ದಸರಾಗೆ ಕೈ ಬೀಸಿ ಕರೆಯುತ್ತಿದೆ ಸಿಂಗಾರಗೊಂಡ ಅರಮನೆ ನಗರಿ
ಮೈಸೂರು, ಸೆಪ್ಟೆಂಬರ್ 29: ಅರಮನೆ ನಗರಿಯಲ್ಲಿ ದಸರಾ ರಂಗು ನಿಧಾನಗತಿಯಲ್ಲಿ ಆರಂಭವಾಗಿದೆ. ದಸರಾ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿದ್ದರೆ, ರಸ್ತೆಗಳ ದುರಸ್ತಿ, ಕಟ್ಟಡಗಳಿಗೆ ಸುಣ್ಣ, ಬಣ್ಣ ಬಳಿಯುವ ಕಾರ್ಯಗಳು ಸಮರೋಪಾದಿಯಲ್ಲಿ ಸಾಗುತ್ತಿವೆ. ಇನ್ನು ದಸರಾದ ಪ್ರಮುಖ ಆಕರ್ಷಣೆಯ ಕೇಂದ್ರವಾದ ಅರಮನೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.
ಈಗಾಗಲೇ ಅರಮನೆಯನ್ನು ಶುಚಿಗೊಳಿಸುವ, ವಿದ್ಯುತ್ ಬಲ್ಬ್ ಗಳನ್ನು ಅಳವಡಿಸುವ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದೆ. ಈಗಾಗಲೇ ಅರಮನೆಯ ಪ್ರಮುಖ ದ್ವಾರಗಳಾದ ಬಲರಾಮ, ಜಯರಾಮ, ಮಾರ್ತಾಂಡ ದ್ವಾರಗಳಿಗೆ ಬಣ್ಣ ಬಳಿಯಲಾಗಿದೆ. ಅರಮನೆಯ ಆವರಣದಲ್ಲಿ ದಸರಾಕ್ಕೆ ಸಿದ್ಧತೆಗಳು ಆರಂಭವಾಗಿವೆ.[ಮೈಸೂರು ದಸರಾ: ಅ.1ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ]
ಅರಮನೆ ಹಾಗೂ ದ್ವಾರಗಳಲ್ಲಿ ಕೆಟ್ಟು ಹೋಗಿರುವ ಬಲ್ಬ್ ಗಳನ್ನು ತೆಗೆದು, ಹೊಸದನ್ನು ಅಳವಡಿಸಲಾಗುತ್ತಿದೆ. ಈಗಾಗಲೇ ಅರಮನೆಯಲ್ಲಿನ ಸಿಂಹಾಸನ ಜೋಡಿಸಲಾಗಿದ್ದು, ಬಿಗಿ ಭದ್ರತೆಯಲ್ಲಿ ಇಡಲಾಗಿದೆ. ಜಂಬೂಸವಾರಿ ಹಾದು ಹೋಗುವ ಸಯ್ಯಾಜಿರಾವ್ ರಸ್ತೆ ಸೇರಿದಂತೆ ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತಿದೆ.
ಪ್ರವಾಸಿಗರ ಸಂಖ್ಯೆ ಕಡಿಮೆ...!
ನಗರದಲ್ಲಿ ದಸರಾ ಕಳೆ ನಿಧಾನವಾಗಿ ಆರಂಭಗೊಂಡಿದೆ. ಕಾವೇರಿ ವಿವಾದದ ಕರಿಛಾಯೆ ಆವರಿಸುವುದರಿಂದ ಸ್ವಲ್ಪಮಟ್ಟಿಗೆ ದಸರಾದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಹೊರಗಿನಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಅನುಮಾನವಾಗಿದೆ.
ವ್ಯಾಪಾರಕ್ಕೆ ಹೊಡೆತ
ಕಳೆದ ವರ್ಷ ಸರಳ ದಸರಾ ಎಂದು ಮೊದಲೇ ಘೋಷಣೆ ಮಾಡಿದ್ದರಿಂದ ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿತ್ತು. ಈ ಬಾರಿ ಭಿನ್ನವಾಗಿ ದಸರಾ ಆಚರಿಸಲಾಗುತ್ತಿದೆ. ವೈಭದಿಂದಲೇ ಆಚರಿಸುತ್ತಿದ್ದೇವೆ ಎಂಬಂತ ಮಾತುಗಳನ್ನು ಆಡುತ್ತಾ ಬಂದಿದ್ದರೂ ಹಿಂದಿನ ವರ್ಷಗಳ ಹೋಲಿಸಿದರೆ ಯಾವುದೇ ಸಂಭ್ರಮ ಕಂಡು ಬರುತ್ತಿಲ್ಲ.
ಸರಳವೋ ಅದ್ಧೂರಿಯೋ
ಮಳೆಯಾಗದೆ ರೈತರು ಬೆಳೆ ಬೆಳೆಯಲಾರದೆ ಕಂಗಾಲಾಗಿದ್ದಾರೆ ಆದ್ದರಿಂದ ಅದ್ಧೂರಿ ದಸರಾ ಬದಲು ಸಾಂಪ್ರದಾಯಿಕ ಸರಳ ದಸರಾವನ್ನು ಆಚರಿಸಿ ಎಂದು ಒಂದು ವರ್ಗದ ಜನರು ಒತ್ತಾಯಿಸಿಕೊಂಡು ಬಂದಿದ್ದರೆ, ಮತ್ತೊಂದೆಡೆ ವ್ಯಾಪರೋದ್ಯಮದವರು ದಸರಾ ಅದ್ದೂರಿ ಆಚರಣೆ ಮಾಡಿದರೆ ವ್ಯಾಪಾರವನ್ನು ನಂಬಿದವರು ಬದುಕಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಮೈಸೂರಿಗೆ ಬರಲು ಹಿಂದೇಟು
ದಸರಾ ಈ ಬಾರಿ ಅದ್ಧೂರಿಯಾಗಿಯೇ ನಡೆಸಲು ಸರಕಾರ ತೀರ್ಮಾನ ಕೈಗೊಂಡಿದೆ. ಆದರೆ ಕಾವೇರಿ ವಿವಾದ ಇನ್ನೂ ಜೀವಂತವಾಗಿರುವ ಹಿನ್ನೆಲೆಯಲ್ಲಿ ಹೊರಗಿನಿಂದ ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ದಸರಾಕ್ಕೆ ಹೊಡೆತ ಬೀಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ವರ್ಷಕ್ಕೊಮ್ಮೆ ಬರುವ ಖುಷಿ
ವರ್ಷಕ್ಕೊಮ್ಮೆ ಬರುವ ನಾಡ ಹಬ್ಬವಾಗಿರುವುದರಿಂದ ನಗರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿ ಹಾಗೂ ದೂರದ ಜನರಿಗೆ ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಖುಷಿ ಪಡುವ ಆಸೆ. ಹೀಗಾಗಿಯೇ ಏನೇ ಕಷ್ಟ ಆದರೂ ಜನ ದಸರಾದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ.
ಕವಾಯತಿನಿಂದ ಕೊನೆ
ದಸರಾ ವಿಧ್ಯುಕ್ತವಾಗಿ ಆರಂಭವಾಗಲು ಕೆಲವೇ ದಿನಗಳು ಬಾಕಿಯಿದ್ದು, ಚಾಮುಂಡಿಬೆಟ್ಟದಲ್ಲಿ ಅ.1ರಂದು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಳ್ಳಲಿದೆ. ಬಳಿಕ ಜಂಬೂ ಸವಾರಿ ನಡೆದು, ಬನ್ನಿಮಂಟಪದಲ್ಲಿ ಪಂಜಿನ ಕವಾಯತಿನ ಮೂಲಕ ತೆರೆ ಬೀಳಲಿದೆ.