ಬಳ್ಳಾರಿ ಕೊಲೆಯ ಹಿಂದೆ ರಾಜಕೀಯ ವೈಷಮ್ಯ ವಾಸನೆ ಇದೆ- ಕಲಾಪದಲ್ಲಿ ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ
ಬಳ್ಳಾರಿ, ಜುಲೈ 20: ಬಳ್ಳಾರಿ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಬುಧವಾರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತ ಮೆಹಬೂಬ್ ಭಾಷರವರ ಹತ್ಯೆ ಬಗ್ಗೆ ಗುರುವಾರದಂದು ವಿಧಾನ ಸಭೆ ಕಲಾಪದಲ್ಲಿ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರಸ್ತಾಪಿಸಿದ್ದಾರೆ.
ಬುಧವಾರ ಸಂಜೆ ನಡೆದ ಮೆಹಬೂಬ್ ಬಾಷನ ಬರ್ಬರ ಹತ್ಯೆಯ ಹಿಂದೆ ರಾಜಕೀಯ ವೈಷಮ್ಯದ ವಾಸನೆ ಇದೆ ಎಂಬ ಅನುಮಾನಗಳು ಮೂಡುತ್ತಿದ್ದ ಬೆನ್ನಲ್ಲೇ ಗುರುವಾರದಂದು ಅಧಿವೇಶನದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖಂಡರು ಈ ಹತ್ಯೆಯನ್ನು ಖಂಡಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಾರ್ಯಕರ್ತ ಮೆಹಬೂಬ್ ಭಾಷರವರು ರಿಯೆಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದರು. ಇವರನ್ನು ಹತ್ಯೆ ಮಾಡಿರುವವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಮೆಹಬೂಬ್ ಭಾಷರವರು ತಮ್ಮ ಐದು ವರ್ಷದ ಪುತ್ರನ ಜನ್ಮದಿನಾಚರಣೆಯ ಸಂಭ್ರಮದಲ್ಲಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಅವರ ಮನೆಗೆ ಬಂದು, ಭಾಷರವರನ್ನು ಹೊರಗಡೆ ಕರೆದಿದ್ದಾರೆ. ಹೊರಗಡೆ ಬಂದ ಮೆಹಬೂಬ್ ಭಾಷರವರಿಗೆ 12 ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಈ ಕೊಲೆಯ ಬಗ್ಗೆ ರಾಜಕೀಯ ಮಾಡುವ ಉದ್ದೇಶ ನನ್ನದಲ್ಲ. ಆದರೆ ಬಳ್ಳಾರಿಯಲ್ಲಿ ಈ ಕೊಲೆಯಿಂದ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಕೊಲೆಯ ಕುರಿತು ಬಳ್ಳಾರಿ ಎಸ್ಪಿಯೊಂದಿಗೆ ನಾನು ಮಾತನಾಡಿದ್ದೆ ಎಂದು ಹೇಳಿದ ಶಾಸಕ ಜನಾರ್ದನರೆಡ್ಡಿ, ಬುಧವಾರ ರಾತ್ರಿ ಕೊಲೆಯ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.
ಶಾಸಕ ಜನಾರ್ದನ ರೆಡ್ಡಿ ನೂತನ ಕೆಆರ್ಪಿಪಿ ಪಕ್ಷದ ಕಾರ್ಯಕರ್ತನಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೆಹಬೂಬ್ ಬಾಷಾ ಎನ್ನುವಾತನನ್ನ ನಿನ್ನೆ ಬೈಕ್ನಲ್ಲಿ ಆಗಮಿಸಿದ್ದ ಮೂವರು, ಚಾಕು ಮಚ್ಚುಗಳಿಂದ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.

ಮಗನ ಹುಟ್ಟು ಹಬ್ಬ ಹಿನ್ನಲೆಯಲ್ಲಿ ಕೇಕ್ ತೆಗೆದುಕೊಂಡು ಮನೆಗೆ ಬಂದಿದ್ದ ಮೆಹಬೂಬ್ ಬಾಷಾರನ್ನು ಹೊರಗಡೆ ಕರೆದ ಮೂವರು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಮೆಹಬೂಬ್ ಬಾಷಾರನ್ನ ತಕ್ಷಣ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಯ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಮೆಹಬೂಬ್ ಬಾಷಾ ಸಾವನ್ನಪ್ಪಿದ್ದಾರೆ.
ಇನ್ನು ಮೃತ ಮೆಹಬೂಬ್ ಬಾಷಾ ಕಳೆದ ಚುನಾವಣೆಯಲ್ಲಿ ಕೆಆರ್ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ ಪರವಾಗಿ ಪ್ರಚಾರ ಮಾಡಿದ್ದರು. ಇನ್ನು ಇದೀಗ ಮೆಹಬೂಬ್ ಬಾಷಾರನ್ನು ಕಾಂಗ್ರೆಸ್ ಕಾರ್ಯಕರ್ತರಾದ ಕಾಂಗ್ರೆಸ್ ಮುಖಂಡ ಕೋಳಿ ಅನ್ವರ್, ಅಲ್ತಾಪ್, ಸಿರಾಜ್ ಸೇರಿ ಹತ್ಯೆ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ.
ಪ್ರಾಥಮಿಕ ವಿಚಾರಣೆ ವೇಳೆ ಹತ್ಯೆ ಹಿಂದೆ ರಾಜಕೀಯ ಪ್ರೇರಣೆ ಇಲ್ಲ ಎನ್ನುವುದು ಪೊಲೀಸರಿಗೆ ತಿಳಿದು ಬಂದಿದೆ ಎನ್ನಲಾಗಿದೆ. ಮೆಹಬೂಬ್ ಬಾಷಾ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಚೆನ್ನಾಗಿ ಬೆಳೆಯುತ್ತಿದ್ದು, ಇದೇ ವಿಚಾರಕ್ಕೆ ಕೊಲೆ ನಡೆದಿದೆ ಎಂದು ಜಿಲ್ಲಾ ಎಸ್ಪಿ ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಗಳನ್ನು ಕೋರ್ಟ್ಗೆ ಹಾಜರು ಪಡಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ. ಪೊಲೀಸರ ಸಮಗ್ರ ತನಿಖೆ ಬಳಿಕ ಈ ಹತ್ಯೆಯ ನಿಖರ ಕಾರಣ ತಿಳಿದು ಬರಲಿದೆ.












Click it and Unblock the Notifications