ಕರಿಬೇವಿನಂತೆ ಬಿಸಾಡಿದರು... 14 ವರ್ಷಗಳ ನಿಷ್ಠೆಗೆ ಸಿಕ್ಕ ಬೆಲೆ ಇದು! 56ನೇ ವಯಸ್ಸಿನಲ್ಲಿ ಪೋರ್ಟರ್ ರೈಡರ್ ಆದ ವೃದ್ಧನ ಕಥೆ
ಕಾರ್ಪೊರೇಟ್ ಜಗತ್ತು ಹೊರಗಿನಿಂದ ಎಷ್ಟು ಸುಂದರವೋ, ಒಳಗಿನಿಂದ ಅಷ್ಟೇ ಕ್ರೂರ ಕೂಡ ಹೌದು. ದಶಕಗಳ ಕಾಲ ಕಂಪನಿಗಾಗಿ ಬೆವರು ಸುರಿಸಿ ದುಡಿದರೂ ಕೂಡ ಲೇಆಫ್ ವಿಷಯ ಬಂದಾಗ ಇದೆಲ್ಲಾ ಮ್ಯಾಟರೇ ಆಗಲ್ಲ. ಆ ಒಂದು ಲೇಆಫ್ ಅನ್ನೋದು ವ್ಯಕ್ತಿಯೊಬ್ಬನ ಬದುಕನ್ನೇ ಹೇಗೆ ಬುಡಮೇಲು ಮಾಡಿಬಿಡುತ್ತದೆ ಎನ್ನುವುದನ್ನಾ ಕೂಡ ಲೆಕ್ಕಿಸಲ್ಲ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, 14 ವರ್ಷಗಳ ಕಾಲ ಪ್ರತಿಷ್ಠಿತ ವಿಮಾ ಕಂಪನಿಯೊಂದರಲ್ಲಿ ಕೆಲಸ ಮಾಡಿ ದಿಢೀರ್ ಉದ್ಯೋಗ ಕಳೆದುಕೊಂಡ 56 ವರ್ಷದ ವ್ಯಕ್ತಿಯೊಬ್ಬರು, ಬದುಕಿನ ಬಂಡಿ ಸಾಗಿಸಲು ಇದೀಗ ಪೋರ್ಟರ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ.
ಈ ಕುರಿತಾದ ಕಥೆಯೊಂದು ಸಾಮಾಜಿಕ ಜಾಲತಾಣ ಲಿಂಕ್ಡ್ಇನ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರತದ ಗಿಗ್ ಎಕಾನಮಿ ಹಾಗೂ ಕಾರ್ಪೊರೇಟ್ ಜಗತ್ತಿನ ಕರಾಳ ಸತ್ಯವನ್ನು ಅನಾವರಣಗೊಳಿಸಿದೆ.

ಕಾರ್ಪೊರೇಟ್ ಕೆಲಸ ಕಳೆದುಕೊಂಡು ಡೆಲಿವರಿ ಬಾಯ್ ಆದ ಮನೋಜ್
ಕೇವಲ 40 ರೂಪಾಯಿಗಳ ಒಂದು ಸಣ್ಣ ಡೆಲಿವರಿ ಆರ್ಡರ್, ಒಬ್ಬ ಮನುಷ್ಯನ ಬದುಕಿನ ಅಸಹಾಯಕತೆಯನ್ನು ಬಿಚ್ಚಿಟ್ಟಿದೆ. ಸಾಮಾಜಿಕ ಕಾರ್ಯಕರ್ತ ಕಿರಣ್ ವರ್ಮಾ ಎಂಬುವವರು ತಮ್ಮ ಕಚೇರಿಯ ಕೆಲಸಕ್ಕಾಗಿ ನೋಯ್ಡಾದಲ್ಲಿ ಪೋರ್ಟರ್ ಆಪ್ ಮೂಲಕ ಪತ್ರವೊಂದನ್ನು ಕಳುಹಿಸಲು ಡೆಲಿವರಿ ಬುಕ್ ಮಾಡಿದ್ದರು.
ಪಾರ್ಸೆಲ್ ಪಡೆಯಲು ಬಂದದ್ದು ಒಬ್ಬ ಯುವಕನಲ್ಲ, ಬದಲಾಗಿ ವಯಸ್ಸಾದ 56 ವರ್ಷದ ಮನೋಜ್ ಎಂಬ ವ್ಯಕ್ತಿ. ಅಚ್ಚರಿಯಿಂದ ಅವರನ್ನು ಮಾತನಾಡಿಸಿದಾಗ ಹೊರಬಿದ್ದ ಸತ್ಯ ಕಣ್ಣೀರು ತರಿಸುವಂತಿತ್ತು.
ಮನೋಜ್ ಅವರು ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಕಂಪನಿಯ ಆಡಳಿತ ವಿಭಾಗದಲ್ಲಿ ಸತತ 14 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಆದರೆ 2023ರಲ್ಲಿ ನಡೆದ ಲೇಆಫ್ ಪ್ರಕ್ರಿಯೆಯಲ್ಲಿ ಅವರು ತಮ್ಮ ಕೆಲಸ ಕಳೆದುಕೊಂಡರು. ವಯಸ್ಸಾದ ಕಾರಣ ಹಾಗೂ ಆರೋಗ್ಯದ ಸಮಸ್ಯೆಗಳಿಂದಾಗಿ ಬೇರೆಲ್ಲೂ ಕೆಲಸ ಸಿಗದೆ, ಅನಿವಾರ್ಯವಾಗಿ ಗಿಗ್ ಕಾರ್ಮಿಕರಾಗಿ, ಪೋರ್ಟರ್ ರೈಡರ್ ಆಗಿ ದುಡಿಯುತ್ತಿದ್ದಾರೆ. "ಇಂದು ಯಾವುದೇ ಕೆಲಸವಿರಲಿಲ್ಲ, ಅದಕ್ಕಾಗಿ ಕಾಯುತ್ತಿದ್ದೆ" ಎಂದು ಮನೋಜ್ ಹೇಳಿದಾಗ, ಆ ಮಾತಿನಲ್ಲಿದ್ದ ಅಸಹಾಯಕತೆ ಎಂಥವರನ್ನೂ ಭಾವುಕರನ್ನಾಗಿಸುತ್ತದೆ.
"ನಾವು ಕರಿಬೇವಿನ ಸೊಪ್ಪಿನಂತೆ"
ಕಿರಣ್ ವರ್ಮಾ ಅವರು ಮನೋಜ್ ಅವರನ್ನು ಒಳಗೆ ಕರೆದು ಮಾತನಾಡಿಸಿದಾಗ, ಆ ವೃದ್ಧನ ಮಾತುಗಳು ಕಾರ್ಪೊರೇಟ್ ಜಗತ್ತಿನ ನೈಜ ಮುಖವನ್ನು ತೆರೆದಿಟ್ಟವು. ಕೆಲಸ ಕಳೆದುಕೊಂಡ ಬಗ್ಗೆ ಕೇಳಿದಾಗ ಮನೋಜ್ ಅವರು ಹೇಳಿದ ಒಂದು ಮಾತು ಈಗ ಇಂಟರ್ನೆಟ್ನಲ್ಲಿ ಸಂಚಲನ ಸೃಷ್ಟಿಸಿದೆ.
"ಮಗು, ಅಡುಗೆ ಮಾಡುವಾಗ ಮೊದಲು ಕರಿಬೇವಿನ ಸೊಪ್ಪನ್ನು ಹಾಕುತ್ತಾರೆ, ಆದರೆ ಊಟ ಮಾಡುವಾಗ ಅದೇ ಕರಿಬೇವನ್ನು ಮೊದಲು ತೆಗೆದು ಬಿಸಾಕುತ್ತಾರೆ. ನಮ್ಮಂತಹ ಹಿರಿಯ ಉದ್ಯೋಗಿಗಳ ಪರಿಸ್ಥಿತಿಯೂ ಕಾರ್ಪೊರೇಟ್ ಕಂಪನಿಗಳಲ್ಲಿ ಇದೇ ರೀತಿ ಆಗಿದೆ" ಎಂದು ಅವರು ಬಹಳ ಮಾರ್ಮಿಕವಾಗಿ ನುಡಿದರು.
ಎಷ್ಟೇ ಅನುಭವವಿದ್ದರೂ, ಕಂಪನಿಗೆ ಅವಶ್ಯಕತೆ ಮುಗಿದ ಮೇಲೆ ನಿರ್ದಾಕ್ಷಿಣ್ಯವಾಗಿ ಹೊರಹಾಕುವ ವಾಸ್ತವವನ್ನು ಈ ಸಾಲುಗಳು ಕಣ್ಣಿಗೆ ಕಟ್ಟುವಂತೆ ವಿವರಿಸಿವೆ. ಕಿರಣ್ ವರ್ಮಾ ಈ ಪೋಸ್ಟ್ ಹಂಚಿಕೊಳ್ಳುತ್ತಲೇ, ಅನೇಕರು ತಮ್ಮ ಲೇಆಫ್ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಮನೋಜ್ ಅವರ ಪರಿಸ್ಥಿತಿಯನ್ನು ಅರಿತ ಕಿರಣ್, ಡೆಲಿವರಿ ಶುಲ್ಕಕ್ಕಿಂತ ಹೆಚ್ಚಿನ ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಗಿಗ್ ಎಕಾನಮಿ ಮತ್ತು ವಯಸ್ಸಾದ ಉದ್ಯೋಗಿಗಳ ಸಂಕಷ್ಟ: ಪೋರ್ಟರ್ ಪ್ರತಿಕ್ರಿಯೆ
ಈ ಪೋಸ್ಟ್ ಲಿಂಕ್ಡ್ಇನ್ನಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕ ವೃತ್ತಿಪರರು, ಎಚ್ಆರ್ ಅಧಿಕಾರಿಗಳು ಹಾಗೂ ಸ್ಟಾರ್ಟ್-ಅಪ್ ಸಮುದಾಯದವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಯಸ್ಸಾದ ಕಾರಣಕ್ಕೆ ಕೆಲಸ ನಿರಾಕರಿಸುವ ಕಂಪನಿಗಳ ಧೋರಣೆ ಹಾಗೂ ಭಾರತದಲ್ಲಿ ಲೇಆಫ್ಗೆ ತುತ್ತಾಗುವ ಹಿರಿಯ ಉದ್ಯೋಗಿಗಳಿಗೆ ಮರುಉದ್ಯೋಗ ಸಿಗುವುದು ಎಷ್ಟು ಕಷ್ಟ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.
ಇನ್ನು, ಈ ವೈರಲ್ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಪೋರ್ಟರ್ ಸಂಸ್ಥೆ, "ನಮ್ಮ ತಂಡದ ಶ್ರಮವನ್ನು ಗುರುತಿಸಿ ಈ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು" ಎಂದು ತಿಳಿಸಿದೆ. ಆದರೆ ರೈಡರ್ನ ವೈಯಕ್ತಿಕ ವಿಚಾರದ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಒಟ್ಟಾರೆಯಾಗಿ, ರಸ್ತೆಯಲ್ಲಿ ನಾವು ನೋಡುವ ಪ್ರತಿಯೊಬ್ಬ ಡೆಲಿವರಿ ಬಾಯಿ ಹಿಂದೆಯೂ ನಮಗೆ ತಿಳಿಯದ ಒಂದೊಂದು ಹೋರಾಟದ ಕಥೆಯಿರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುತ್ತಾರೆ. ಹೀಗಾಗಿ ಅವರೊಂದಿಗೆ ಸ್ವಲ್ಪ ಪ್ರೀತಿ, ಕರುಣೆಯಿಂದ ವರ್ತಿಸುವುದು ಮನುಷ್ಯರಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬುದನ್ನು ನೋಯ್ಡಾದ ಈ ಪೋರ್ಟರ್ ರೈಡರ್ ಕಥೆ ನಮಗೆಲ್ಲರಿಗೂ ನೆನಪಿಸಿದೆ.














Click it and Unblock the Notifications