Heavy Rain: ಇನ್ನೆರಡು ದಿನ ಮಾತ್ರ ರಾಜ್ಯದಲ್ಲಿ ಮಳೆ; ಎಲ್ಲೆಲ್ಲಿ ತಿಳಿಯಿರಿ
ಅಶ್ವಿನಿ ಮಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಪೆ ತೋರಿದೆ. ಯುಗಾದಿ ಹಬ್ಬದ ದಿನದಿಂದ ಹಲವು ಜಿಲ್ಲೆಗಳು ವ್ಯಾಪಕ ಮಳೆಯನ್ನು ಪಡೆದಿವೆ. ಏಪ್ರಿಲ್ 24ರವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಸೋಮವಾರ ಕೂಡ ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಬೆಳಗ್ಗೆಯೇ ಮಳೆಯಾಗಿದ್ದು, ವಾತಾವರಣವನ್ನು ತಂಪಾಗಿಸಿದೆ. ಕೊಡಗು ಜಿಲ್ಲೆಯ ಹಲವು ಕಡೆಗಳಲ್ಲಿ ಸೋಮವಾರ ಧಾರಾಕಾರ ಮಳೆಯಾಗಿದೆ. ಬಳ್ಳಾರಿ, ವಿಜಯಪುರ ಜಿಲ್ಲೆಗಳಲ್ಲಿ ಮಧ್ಯಾಹ್ನ ವ್ಯಾಪಕ ಮಳೆಯಾಗಿದೆ.

ಇನ್ನೆರಡು ದಿನ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಆ ಬಳಿಕ ರಾಜ್ಯದಲ್ಲಿ ಒಣಹವೆ ಇರಲಿದೆ ಎಂದು ಮುನ್ಸೂಚನೆ ನೀಡಿದೆ.
ಎರಡು ದಿನ ಎಲ್ಲೆಲ್ಲಿ ಮಳೆ
ಏಪ್ರಿಲ್ 23, ಮಂಗಳವಾರ ಬೀದರ್, ಕಲಬುರಗಿ, ಬೆಳಗಾವಿ, ಬಾಗಲಕೋಟೆಯ ಜಿಲ್ಲೆಯಲ್ಲಿ ಚದುರಿದಂತೆ ಬಿರುಗಾಳಿ ಸಹಿತ ಮಳೆಯಾಗಲಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ, ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಮಾಹಿತಿ ನೀಡಿದೆ.
ಏಪ್ರಿಲ್ 24 ರಂದು ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಏಪ್ರಿಲ್ 25ರಿಂದ ಏಪ್ರಿಲ್ 28ರವರೆಗೆ ರಾಜ್ಯದಲ್ಲಿ ಬಹುತೇಕ ಒಣಹವೆ ಇರಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಿದೆ.
ಬೆಂಗಳೂರಿಗೆ ಮಳೆ ಯಾವಾಗ
ಬಿಸಿಲ ಬೇಗೆಯಿಂದ ಬೆಂದಿರುವ ಬೆಂಗಳೂರು ನಗರಕ್ಕೆ ಮಳೆ ಇನ್ನೂ ಸಂಪೂರ್ಣವಾಗಿ ಕೃಪೆ ತೋರಿಲ್ಲ. ಎರಡು ದಿನ ನಗರದ ಹಲವು ಕಡೆಗಳಲ್ಲಿ ಮಳೆಯಾದರೂ, ಕಾದ ಹೆಂಚಿನ ಮೇಲೆ ನೀರು ಚಿಮುಕಿಸದಂತಾಗಿದೆ. ನಾಳೆ ಬೆಂಗಳೂರಿಗೆ ಮಳೆ ಬರದೇ ಇದ್ದರೆ, ಮೇ ಮೊದಲ ವಾರದವರೆಗೆ ಬೆಂಗಳೂರು ಜನ ಕಾಯಬೇಕಾಗುತ್ತದೆ.
ಅಶ್ವಿನಿ ಮಳೆ ರಾಜ್ಯದಲ್ಲಿ ಹಲವು ಜಿಲ್ಲೆಗಳಿಗೆ ಕೃಪೆ ತೋರಿದ್ದರೂ ಇನ್ನೂ ಹಲವು ಜಿಲ್ಲಗಳು ಮಳೆಗಾಗಿ ಕಾಯುತ್ತಿವೆ. ಏಪ್ರಿಲ್ 27ರಿಂದ ಭರಣಿ ಮಳೆ ಆರಂಭವಾಗಲಿದ್ದು, ಎಲ್ಲಾ ಜಿಲ್ಲೆಗಳಿಗೂ ಮಳೆಯಾದರೆ ಸಾಕು ಎನ್ನವಂತಾಗಿದೆ.












Click it and Unblock the Notifications