Karnataka Monsoon: ರಾಜ್ಯದಲ್ಲಿ ಮತ್ತೆ ದುರ್ಬಲಗೊಂಡ ಮುಂಗಾರು! ಜು.10ರಿಂದ ಮಳೆ ಕಡಿಮೆ, ರೈತರಿಗೆ ಆತಂಕ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ವಾರಗಳಿಂದ ನಿರೀಕ್ಷಿತ ಮಳೆ ಆಗದೇ ಕೇವಲ ತಂಪು ವಾತಾವರಣ ನಿರ್ಮಾಣವಾಗಿದೆ. ಇನ್ನೂ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಚುರಕಾಗಿದ್ದು, ಅಬ್ಬರಿಸಿದ್ದ ಮುಂಗಾರು ಮಳೆ ಏಕಾಎಕಿ ದುರ್ಬಲಗೊಂಡಿದೆ. ಭಾರೀ ಮಳೆ ಬಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತೆ ಬಿಸಿಲಿನ ವಾತಾವರಣ ಸೃಷ್ಟಿಯಾಗಿದೆ. ಬರಗಾಲ ಛಾಯೆ ಆವರಿಸಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರವೇ ಸಾಧಾರಣದಿಂದ ಭಾರೀ ಮಳೆ ನಿರೀಕ್ಷೆ ಇದೆ..
ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಇಂದಿನ ಮುನ್ಸೂಚನೆ ಪ್ರಕಾರ, ಶುಕ್ರವಾರವರೆಗೆ ಮಾತ್ರವೇ ರಾಜ್ಯದಲ್ಲಿ ಮಳೆ ಆಗಲಿದೆ. 'ರೆಡ್ ಅಲರ್ಟ್' ಪಡೆದಿದ್ದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಈ ಸಂಬಂಧ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜುಲೈ 9ರಂದು ಗುರುವಾರ 'ಆರೆಂಜ್ ಅಲರ್ಟ್' ಹಾಗೂ ಶುಕ್ರವಾರ (ಜುಲೈ 10) ಒಂದು ದಿನ 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಉಳಿದ ದಿನ ಮಳೆ ಸಂಪೂರ್ಣವಾಗಿ ಇಳಿಕೆ ಆಗಿದ್ದು, ಅಲ್ಲಲ್ಲಿ ಹಗುರ ಮಳೆ ಆಗಬಹುದೆಂದು ಹವಾಮಾನ ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ.

ಮತ್ತೆ ದುರ್ಬಲಗೊಂಡ ಮುಂಗಾರು!
ಬೆಳಗಾವಿ ಬಿಟ್ಟರೆ ಉತ್ತರ ಕರ್ನಾಟಕದ ಯಾವೊಂದು ಜಿಲ್ಲೆಗೂ ಭಾರೀ ಮಳೆಯ ಮುನ್ನೆಚ್ಚರಿಕೆ ಇಲ್ಲ. ಬೆಳಗಾವಿಯಲ್ಲಿ ಇಂದು ಮಾತ್ರವೇ ಸಾಧಾರಣದಿಂದ ಭಾರೀ ಮಳೆ (ಗರಿಷ್ಠ 115 ಮಿಲಿ ಮೀಟರ್) ಮಳೆ ಹಿನ್ನೆಲೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಉಳಿದಂತೆ ಇತರ ಉತ್ತರ ಒಳನಾಡಿನ ಜಿಲ್ಲೆಗಳ ಕೆಲವೆಡೆ ಹಗುರ ಮಳೆ ಆಗಬಹುದು. ಇಲ್ಲವೇ ಉರಿಬಿಸಿಲು ಆವರಿಸುವ ಲಕ್ಷಣಗಳು ದಟ್ಟವಾಗಿವೆ. ಈ ಮೂಲಕ ಮಳೆ ಬಂತೆಂದು ಸಂತಸಗೊಂಡಿದ್ದ ಅಪಾರ ರೈತರಿಗೆ ಮತ್ತೆ ಚಿಂತೆ ಕಾಡತೊಡಗಿದೆ. ಸಕಾಲಕ್ಕೆ ಮಳೆ ಆಗದೇ ಕಾಡಿದ್ದ ಮುಂಗಾರು ಮತ್ತೆ ಕಣ್ಮರೆಯಾದರೆ ಬೆಳೆಗಳ ಗತಿ ಏನು ಎಂದು ಆಲೋಚಿಸತೊಡಗಿದ್ದಾರೆ. ಈಗಷ್ಟೇ ಸುರಿದ ಮಳೆಗೆ ಕೊಂಚ ಚೇತರಿಸಿಕೊಂಡ ಬೆಳೆಗಳು ಮತ್ತೆ ಬಿಸಿಲಿಗೆ ತುತ್ತಾಗಬಹುದು.
ಇಂದು ಮಲೆನಾಡಿಗೆ ಬಿರುಗಾಳಿ ಮಳೆ
ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಗುರುವಾರ ಬಿರುಗಾಳಿ ಸಹಿತ ಜೋರು ಮಳೆ ಸುರಿಯಲಿದೆ. ಈ ಜಿಲ್ಲೆಗಳಲ್ಲಿ 115 ಮಿಲಿ ಮೀಟರ್ನಿಂದ 200 ಮಿಲಿ ಮೀಟರ್ವರೆಗೆ ಮಳೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ 'ಆರೆಂಜ್ ಅಲರ್ಟ್' ನೀಡಲಾಗಿದೆ. ಶುಕ್ರವಾರ ಇದೇ 4 ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಇಳಿಕೆ ಆಗಲಿದ್ದು, ಅಂದು ಸಾಧಾರಣದಿಂದ ಭಾರೀ ಮಳೆ ಬರುವ ನಿರೀಕ್ಷೆ ಹಿನ್ನೆಲೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ಜುಲೈ 10ರ ನಂತರ ಮಳೆ ದುರ್ಬಲ, ಆತಂಕ
ಜುಲೈ 11ರಿಂದ ರಾಜ್ಯದಲ್ಲಿ ಮಳೆ ಸಂಪೂರ್ಣವಾಗಿ ತಗ್ಗುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಕೇವಲ ಒಂದೇ ದಿನದಲ್ಲಿ ಒಳನಾಡು, ಕರಾವಳಿಯ ಮಳೆ ಚಿತ್ರಣ ಬದಲಾಗಿದೆ. ಸಮುದ್ರಮಟ್ಟದಲ್ಲಿ ಉಂಟಾಗಿದ್ದ ವೈಪರೀತ್ಯಗಳ ಪ್ರಭಾವ ತಗ್ಗಿದೆ. ಉತ್ತರ ಭಾರತದ ಇತರ ರಾಜ್ಯಗಳಲ್ಲಿ ಮುಂಗಾರು ಮಳೆ ಹೆಚ್ಚು ಸಕ್ರಿಯವಾಗಿದೆ. ಕರುನಾಡಿನಲ್ಲಿ ಮಳೆಗಾಲದಲ್ಲೂ ಮತ್ತೆ ಬೇಸಿಗೆಯ ಅನುಭವವಾಗುವ ಸಾಧ್ಯತೆ ಇದು ರೈತರ ಆತಂಕಕ್ಕೆ ಕಾರಣವಾಗಿದೆ.













Click it and Unblock the Notifications