Get Updates
Get notified of breaking news, exclusive insights, and must-see stories!

ಗುಲಾಬ್ ಕೌರ್: ಫಿಲಿಪ್ಪೈನ್ಸ್‌ನಿಂದ ಭಾರತಕ್ಕೆ ಬಂದು ಬ್ರಿಟಿಷರ ವಿರುದ್ಧ ಹೋರಾಡಿದ ಧೈರ್ಯವಂತೆ

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯ ಪಾತ್ರ ಕಣ್ಣಿಗೆ ಹೆಚ್ಚು ಕಾಣುವುದಿಲ್ಲ. ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಆನೀ ಬೆಸೆಂಟ್, ಸರೋಜಿನಿ ನಾಯ್ಡು ಹೆಸರು ಪ್ರಧಾನವಾಗಿ ನೆನಪಾಗುತ್ತದೆ.

ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಮಹಿಳೆಯರು ಎಲೆಮರೆ ಕಾಯಿಯಂತೆ ಬೆವರು ಹರಿಸಿದ್ದಾರೆ, ಬಲಿದಾನ ಮಾಡಿದ್ದಾರೆ. ಅನೇಕ ನಾರಿಯರ ಹೋರಾಟಗಳು ಪ್ರಚಲಿತಕ್ಕೆ ಬಾರದೆ ನೆನೆಗುದಿಗೆ ಬಿದ್ದಿವೆ. ಅಂಥವರಲ್ಲಿ ಗುಲಾಬ್ ಕೌರ್ ಒಬ್ಬರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ (75ನೇ ಸ್ವಾತಂತ್ರ್ಯೋತ್ಸವ) ವರ್ಷದಂದು ಇಂಥ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಸಂದರ್ಭ ಒದಗಿ ಬಂದಿದೆ. ಇವರ ಹೋರಾಟ, ಬಲಿದಾನಗಳು ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ಸಿಗಲು ಹೇಗೆ ಕಾರಣವಾದವು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ.

ಫಿಲಿಪ್ಪೈನ್ಸ್ ದೇಶದಲ್ಲಿದ್ದ ಗುಲಾಬ್ ಕೌರ್, ಭಾರತಕ್ಕೆ ಬಂದು ಇಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಹೇಗೆ ತೊಡಗಿಸಿಕೊಂಡರು, ಅಮೆರಿಕ್ಕೆ ಹೋಗುವ ಕನಸನ್ನು ಬದಿಗೊತ್ತಿ ದೇಶದ ಸ್ವಾತಂತ್ರ್ಯಕ್ಕಾಗಿ ಇವರು ಮನಸು ಹೇಗೆ ತುಡಿಯಿತು ಎಂಬಿತ್ಯಾದಿ ಸಂಗತಿ ನಮ್ಮ ಹೊಸ ಪೀಳಿಗೆಗೆ ಸ್ಫೂರ್ತಿ ತರಬಹುದು.

ಯಾರು ಗುಲಾಬ್ ಕೌರ್?

ಯಾರು ಗುಲಾಬ್ ಕೌರ್?

ಪಂಜಾಬ್‌ನ ಸಂಗರೂರ್ ಜಿಲ್ಲೆಯ ಬಕ್ಷಿವಾಲ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಗುಲಾಬ್ ಕೌರ್ ಬಾಲ್ಯದಲ್ಲಿ ಎಲ್ಲಾ ಹೆಣ್ಮಕ್ಕಳಂತೆ ಜೀವನ ಅನಂದಿಸುವ ಹುಡುಗಿಯಾಗಿದ್ದರು. ಮಾನ್ ಸಿಂಗ್ ಅವರನ್ನು ಮದುವೆಯಾದ ಬಳಿಕ ಬಡತನ ಮೀರಿದ ಬದುಕನ್ನು ಕಟ್ಟುವ ಆಸೆ ಪಟ್ಟಿದ್ದರು. ಅಮೆರಿಕಕ್ಕೆ ಹೋಗಿ ನೆಲಸಿ ಆರಾಮ ಜೀವನದ ಕನಸು ಕಂಡಿದ್ದರು.

ಅಮೆರಿಕಕ್ಕೆ ಹೋಗಲು ಹಣ ಇಲ್ಲದ್ದರಿಂದ ಫಿಲಿಪ್ಯೈನ್ಸ್ ರಾಜಧಾನಿ ಮನೀಲಾಗೆ ಗುಲಾಬ್ ಮತ್ತು ಮಾನ್ ಸಿಂಗ್ ಹೋಗುತ್ತಾರೆ. ಅಲ್ಲಿ ಹಣ ಸಂಪಾದಿಸಿದ ಬಳಿಕ ಅಮೆರಿಕಕ್ಕೆ ಹೋಗಿ ನೆಲಸುವ ಆಲೋಚನೆ ಅವರದ್ದಾಗುತ್ತದೆ.

ಮನೀಲಾದಲ್ಲಿ ಮನಃಪರಿವರ್ತನೆ

ಮನೀಲಾದಲ್ಲಿ ಮನಃಪರಿವರ್ತನೆ

ವೈಯಕ್ತಿಕ ಬದುಕು ಮುಖ್ಯ ಎಂಬ ಸಹಜ ಆಸೆಯಲ್ಲೇ ಇದ್ದ ಗುಲಾಬ್ ಕೌರ್‌ಗೆ ಮನೀಲಾದಲ್ಲಿ ದೇಶಭಕ್ತಿ ಜಾಗೃತಗೊಳ್ಳುತ್ತದೆ. ಫಿಲಿಪ್ಪೈನ್ಸ್‌ನ ಆ ನಗರದಲ್ಲಿ ಗದ್ದರ್ ಪಕ್ಷದ (Ghadar Party) ಕೆಲ ನಾಯಕರು ಅಡಗಿರುತ್ತಾರೆ. ಅವರ ಸಂಪರ್ಕ ಪಡೆದ ಗುಲಾಬ್ ಕೌರ್‌ಗೆ ಆ ನಾಯಕರ ಕಥೆಗಳನ್ನು ಕೇಳಿ ರೋಮಾಂಚನವಾಗುತ್ತದೆ. ಅವರಿಂದ ಪ್ರೇರಿತಗೊಂಡು ದೇಶವನ್ನು ಬಂಧಮುಕ್ತಗೊಳಿಸುವ ಸಂಕಲ್ಪ ತೊಡುತ್ತಾರೆ.

ಗದ್ದರ್ ಪಕ್ಷಕ್ಕೆ ಸೇರ್ಪಡೆ

ಗದ್ದರ್ ಪಕ್ಷಕ್ಕೆ ಸೇರ್ಪಡೆ

ಗದ್ದರ್ ಎಂಬುದು ಪಂಜಾಬಿ ಪದ. ಬಂಡಾಯ ಎಂದರ್ಥ. 20ನೇ ಶತಮಾನದ ಆರಂಭದಲ್ಲಿ ಗದ್ದರ್ ಚಳವಳಿ ಹುಟ್ಟಿಕೊಂಡಿತು. ವಿದೇಶಗಳಲ್ಲಿ ಇದ್ದ ಭಾರತೀಯರು ಬ್ರಿಟಿಷರನ್ನು ಭಾರತದಿಂದ ಓಡಿಸಲು ಆರಂಭಿಸಿದ ಅಂತಾರಾಷ್ಟ್ರೀಯ ರಾಜಕೀಯ ಚಳವಳಿ ಇದು. ಅಮೆರಿಕ, ಕೆನಡಾಗಳಲ್ಲಿ ಹೆಚ್ಚಾಗಿ ನೆಲಸಿದ್ದ ಪಂಜಾಬಿಗಳೇ ಬಹುತೇಕ ಇದ್ದ ಚಳವಳಿ ಇದು.

ಗುಲಾಬ್ ಕೌರ್ ಮನೀಲಾದಲ್ಲಿದ್ದಾಗ ಗದ್ದರ್ ಪಕ್ಷದ ಅಧ್ಯಕ್ಷರಾಗಿ ಹಫೀಜ್ ಅಬ್ದುಲ್ಲಾ ಇದ್ದರು. ಕೌರ್ ಯಾವಾಗ ಗದ್ದರ್ ಕಥೆಗಳಿಂದ ಪ್ರೇರಿತಗೊಂಡು ಹೋರಾಟಕ್ಕೆ ಧುಮುಕಲು ನಿರ್ಧರಿಸಿದರೋ ಅವರಿಗೆ ಗದ್ದರ್ ಪಕ್ಷದಲ್ಲಿ ಕೆಲ ಪ್ರಮುಖ ಜವಾಬ್ದಾರಿಗಳನ್ನು ಕೊಡಲಾಯಿತು. ಪತ್ರಕರ್ತೆಯ ಸೋಗಿನಲ್ಲಿ ಪಕ್ಷದ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಹದ್ದಿನ ಕಣ್ಣಿಡುವ ಹೊಣೆಗಾರಿಕೆ ಅವರಿಗೆ ವಹಿಸಲಾಯಿತು.

ತನಗೆ ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವುದರ ಜೊತೆಗೆ ಅವರು ತಮ್ಮ ಪ್ರೆಸ್ ಪಾಸ್ ಅನ್ನು ಉಪಯೋಗಿಸಿಕೊಂಡು, ಗದ್ದರ್ ಪಕ್ಷದ ಸದಸ್ಯರಿಗೆ ಶಸ್ತ್ರಾಸ್ತ್ರ ರವಾನೆ ಮಾಡುವ ಕೆಲಸವನ್ನೂ ಮಾಡುತ್ತಿದ್ದರು.

ಅಷ್ಟೇ ಅಲ್ಲ, ಗದ್ದರ್ ಪಕ್ಷಕ್ಕೆ ಹೊಸ ಸದಸ್ಯರನ್ನು ಸೇರಿಸುವ ಕೆಲಸವನ್ನೂ ಮಾಡುತ್ತಿದ್ದರು. ಯಾವಾಗ ಗದ್ದರ್ ಪಕ್ಷ ಬಲವಾಗಿ ಬೆಳೆಯಿತೋ ಆಗ ಕೆಲ ಕ್ರಾಂತಿಕಾರಿಗಳನ್ನು ಭಾರತಕ್ಕೆ ಕಳುಹಿಸಿ ನೇರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಳ್ಳುವಂತೆ ಜವಾಭ್ದಾರಿ ಕೊಡಲಾಯಿತು.

ಗಂಡನನ್ನೂ ತ್ಯಾಗ ಮಾಡಿದ ಕೌರ್

ಗಂಡನನ್ನೂ ತ್ಯಾಗ ಮಾಡಿದ ಕೌರ್

ಗದ್ದರ್ ಪಕ್ಷದ ಸದಸ್ಯೆಯಾಗಿದ್ದ ಗುಲಾಬ್ ಕೌರ್ ಮತ್ತವರ ಪತಿ ಮಾನ್ ಸಿಂಗ್ ಇಬ್ಬರೂ ಬ್ರಿಟಿಷರ ವಿರುದ್ಧ ಹೋರಾಡಲು ಭಾರತಕ್ಕೆ ತೆರಳುವ ನಿರ್ಧಾರ ಮಾಡುತ್ತಾರೆ. ಆದರೆ, ಮಾನ್ ಸಿಂಗ್ ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಿಸುತ್ತಾರೆ. ಆಗ ಗುಲಾಬ್ ಕೌರ್‌ಗೆ ಇಬ್ಬಂದಿ ಸಂಕಪ ಶುರುವಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುವುದೋ ಅಥವಾ ಗಂಡನ ಜೊತೆ ಅಮೆರಿಕಕ್ಕೆ ಹೋಗುವುದೋ ಎಂಬ ಗೊಂದಲವಾಗುತ್ತದೆ.

ಅಂತಿಮವಾಗಿ ಅವರು ಗಂಡನನ್ನು ಬಿಟ್ಟು ಒಬ್ಬಳೇ ಭಾರತಕ್ಕೆ ತೆರಳುತ್ತಾರೆ. ಫಿಲಿಪ್ಪೈನ್ಸ್‌ನಲ್ಲಿದ್ದ ಗದ್ದರ್ ಪಕ್ಷದ ಇತರ ಕೆಲ ಸದಸ್ಯರ ಜೊತೆ ಹಡಗಿನ ಮೂಲಕ ಅವರು ಭಾರತಕ್ಕೆ ಬರುತ್ತಾರೆ. ಬರುವ ದಾರಿಯಲ್ಲಿ ಹಾಂಕಾಂಗ್‌ನಲ್ಲಿ ಅವರು ಇನ್ನಷ್ಟು ಭಾರತೀಯರನ್ನು ಸೆಳೆಯುತ್ತಾರೆ. ಗುಲಾಬ್ ಕೌರ್ ತಮ್ಮ ಸ್ಫೂರ್ತಿದಾಯಕ ಭಾಷಣಗಳಿಂದ ಭಾರತೀಯರನ್ನು ಈ ಹೋರಾಟಕ್ಕೆ ಪ್ರೇರೇಪಿಸುತ್ತಾರೆ.

ಭಾರತಕ್ಕೆ ಬಂದ ಮೇಲೆ

ಭಾರತಕ್ಕೆ ಬಂದ ಮೇಲೆ

ಭಾರತಕ್ಕೆ ಬಂದ ಗದ್ದರ್ ಪಕ್ಷದ ಗುಲಾಬ್ ಕೌರ್ ಮತ್ತಿತರ ಸದಸ್ಯರನ್ನು ಪೊಲೀಸರು ಬಂಧಿಸುತ್ತಾರೆ. ಗುಲಾಬ್ ಕೌರ್ ಜೈಲಿಂದ ತಪ್ಪಿಸಿಕೊಳ್ಳುತ್ತಾರೆ. ಪಂಜಾಬ್‌ನ ಹೋಶಿಯಾರಪುರ್, ಜಲಂಧರ್ ಮತ್ತು ಕಪೂರ್ತಲ ಜಿಲ್ಲೆಗಳಲ್ಲಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ಜನ ಸಂಘಟನೆ ಮಾಡುತ್ತಾರೆ. ಬ್ರಿಟಿಷರ ವಿರುದ್ಧ ಜನರು ಸಶಸ್ತ್ರ ಹೋರಾಟ ನಡೆಸುವಂತೆ ಹುಮ್ಮಸ್ಸು ತುಂಬುತ್ತಾರೆ.

ಗುಲಾಬ್ ಕೌರ್ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನಜಾಗೃತಿ ಮೂಡಿಸುವ ಸಾಹಿತ್ಯವನ್ನು ಮುದ್ರಿಸಿ ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಕ್ರಾಂತಿಕಾರಿಗಳಿಗೆ ಶಸ್ತ್ರಾಸ್ತ್ರ ಪೂರೈಕೆಯ ಕೆಲಸವನ್ನೂ ಮಾಡುತ್ತಿದ್ದರು.

ಬಹಳ ಕಾಲ ಪೊಲೀಸರಿಗೆ ಸಿಗದೆ ಚಳ್ಳೆಹಣ್ಣು ತಿನಿಸುತ್ತಿದ್ದ ಗುಲಾಬ್ ಕೌರ್ ಅಂತಿಮವಾಗಿ ಸಿಕ್ಕಿಬೀಳುತ್ತಾರೆ. ರಾಜದ್ರೋಹ ಪ್ರಕರಣದಲ್ಲಿ ಅವರಿಗೆ ಎರಡು ವರ್ಷ ಕಠಿಣ ಸಜೆ ಶಿಕ್ಷೆ ಸಿಗುತ್ತದೆ. ಲಾಹೋರ್‌ನ ಜೈಲಿನಲ್ಲಿ ಬಂಧಿಯಾಗುತ್ತಾರೆ.

ಜೈಲಿನಲ್ಲಿದ್ದಾಗಲೂ ಅವರು ಬ್ರಿಟಿಷರ ವಿರುದ್ಧ ಘರ್ಜಿಸುವ ಕೆಲಸವನ್ನು ನಿಲ್ಲಿಸಲಿಲ್ಲ. ಜೈಲಧಿಕಾರಿಗಳು ಹೈರಾಣಾಗಿ ಹೋಗಿದ್ದರು. ಜೈಲಿನಲ್ಲಿ ಇವರ ಆರೋಗ್ಯ ಹದಗೆಟ್ಟ ಬಳಿಕ ಬಿಡುಗಡೆ ಮಾಡಲಾಯಿತು. ಆದರೆ, ಅವರು ಹೆಚ್ಚು ದಿನ ಬದುಕಲಿಲ್ಲ. 1941ರಲ್ಲಿ 51ನೇ ವಯಸ್ಸಿನಲ್ಲಿ ಕೊನೆಯುಸಿರು ಎಳೆದರು.

2014ರಲ್ಲಿ ಕೇಸರ್ ಸಿಂಗ್ ಎಂಬುವವರು ಪಂಜಾಬಿ ಭಾಷೆಯಲ್ಲಿ ಗುಲಾಬ್ ಕೌರ್ ಜೀವನಕಥೆ ಉಳ್ಳ "ಗದರ್ ಕೀ ಧೀ ಗುಲಾಬ್ ಕೌರ್" ಎಂಬ ಪುಸ್ತಕ ಬಿಡುಗಡೆಯಾಗಿತ್ತು. ಹಾಗೆಯೇ, ಸನ್ನಿ ಡಿಯೋಲ್ ಅಭಿನಯದ 'ಗದರ್' ಸಿನಿಮಾಗಳೂ ನಿರ್ಮಿತವಾಗಿವೆ.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+