ಮನೆಗಳಿಂದ ಹೊರಗೆ ಬರಬೇಡಿ: ಜಪಾನ್ ಅಧಿಕೃತ ಆದೇಶ
ಕರಾಳ ಶುಕ್ರವಾರ ಸಂಭವಿಸಿದ ಮಹಾ ಭೂಕಂಪ ಮತ್ತು ತದನಂತರದ ಸುನಾಮಿಯಿಂದಾಗಿ 10 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಅದರಿಂದ ಅವಾಂತರಕ್ಕೊಳಗಾಗಿದ್ದಾರೆ. ವಿಶ್ವದ ಮೂರನೇ ಅರ್ಥ ವ್ಯವಸ್ಥೆ ನೆಲಕಚ್ಚಿದೆ. ಈ ಸಂದರ್ಭದಲ್ಲಿ ಅಣು ವಿಕಿರಣ ನಾಲ್ಕು ಘಟಕಗಳಿಂದ ಹೊರಸೂಸುತ್ತಿದ್ದು ಜನರು ಮನೆಗಳೊಳಗೇ ಸುರಕ್ಷಿತವಾಗಿರಬೇಕು ಎಂದು ಪ್ರಧಾನಿ ನಾಟೊ ಕನ್ ಟಿವಿ ಪ್ರಸಾರ ಭಾಷಣದಲ್ಲಿ ದೇಶದ ಜನತೆಗೆ ಮನವಿ ಮಾಡಿದ್ದಾರೆ. ರಿಯಾಕ್ಟರ್-ಗಳನ್ನು ಸ್ಥಿರಗೊಳಿಸಿ, ಪರಿಸ್ಥಿತಿಯನ್ನು ತಹಬಂದಿಗೆ ತರಲು ಸುಮಾರು 50 ಅಧಿಕಾರಿಗಳು ಹರಸಾಹಸ ಪಡಸುತ್ತಿದ್ದಾರೆ. ಘಟಕಗಳು ಸ್ವಯಂ ಶೀತಲೀಕರಣಗೊಳ್ಳುವ ಶಕ್ತಿಯನ್ನು ಕಳೆದುಕೊಂಡಿವೆ. ಇದರಿಂದ ವಿಕಿರಣ ಒಂದೇ ಸಮನೆ ಹೊರಬರುತ್ತಿದೆ.
ಆರಂಭದಲ್ಲಿ ಕಂಡುಬಂದಿದ್ದ ವಿಕಿರಣಕ್ಕಿಂತ ಮಂಗಳವಾರ ಬೆಳಗ್ಗೆ 100 ಪಟ್ಟು ಅಧಿಕವಾಗಿದೆ. ಆತಂಕದ ವಿಷಯವೆಂದರೆ ಇದು ಇನ್ನೂ ಹೆಚ್ಚಾಗುವ ಲಕ್ಷಣಗಳಿವೆ. ಇದು ಹೀಗೇ ಮುಂದುವರಿದರೆ ನಿಜಕ್ಕೂ ಮಾರಕವಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಎರಡನೇ ಮಹಾಯುದ್ಧದ ವೇಳೆ ಹಿರೋಶಿಮಾ ಮತ್ತು ನಾಗಸಾಕಿ ಅಣು ಬಾಂಬ್ ಸ್ಫೋಟಗಳಿಗೆ ತುತ್ತಾದ ಬಳಿಕ ಜಪಾನ್ ಎದುರಿಸುತ್ತಿರುವ ಭೀಕರ ಅಣು ದುರಂತ ಇದಾಗಿದೆ. 1986ರಲ್ಲಿ ಚೆರ್ನೊಬಿಲ್, ಉಕ್ರೇನ್ ಅಣುಸ್ಥಾವರ ಸ್ಫೋಟದ ಬಳಿಕ ವಿಶ್ವದಲ್ಲಿ ಬಂದೆರಗಿದ ದೊಡ್ಡ ದುರಂತವಿದು.
'ವಿಕಿರಣವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಇದೆ. ಆದ್ದರಿಂದ ಫುಕೋಶಿಮಾ ಸ್ಥಾವರದ 30 ಕಿ.ಮೀ. ಆಸುಪಾಸಿನಲ್ಲಿರುವ ದಯವಿಟ್ಟು ಮನೆಗಳಂದ ಆಚೆಗೆ ಬರಬೇಡಿ. ದಯವಿಟ್ಟು ಒಳಗೇ ಇದ್ದು ಬಿಡಿ. ದಯವಿಟ್ಟು ಕಿಟಕಿಗಳನ್ನು ಮುಚ್ಚಿ. ಗಾಳಿ ಒಳಬರದಂತೆ ದಯವಿಟ್ಟು ಎಚ್ಚರವಹಿಸಿ. ವೆಂಟಿಲೇಟರ್-ಗಳಿಗೆ ಚಾಲನೆ ನೀಡಲೇಬೇಡಿ' ಎಂದು ಸಂಪುಟ ಕಾರ್ಯದರ್ಶಿ ಯುಕಿಯೊ ಎಡಾನೊ ಅಪಾಯವಲಯದಲ್ಲಿನ ಜನರಲ್ಲಿ ಭಿನ್ನವಿಸಿಕೊಡಿದ್ದಾರೆ.