲ್ವರ್ಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಲಿಲ್ಲ ಎಂದು ಜಾಮ್ದಾರ್ ವಿಭಾಗೀಯ ಪೀಠಕ್ಕೆ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಕೂಡ್ಲಿಯ ಸಿಐಎಸ್ಪಿಯಾಗಿದ್ದ ಎಚ್.ವೈ.ತುರೈ, ಬಳ್ಳಾರಿ ಹೆಚ್ಚುವರಿ ಎಸ್ಪಿಯಾಗಿದ್ದ ಅಶೋಕ್ ಕುರೇರ್, ಬಳ್ಳಾರಿ ಎಸ್ಪಿಯಾಗಿದ್ದ ಎಂ.ಎನ್.ನಾಗರಾಜ್, ಸೀಮಂತ್ ಕುಮಾರ್, ಪಶ್ವಿಮ ಘಟ್ಟದ ಐಜಿಪಿಯಾಗಿದ್ದ ಎಚ್.ಎನ್.ಎಸ್. ರಾವ್ ಮತ್ತು ನಿವೃತ್ತ ಡಿಜಿ-ಐಜಿಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಶಿಫಾರಸು ಮಾಡಿ ಎಂದು ವಿಭಾಗೀಯ ಪೀಠ ಜಾಮ್ದಾರ್ಗೆ ನಿರ್ದೇಶಿಸಿತ್ತು.