ಕೆ.ಆರ್.ಎಸ್.ನಲ್ಲಿ ಪೂಜೆಗೂ ಪೈಪೋಟಿ
ಬೆಂಗಳೂರು : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆರೆ ಹಾವಳಿಯಿಂದ ಉಂಟಾಗಿರುವ ಹಾನಿ ಸರಿಪಡಿಸಲು ಹಾಗೂ ಪರಿಹಾರ ನೀಡಲು ಸಚಿವ ಸಂಪುಟ ತಾತ್ಕಾಲಿಕ ಪರಿಹಾರ ಬಿಡುಗಡೆ ಮಾಡಿದೆ. ಇತ್ತ ಕಾವೇರಿ ಜಲಾನಯನ ಪ್ರದೇಶದ ಎಲ್ಲ ಜಲಾಶಯಗಳೂ ಭರ್ತಿಯಾಗಿವೆ.
ಲಿಂಗನಮಕ್ಕಿ ಜಲಾಶಯದ ಒಳಹರಿವು ಹೆಚ್ಚಿದ್ದು, ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ. ಕೆಳದಂಡೆಯ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಕೆಲವೇ ತಿಂಗಳುಗಳ ಹಿಂದೆ ಮಳೆಯಿಲ್ಲದೆ ಬರಿದಾಗಿ ವೇಣುಗೋಪಾಲ ದೇವಾಲಯದ ದರ್ಶನ ನೀಡಿದ್ದ, ಕೆ.ಆರ್.ಎಸ್. ಈಗ ಭರ್ತಿಯಾಗಿದೆ. ಕಾವೇರಿ ಪೂಜೆ ಮಾಡಲು ರಾಜಕೀಯ ಪಕ್ಷಗಳು ಪೈಪೋಟಿಗೆ ನಿಂತಿವೆ. ಕಾವೇರಿಗೆ ಮೊರದ ಬಾಗಿನ ನೀಡುವವರ ಸಂಖ್ಯೆಯೂ ಹೆಚ್ಚಿದೆ.
ಕಬಿನಿ, ಹಾರಂಗಿ, ತುಂಗಭದ್ರಾ, ಮಲಪ್ರಭಾ, ಘಟಪ್ರಭಾ ಜಲಾಶಯಗಳೆಲ್ಲ ಭರ್ತಿಯಾಗಿವೆ. ಈ ಮಧ್ಯೆ ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಉತ್ತರ ಒಳನಾಡಿನಲ್ಲಿ ಮಳೆ ದುರ್ಬಲವಾಗಿತ್ತು. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕವಾಗಿ ಮಳೆ ಸುರಿದಿದೆ.
ಆಗುಂಬೆಯಲ್ಲಿ 4, ಮೂಡಿಬಿದ್ರೆ, ಕಮ್ಮರಡಿಗಳಲ್ಲಿ 3, ಕಾರ್ಕಳ, ಸುಬ್ರಹ್ಮಣ್ಯ, ಕಳಸ, ಕಾರವಾರ, ಚೆನ್ನಪಟ್ಟಣ, ಬಿಜಾಪುರ, ನಾಪೋಕ್ಲುವಿನಲ್ಲಿ ತಲಾ 1 ಸೆಂಟಿ ಮೀಟರ್ ಮಳೆ ಬಿದ್ದಿದೆ. ಗುರುವಾರದ ವರೆಗಿನ ಮುನ್ಸೂಚನೆಯಂತೆ ದಕ್ಷಿಣ ಒಳನಾಡು ಹಾಗೂ ಕರಾವಳಿ ಕರ್ನಾಟಕದಲ್ಲಿ ವ್ಯಾಪಕವಾಗಿ ಮಳೆ ಬೀಳುವ ಸಂಭವ ಇದೆ. ಉತ್ತರ ಒಳನಾಡಿನ ಒಂದೆರಡು ಕಡೆ ಮಳೆ ನಿರೀಕ್ಷಿತ ಎಂದು ಹವಾಮಾನ ಇಲಾಖೆ ಹೇಳಿದೆ.
ಸ್ಥಳೀಯ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಒಣ ಹವೆ ಇದ್ದು, ಸಂಜೆ ಅಥವಾ ರಾತ್ರಿ ಒಂದೆರಡು ಬಾರಿ ಹಗುರದಿಂದ ಸಾಧಾರಣ ಮಳೆ ಬೀಳಲಿದೆ.