RCB: ಸತತ ಸೋಲಿನ ಬಳಿಕ ದೇವರ ಮೊರೆ ಹೋದ ಆರ್ಸಿಬಿ ಆಟಗಾರರು
ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು ಕಂಗಾಲಾಗಿರುವ ಆರ್ಸಿಬಿ ತಂಡ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 11ರಂದು ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಆರ್ಸಿಬಿ ಆಟಗಾರರು ಈಗಾಗಲೇ ಮುಂಬೈ ತಲುಪಿದ್ದಾರೆ.
ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೀನಾಯವಾಗಿ ಸೋತ ಬಳಿಕ ಆರ್ಸಿಬಿ ಮುಂದಿನ ಪಂದ್ಯವಾಡಲು ಸಜ್ಜಾಗಿದೆ. ಸತತ ಸೋಲು ಕಂಡಿರುವ ಆಟಗಾರರು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ದೇವರ ಮೊರೆ ಹೋಗಿದ್ದಾರೆ.

ಆರ್ಸಿಬಿ ಆಟಗಾರರು ಸೋಮವಾರ ಮುಂಬೈನ ಪ್ರಸಿದ್ಧ ಶ್ರೀಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವಿಜಯ್ ಕುಮಾರ್ ವೈಶಾಖ್, ಕರ್ಣ್ ಶರ್ಮಾ, ಮಯಾಂಕ್ ದಾಗರ್ ಮತ್ತು ಅನುಜ್ ರಾವತ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಮುಂಬೈ ವಿರುದ್ಧ ಗೆಲ್ಲುತ್ತಾ ಆರ್ ಸಿಬಿ
ಏಪ್ರಿಲ್ 11ರಂದು ಆರ್ಸಿಬಿ ಮುಂದಿನ ಪಂದ್ಯವನ್ನು ಆಡಲಿದೆ. ಪ್ಲೇ ಆಫ್ ತಲುಪಬೇಕು ಎಂದರೆ ಆರ್ಸಿಬಿಗೆ ಮುಂದಿನ ಪಂದ್ಯಗಳು ಸಾಕಷ್ಟು ಮಹತ್ವದ್ದಾಗಿವೆ. ಸತತ ಮೂರು ಪಂದ್ಯಗಳನ್ನು ಸೋತ ಬಳಿಕ ಗೆಲುವಿನ ಹಾದಿಗೆ ಬರಲು ಆರ್ಸಿಬಿ ಪ್ರಯತ್ನಿಸುತ್ತಿದೆ.
ಸತತ ಮೂರು ಪಂದ್ಯಗಳನ್ನು ಸೋತ ಬಳಿಕ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವಿನ ಮೂಲಕ ಗೆಲುವಿನ ಖಾತೆ ತೆರೆದಿದೆ. ಸತತ ಮೂರು ಪಂದ್ಯ ಸೋತ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು, ಅದಾದ ಬಳಿಕ ಅವರ ತಂಡ ಗೆಲುವು ಸಾಧಿಸಿತ್ತು.
ದೇವಸ್ಥಾನಕ್ಕೆ ಭೇಟಿ ನೀಡಿದ್ದು ಪಾಂಡ್ಯ ಅವರ ಆತ್ಮವಿಶ್ವಾಸ ಹೆಚ್ಚಿಸಿತ್ತು. ಈಗ ಆರ್ಸಿಬಿ ಆಟಗಾರರು ಕೂಡ ಅದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಗುರುವಾರ ಒಂದು ರೋಚಕ ಪಂದ್ಯವನ್ನು ಅಭಿಮಾನಿಗಳು ನಿರೀಕ್ಷೆ ಮಾಡಬಹುದಾಗಿದೆ.
ತಂಡದಲ್ಲಿ ಬದಲಾವಣೆ?
ಆರ್ಸಿಬಿ ಸೋಲಿಗೆ ತಂಡದ ಮ್ಯಾನೇಜ್ಮೆಂಟ್ ಕೂಡ ಪ್ರಮುಖ ಕಾರಣವಾಗಿದೆ. ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡುವಲ್ಲೇ ಎಡವುತ್ತಿರುವುದು ಸೋಲಿಗೆ ಕಾರಣ. ಕೆಕೆಆರ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ವೈಶಾಖ್ ಮುಂದಿನ ಪಂದ್ಯಗಳಲ್ಲಿ ಅವಕಾಶ ಪಡೆಯಲೇ ಇಲ್ಲ, ಎಲ್ಎಸ್ಜಿ ವಿರುದ್ಧ ಉತ್ತಮ ಪ್ರದರ್ಶನ ನಿಡಿದ ಲೋಮ್ರೋರ್ ಅವರಿಗೆ ರಾಜಸ್ಥಾನ ರಾಯಲ್ಸ್ ವಿರುದ್ಧ ಅವಕಾಶ ನೀಡಲಿಲ್ಲ, ಈ ಸಣ್ಣ ತಪ್ಪುಗಳಿಗೆ ತಂಡ ದೊಡ್ಡ ಬೆಲೆ ತೆತ್ತಿದೆ.
ಮುಂಬೈ ವಿರುದ್ಧ ಪಂದ್ಯ ಗೆಲ್ಲಬೇಕಾದರೆ ಮೊದಲು ಸರಿಯಾದ ಪ್ಲೇಯಿಂಗ್ ಇಲೆವೆನ್ ಆಯ್ಕೆ ಮಾಡಬೇಕಿದೆ ಎಂದು ಅಭಿಮಾನಿಗಳು, ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications