Delhi Rain: ದೆಹಲಿಯಲ್ಲಿ ದಾರಾಕಾರ ಮಳೆ: ಬಿಸಿಲಿನ ಶಾಖದಿಂದ ಪರಿಹಾರ
ದೆಹಲಿ ಏಪ್ರಿಲ್ 23: ರಾಷ್ಟ್ರ ರಾಜಧಾನಿಯಲ್ಲಿ ಹಠಾತ್ ಮಳೆ ಆರಂಭವಾಗಿದೆ. ಇದರಿಂದಾಗಿ ದೆಹಲಿ ಜನ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬಲವಾದ ಗಾಳಿಯೊಂದಿಗೆ ಆರಂಭವಾದ ಮುಂಗಾರು ಪೂರ್ವ ಮಳೆ ದೆಹಲಿಯಲ್ಲಿ ತಾಪಮಾನವನ್ನು ಕಡಿಮೆ ಮಾಡಿದೆ.
ಪ್ರಾದೇಶಿಕ ಹವಾಮಾನ ಇಲಾಖೆ ದೆಹಲಿ-ಎನ್ಸಿಆರ್ನಲ್ಲಿ ಇಂದು ಹಗುರದಿಂದ ಮಧ್ಯಮ ತೀವ್ರತೆಯ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿತ್ತು. ಮಧ್ಯಾಹ್ನ ತಾಪಮಾನ ಸುಮಾರು 35 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಸಂಜೆಯ ಸಮಯದಲ್ಲಿ ಧೂಳಿನಿಂದ ಕೂಡಿದ ಬಿರುಗಾಳಿ ಬೀಸತೊಡಗಿತು. ಬಳಿಕ ದಾರಾಕಾರ ಮಳೆ ಸುರಿದಿದೆ. ಈಗಲೂ ಮಳೆ ಮುಂದುವರೆದಿದೆ.

ಭಾನುವಾರ ಭಾರತೀಯ ಹವಾಮಾನ ಇಲಾಖೆ, ಮುಂಬರುವ 2-3 ದಿನಗಳಲ್ಲಿ ದೆಹಲಿಯಲ್ಲಿ ತಾಪಮಾನವು 38 ಡಿಗ್ರಿ ಸೆಲ್ಸಿಯಸ್ನಲ್ಲಿ ಉಳಿಯುವ ನಿರೀಕ್ಷೆಯಿದೆ ಮತ್ತು ಸೋಮವಾರ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು. ಆದರೆ ಎರಡು ದಿನವೂ ಮಳೆಯಾಗಲಿಲ್ಲ. ಸೋಮವಾರ ದೆಹಲಿಯಲ್ಲಿ ತಾಪಮಾನವು 30 ಡಿಗ್ರಿಗಿಂತ ಹೆಚ್ಚಿತ್ತು. ಸಂಜೆ ತಂಪಾದ ಗಾಳಿಯೊಂದಿಗೆ ವಾತಾವರಣ ತಂಪಾಗಿತ್ತಾದರೂ ಮಳೆಯಾಗಲಿಲ್ಲ.
ಕರ್ನಾಟಕದಲ್ಲಿಂದು ಮಳೆ
ಕರ್ನಾಟಕದಲ್ಲಿ ಮುಂದಿನ ಐದು ದಿನ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹಗುರ ಮಳೆ ಜತೆ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬೀದರ್, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ, ಕೋಲಾರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಏಪ್ರಿಲ್ 23 ರಂದು ಬಿಸಿಗಾಳಿ ಇರಲಿದೆ.
ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು ಸೇರಿದಂತೆ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಅಂತಾ ವರದಿಯಾಗಿದೆ.
ಇನ್ನೂ ಏಪ್ರಿಲ್ 24ರಂದು ಮೈಸೂರು, ಮಂಡ್ಯ, ಚಿಕ್ಕಮಗಳೂರು, ಹಾಸನ, ಕೊಡಗು ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಿಸಿಲೂರು ಕೊಪ್ಪಳ ಸೇರಿ ಹಲಧಿವೆಡೆ ಸೋಮವಾರ ತಾಸಿಗೂ ಹೆಚ್ಚು ಕಾಲ ಮಳೆ ಸುರಿದಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲಿನ ಪ್ರಖರತೆಯಿಂದ ಜನತೆ ಹೈರಾಣಾಗಿದ್ದರು. ಸಕಾಲಕ್ಕೆ ಮಳೆಯಾಗಿದ್ದರಿಂದ ಜನರ ಮೊಗದಲ್ಲಿಮಂದಹಾಸ ಮೂಡಿದೆ.












Click it and Unblock the Notifications