ಅಹ್ಮದಾಬಾದಿಗೆ ರಾಜ್ಯದ ವೈದ್ಯರ ತಂಡವೇ ಮೊದಲು ಹೋದದ್ದು
ಬೆಂಗಳೂರು : ಅಹ್ಮದಾಬಾದಿನ ಸಂತ್ರಸ್ತರ ನೆರವಿಗೆ ಧಾವಿಸಿದ ವೈದ್ಯರ ತಂಡಗಳ ಪೈಕಿಕರ್ನಾಟಕ ಕಳಿಸಿಕೊಟ್ಟಿದ್ದ ವೈದ್ಯಕೀಯ ತಂಡವೇ ಮೊದಲು ತಲುಪಿ, ಶುಶ್ರೂಷೆ ನೀಡಿದೆ.
ತಂಡದ ನೇತೃತ್ವ ವಹಿಸಿದ್ದ ಡಾ.ಬಿ.ಸದಾಶಿವ ಮೂರ್ತಿ ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಅಹ್ಮದಾಬಾದ್ಗೆ ಅಷ್ಟೇ ಅಲ್ಲದೆ ಪಾಟ್ನಾ ಹಾಗೂ ಕಛ್ಗೂ ನಮ್ಮ ವೈದ್ಯರ ತಂಡಗಳು ಹೋಗಿ, ಚಿಕಿತ್ಸೆ ನೀಡಿವೆ. ಪಾಟ್ನಾದಲ್ಲಿ ಭೂಕಂಪದಿಂದ ಅಂಥಾ ದೊಡ್ಡ ಪೆಟ್ಟೇನೂ ಆಗಿಲ್ಲ. ನಾವು ಒಟ್ಟು 20 ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಿದೆವು. ಸಾವಿನ ದವಡೆಯಲ್ಲಿದ್ದ ಸುಮಾರು 200 ಮಂದಿಯನ್ನು ರಕ್ಷಿಸಿದ ಹೆಮ್ಮೆ ನಮ್ಮದು ಎಂದರು.
ಜನವರಿ 31ರವರೆಗೆ ಸುಮಾರು 1000 ರೋಗಿಗಗಳಿಗೆ ನಮ್ಮ ವೈದ್ಯರು ತಾವೇ ಖುದ್ದು ಅಥವಾ ಇತರೆ ಶಿಬಿರಗಳಲ್ಲಿ ಚಿಕಿತ್ಸೆ ನೀಡಿದ್ದಾರೆ. ರೋಗಿಗಳ ನೂಗುನುಗ್ಗಲು ನಂತರ ಕಡಿಮೆಯಾದ ಕಾರಣ ತಂಡೋಪತಂಡವಾಗಿ ನಾವು ವಾಪಸ್ಸಾದೆವು. ಬೆಳಗಾವಿಯಿಂದ ಕಳುಹಿಸಿಕೊಟ್ಟಿರುವ ಆ್ಯಂಬ್ಯುಲೆನ್ಸ್ ಹಾಗೂ ಹ್ಯಾಂ ರೇಡಿಯೋ ಆಪರೇಟರ್ ಗುಜರಾತ್ ತಲುಪಿದ್ದು, ಈಗ ಭುಜ್ಗೆ ತೆರಳುತ್ತಿದ್ದಾರೆ ಎಂದು ಡಾ.ಮೂರ್ತಿ ಹೇಳಿದರು.
ಭೂಕಂಪ ಪೀಡಿತ ಪ್ರದೇಶಗಳಲ್ಲಿ ಈಗ ಸಂಚಾರಿ ಆಸ್ಪತ್ರೆಗಳ ಅಗತ್ಯವಿದೆ. ಸುಮ್ಮನೆ ವೈದ್ಯರು ಯಾವುದೇ ಸಲಕರಣೆ- ಸವಲತ್ತುಗಳಿಲ್ಲದೆ ನುಗ್ಗಿದರೆ ಏನೂ ಉಪಯೋಗವಿಲ್ಲ. ಇದರತ್ತ ಸರ್ಕಾರ ಗಮನ ಹರಿಸಬೇಕು ಎಂದು ಗೋಷ್ಠಿಯಲ್ಲಿ ಹಾಜರಿದ್ದ ರಾಜ್ಯ ಆರೋಗ್ಯ ಸಚಿವ ಎ.ಬಿ.ಮಲಕರೆಡ್ಡಿ ತಿಳಿಸಿದರು.