ಚೆಟ್ಲಾ ರಾಮಯ್ಯ ಪರಿಸರ ಕಾಳಜಿ ಎಲ್ಲರಿಗೂ ಬರಲಿ
ದಾರಿಪಲ್ಲಿ ರಾಮಯ್ಯ 'ಚೆಟ್ಲಾ ರಾಮಯ್ಯ' ಎಂದೇ ಪ್ರಸಿದ್ಧರು. ತೆಲುಗಿನಲ್ಲಿ 'ಚೆಟ್ಲಾ' ಎಂದರೆ ಮರ ಎಂದರ್ಥ. ಒಂದು ಕೋಟಿಗೂ ಅಧಿಕ ಮರಗಳನ್ನು ನೆಟ್ಟು ಪರಿಸರ ಕಾಪಾಡುತ್ತಿದ್ದಾರೆ ರಾಮಯ್ಯ. ಆದ್ದರಿಂದ ಎಲ್ಲರೂ ಅವರನ್ನು ಚೆಟ್ಲಾ ರಾಮಯ್ಯ ಎಂದೇ ಕರೆಯುತ್ತಾರೆ. ರಾಮಯ್ಯ ಅವರ ಕಾರ್ಯವನ್ನು ಮೆಚ್ಚಿ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಚೆಟ್ಲಾ ರಾಮಯ್ಯ ತೆಲಂಗಾಣ ರಾಜ್ಯದ ಖಮ್ಮುಮ್ ಜಿಲ್ಲೆಯವರು. ಸುಮಾರು ಐದು ದಶಕಗಳಿಂದ ರಾಮಯ್ಯ ಗಿಡ ನೆಡುವ ಕಾರ್ಯವನ್ನು ಮಾಡುತ್ತಿದ್ದಾರೆ. ರಾಮಯ್ಯ ಅವರ ಕಾರ್ಯವನ್ನು ಮೆಚ್ಚಿ 1995ರಲ್ಲಿ ಸೇವಾ ಪ್ರಶಸ್ತಿ ನೀಡಲಾಯಿತು. 2017ರಲ್ಲಿ ಅವರು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

ರಾಮಯ್ಯ ಶಾಲಾ-ಕಾಲೇಜುಗಳಿಗೆ ಹೋಗಿ ಪದವಿಗಳನ್ನು ಪಡೆದಿಲ್ಲ. ಆದರೆ, ಗಿಡ, ಮರದ ಬಗ್ಗೆ ಹಲವಾರು ಪುಸ್ತಕಗಳನ್ನು ಓದಿಕೊಂಡಿದ್ದಾರೆ. ಯೂನಿವರ್ಸಲ್ ಗ್ಲೋಬಲ್ ಪೀಸ್ ವಿಶ್ವವಿದ್ಯಾಲಯ ರಾಮಯ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ.
ರಾಮಯ್ಯ ಪತ್ನಿ ಜಾನಮ್ಮ ಜೊತೆಗೆ ಗಿಡಿ ನೆಡುವ ಅಭಿಯಾನ ಕೈಗೊಂಡರು. ರಾಮಯ್ಯ ಎಲ್ಲಿಗೆ ಹೊರಟರು ಅವರ ಜೇಬಲ್ಲಿ ಬೀಜದ ಪ್ಯಾಕೆಟ್ ಇರುತ್ತದೆ. ಖಾಲಿ ಜಾಗ ಕಂಡರೆ ಅವರು ಅಲ್ಲಿ ಬೀಜ ಬಿತ್ತಿ, ಗಿಡ ಬೆಳೆಸಲು ಮುಂದಾಗುತ್ತಾರೆ. ನೆರಳು ನೀಡುವ, ಹಣ್ಣಿನ ಮರಗಳನ್ನು ಅವರು ಹೆಚ್ಚಾಗಿ ನೆಡುತ್ತಾರೆ.
ಪ್ರಶಸ್ತಿ, ಪುರಸ್ಕಾರದಿಂದ ಬರುವ ಹಣವನ್ನು ಹೆಚ್ಚು-ಹೆಚ್ಚು ಮರಗಳನ್ನು ಬೆಳಸಲು ಉಪಯೋಗಿಸುತ್ತಾರೆ. ನರ್ಸರಿ, ಜನರಿಂದ ಸಸಿ ಮತ್ತು ಬೀಜಗಳನ್ನು ಸಂಗ್ರಹ ಮಾಡುತ್ತಾರೆ. ಅದನ್ನು ಜನರಿಗೆ ಉಚಿತವಾಗಿ ನೀಡಿ, ಮರಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸ್ಫೂರ್ತಿ ತುಂಬುತ್ತಾರೆ.
ಮಕ್ಕಳಿಗೆ ಹಣ್ಣನ್ನು ನೀಡುವ ಬದಲು ಗಿಡಗಳನ್ನು ನೀಡಿ, ಅವರು ಅದನ್ನು ನೆಟ್ಟು ಬೇಕಾದ ಹಣ್ಣುಗಳನ್ನು ಪಡೆದುಕೊಳ್ಳಲಿ ಎಂಬುದು ರಾಮಯ್ಯ ಅವರ ಮಾತು. ರಾಮಯ್ಯ ಅವರ ಪರಿಸರ ಕಾಳಜಿಗೆ ನಮ್ಮದೊಂದು ಸಲಾಮ್.












Click it and Unblock the Notifications