Get Updates
Get notified of breaking news, exclusive insights, and must-see stories!

ರಾಷ್ಟ್ರಧ್ವಜ ವಿನ್ಯಾಸಕ ಪಿಂಗಾಳಿ ವೆಂಕಯ್ಯ ಬಗ್ಗೆ ಹೆಚ್ಚು ಗೊತ್ತಿಲ್ಲದ ಸಂಗತಿಗಳು

ರಾಷ್ಟ್ರಧ್ವಜ ಎಂದರೆ ನಮ್ಮೆಲ್ಲರಿಗೂ ಹೆಮ್ಮೆ. ತಿರಂಗ ಬಾವುಟ ಕೈಯಲ್ಲಿ ಹಿಡಿದರೆ ಭಾರತ ಮಾತೆಯ ಮಡಿಲಲ್ಲಿ ಮಲಗಿದಷ್ಟು ಸುಭದ್ರ ಭಾವನೆ. ಅದ್ಭುತ ಪರಿಕಲ್ಪನೆ, ಬಣ್ಣಗಳ ಸಂಯೋಜನೆ ಒಳಗೊಂಡಿರುವ ರಾಷ್ಟ್ರಧ್ವಜ ನಮ್ಮದು.

ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳು ನಮ್ಮ ದೇಶದ ಗುಣ ಏನೆಂದು ಬಿಂಬಿಸುತ್ತವೆ. ಒಂದೊಂದು ಬಣ್ಣಕ್ಕೂ ಅದರದ್ದೇ ಅರ್ಥಗಳಿವೆ. ಧೈರ್ಯ, ತ್ಯಾಗ, ಶಾಂತಿ ಮತ್ತು ಪ್ರಗತಿಯ ಸಂಕೇತಗಳಾಗಿವೆ.

ಈ ರಾಷ್ಟ್ರಧ್ವಜವನ್ನು ಮೊದಲು ರೂಪಿಸಿದ್ದು ಮತ್ತು ವಿನ್ಯಾಸಗೊಳಿಸಿದ್ದು ಪಿಂಗಾಳಿ ವೆಂಕಯ್ಯ. ಆಂಧ್ರಪ್ರದೇಶದ ಪಿಂಗಾಳಿ ವೆಂಕಯ್ಯ ಅವರ ಜನ್ಮದಿನ ಕಳೆದ ವಾರ (ಆ. 2) ಇತ್ತು. ಅಪ್ರತಿಮ ಬುದ್ಧಿಮತ್ತೆಯ ಪಿಂಗಾಳಿ ವೆಂಕಯ್ಯ ಬ್ರಿಟಿಷ್ ಸರಕಾರದ ಸೈನಿಕರಾದರೂ ಸ್ವಾತಂತ್ರ್ಯದ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ಸಾಕಷ್ಟು ವಿದ್ಯಾಭ್ಯಾಸ ಮಾಡಿದ್ದ ಅವರು ಸಂಶೋಧನಾ ಕಾರ್ಯಗಳಲ್ಲಿ ಸೈ ಎನಿಸಿದ್ದರು.

ಪಿಂಗಾಳಿ ವೆಂಕಯ್ಯ ಜನ್ಮದಿನ ಆಗಿ ಎಂಟು ದಿನ ಕಳೆದರೂ ಅವರು ಚಿರಸ್ಮರಣೀಯ. ದೊಡ್ಡ ದೊಡ್ಡ ಸ್ವಾತಂತ್ರ್ಯ ಯೋಧರ ರಾಶಿಯಲ್ಲಿ ಪಿಂಗಾಳಿ ವೆಂಕಯ್ಯನ ಹೆಸರು ಎಲೆಮರೆಕಾಯಿಯಂತೆ ಇದ್ದರೂ ಅವರ ಸಾಹಸ, ಹೋರಾಟದ ಮಹತ್ವ ಯಾರಿಗೂ ಕಡಿಮೆಯದ್ದಾಗಿರಲಿಲ್ಲ.

ಯಾರು ಈ ಪಿಂಗಾಳಿ ವೆಂಕಯ್ಯ?

ಯಾರು ಈ ಪಿಂಗಾಳಿ ವೆಂಕಯ್ಯ?

ಪಿಂಗಾಳಿ ವೆಂಕಯ್ಯ 1876 ಆಗಸ್ಟ್ 2ರಂದು ಅಂದಿನ ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿದ ಮತ್ತು ಈಗಿನ ಆಂಧ್ರಪ್ರದೇಶದ ಮಚಲಿಮಟ್ಟಣಂನ ಭಟ್ಟಲಪೆನುಮಾರು ಎಂಬಲ್ಲಿ ಹುಟ್ಟಿದವರು. ತಮ್ಮ ಸ್ವಗ್ರಾಮದಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿ ಮದ್ರಾಸ್‌ನಲ್ಲಿ ಪ್ರೌಢಶಿಕ್ಷಣ ಪಡೆದರು.

ಹಾಗೆಯೇ, ಸೈನಿಕನಾಗುವುದು ಅವರಿಗೊಂದು ಹುಚ್ಚು. ಇದು ಅವರನ್ನು 19ನೇ ವಯಸ್ಸಿಗೆ ಬ್ರಿಟಿಷ್ ಇಂಡಿಯನ್ ಸೇನೆ ಸೇರಲು ಎಡೆ ಮಾಡಿಕೊಟ್ಟಿತು. ಸೌತ್ ಆಫ್ರಿಕಾದ ಎರಡನೇ ಆಂಗ್ಲ-ಬೋರ್ ಕದನದಲ್ಲಿ ಪಾಲ್ಗೊಂಡರು.

ಸೇನೆಯಲ್ಲಿ ಅವರು ಹೆಚ್ಚು ಕಾಲ ಇರಲಿಲ್ಲ. ಸೇನೆ ಬಿಟ್ಟ ಮೇಲೆ ರೇಲ್ವೆ ಗಾರ್ಡ್ ಆಗಿ ಕೆಲಸ ಮಾಡಿದ ಅವರು ಲಾಹೋರ್‌ನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಕೊಲೊಂಬೋ, ಲಾಹೋರ್‌ನಲ್ಲೂ ವಿದ್ಯಾಭ್ಯಾಸ ಮಾಡಿದರು. ನಂತರ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದರು. ವೆಂಕಯ್ಯಗೆ ಬಹು ವಿಚಾರಗಳಲ್ಲಿ ಆಸಕ್ತಿ ಇತ್ತು. ಭೂಗೋಳ, ಶಿಕ್ಷಣ, ಕೃಷಿ ಮತ್ತು ಭಾಷೆಗಳ ಬಗ್ಗೆ ವಿಶೇಷ ಅಸ್ಥೆ ಅವರಿಗೆ. ಲಾಹೋರ್‌ನ ಆಂಗ್ಲೋ ವೇದಿಕ್ ಕಾಲೇಜಿನಲ್ಲಿ ಅವರು ಜಪಾನಿ, ಉರ್ದು ಮತ್ತು ಇತಿಹಾಸ ಕಲಿತರು.

ಮಹಾತ್ಮ ಗಾಂಧಿ ಸಹವಾಸ

ಮಹಾತ್ಮ ಗಾಂಧಿ ಸಹವಾಸ

ಪಿಂಗಾಳಿ ವೆಂಕಯ್ಯ ಸೌತ್ ಅಫ್ರಿಕಾದಲ್ಲಿ ಸೈನಿಕನಾಗಿ ಯುದ್ಧಕ್ಕೆ ಹೋದಾಗ ಅಲ್ಲಿ ಮಹಾತ್ಮ ಗಾಂಧಿ ಪರಿಚಯವಾಗುತ್ತದೆ. ಆಗ ಗಾಂಧೀಜಿ ಸೌತ್ ಆಫ್ರಿಕಾದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿರುತ್ತಾರೆ. ಅಲ್ಲಿ ಬ್ರಿಟಿಷರ ವರ್ಣಭೇದ ನೀತಿ ವಿರುದ್ಧ ಜನಸಂಘಟನೆ ಕಟ್ಟುತ್ತಿರುತ್ತಾರೆ. ಅದಾಗಲೇ ಹರಿಣಗಳ ನಾಡಿನಲ್ಲಿ ಗಾಂಧೀಜಿ ಹೀರೋ ಆಗಿದ್ದರು.

19ನೇ ವಯಸ್ಸಿನಲ್ಲಿ ಸೌತ್ ಆಫ್ರಿಕಾದಲ್ಲಿ ಮಹಾತ್ಮ ಗಾಂಧಿಯನ್ನು ಬ್ರಿಟನ್ ಸೈನಿಕನಾಗಿ ಸಂಧಿಸಿದ ಪಿಂಗಾಳಿ ವೆಂಕಯ್ಯಗೆ ಆ ಭೇಟಿ ಅವರ ಜೀವನಕ್ಕೆ ಹೊಸ ದಿಕ್ಕು ಕೊಡುತ್ತದೆ. ಇಬ್ಬರ ಸಂಬಂಧ 50 ವರ್ಷಗಳಿಗೂ ಹೆಚ್ಚು ಕಾಲ ಬಾಳುತ್ತದೆ.

ರಾಷ್ಟ್ರಧ್ವಜ ವಿನ್ಯಾಸ

ರಾಷ್ಟ್ರಧ್ವಜ ವಿನ್ಯಾಸ

ಪಿಂಗಾಳಿ ವೆಂಕಯ್ಯಗೆ ಧ್ವಜ ಮತ್ತು ಅವುಗಳ ವಿನ್ಯಾಸ ಎಂದರೆ ಬಹಳ ಕುತೂಹಲ. ಭಾರತಕ್ಕೆ ಧ್ವಜ ವಿನ್ಯಾಸ ಮಾಡಬೇಕೆಂಬುದು ಅವರ ಅದಮ್ಯ ಆಸೆ. ಅನೇಕ ದೇಶಗಳ ರಾಷ್ಟ್ರಧ್ವಜಗಳ ವಿನ್ಯಾಸವನ್ನು ಅಧ್ಯಯನ ಮಾಡುತ್ತಾರೆ. 1916ರಿಂದ 1921ರವರೆಗೂ ಅವರು ಧ್ವಜಗಳ ಅಧ್ಯಯನದಲ್ಲಿ ನಿರತರಾಗಿ ಕೊನೆಗೆ ಸ್ವತಂತ್ರ ಭಾರತಕ್ಕಾಗಿ ವಿವಿಧ ಧ್ವಜ ವಿನ್ಯಾಸಗಳನ್ನು ಮಾಡುತ್ತಾರೆ.

1921ರಲ್ಲಿ ಮಹಾತ್ಮ ಗಾಂಧಿಯನ್ನು ಪಿಂಗಾಳಿ ವೆಂಕಯ್ಯ ಮತ್ತೊಮ್ಮೆ ಭೇಟಿ ಮಾಡುತ್ತಾರೆ. ಅಲ್ಲಿ ತಮ್ಮ ರಾಷ್ಟ್ರಧ್ವಜದ ವಿನ್ಯಾಸಗಳನ್ನು ತೋರಿಸುತ್ತಾರೆ. ಆ ಧ್ವಜಕ್ಕೆ ಕೆಲ ಮಾರ್ಪಾಡುಗಳನ್ನು ಮಾಡಲಾಗುತ್ತದೆ. ಅಂತಿಮವಾಗಿ ತ್ರಿವರ್ಣ ಇರುವ ಧ್ವಜವನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಂತಿಮಗೊಳಿಸುತ್ತದೆ.

ಮೂಲ ಧ್ವಜ ಮತ್ತು ನಂತರದ ಮಾರ್ಪಾಡು

ಮೂಲ ಧ್ವಜ ಮತ್ತು ನಂತರದ ಮಾರ್ಪಾಡು

ಪಿಂಗಾಳಿ ವೆಂಕಯ್ಯ ವಿನ್ಯಾಸಗೊಳಿಸಿದ ಧ್ವಜದಲ್ಲಿ ಕೆಂಪು ಮತ್ತು ಹಸಿರು ಬಣ್ಣಗಳು ಮಾತ್ರವಿದ್ದವು. ಕೆಂಪು ಹಿಂದೂ ಧರ್ಮವನ್ನು ಪ್ರತಿನಿಧಿಸಿದರೆ, ಹಸಿರು ಇಸ್ಲಾಂ ಧರ್ಮವನ್ನು ಪ್ರತಿನಿಧಿಸುತ್ತದೆ. ಆಗ ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖ್ಯ ಕೋಮುಗಳಾದ್ದರಿಂದ ಪಿಂಗಾಳಿ ವೆಂಕಯ್ಯ ರಾಷ್ಟ್ರಧ್ವಜದಲ್ಲಿ ಕೆಂಪು ಮತ್ತು ಹಸಿರನ್ನು ಒಳಗೊಂಡಿದ್ದರು.

ಮಹಾತ್ಮ ಗಾಂಧಿ ಈ ಧ್ವಜಕ್ಕೆ ಬಿಳಿ ಬಣ್ಣವನ್ನು ಸೇರಿಸುವಂತೆ ಸಲಹೆ ನೀಡಿದರು. ಕೆಂಪು ಬಣ್ಣವನ್ನು ಕೇಸರಿಗೆ ಬದಲಾಯಿಸಲಾಯಿತು. ನಂತರ ಬಾವುಟದ ಮಧ್ಯಕ್ಕೆ ಚರಕದ ಚಕ್ರವನ್ನು ಸೇರಿಸಲಾಯಿತು. ಮೊದಲಿಗೆ ಕೇಸರಿ, ನಂತರ ಬಿಳಿ ಹಾಗೂ ಹಸಿರು ಬಣ್ಣ ಎಂದು ನಿಗದಿ ಮಾಡಲಾಯಿತು.

ಸ್ವಾತಂತ್ರ್ಯದ ಬಳಿಕ ರಾಷ್ಟ್ರಧ್ವಜದ ಚಕ್ರವನ್ನು ಬದಲಿಸಲಾಯಿತು. ಚರಕದ ಚಕ್ರ ಬದಲು ಅಶೋಕನ ಚಕ್ರವನ್ನು ಸೇರಿಸಿ ಅಂತಿಮಗೊಳಿಸಲಾಯಿತು.

ತಿರಂಗದ ಅರ್ಥವೇನು?

ತಿರಂಗದ ಅರ್ಥವೇನು?

ಕೇಸರಿ ಬಣ್ಣ ಧೈರ್ಯ, ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದೆ
ಬಿಳಿ ಬಣ್ಣ ಶಾಂತಿ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ.
ಹಸಿರು ಬಣ್ಣ ಪ್ರಗತಿಯ ಸಂಕೇತವಾಗಿದೆ. ಮಧ್ಯದಲ್ಲಿರುವ ಅಶೋಕ ಚಕ್ರ ನಮ್ಮ ನಾಡಿನ ಧರ್ಮದ ಸಂಕೇತವಾಗಿದೆ.

ನಮ್ಮ ರಾಷ್ಟ್ರಧ್ವಜದ ಆಕಾರ ಬಗ್ಗೆ ಸ್ಪಷ್ಟ ನಿಯಮ ಇದೆ. ಉದ್ದ ಮತ್ತು ಅಗಲ 2:3 ಪ್ರಮಾಣದಲ್ಲಿ ಇರಬೇಕು. ಉದಾಹರಣೆಗೆ, ಧ್ವಜ 2 ಅಡಿ ಉದ್ದ ಇದ್ದರೆ, ಅಗಲ 3 ಅಡಿ ಇರಬೇಕು. ಮೂರು ಬಣ್ಣಗಳ ಉದ್ದ ಮತ್ತು ಅಗಲ ಏಕರೀತಿಯಲ್ಲಿರಬೇಕು. ಯಾವಾಗಲು ಕೇಸರಿ ಬಣ್ಣ ಮೇಲೆ ಇರಬೇಕು.

ಪಿಂಗಾಳಿ ವೆಂಕಯ್ಯಗೆ ನಾನಾ ನಾಮ

ಪಿಂಗಾಳಿ ವೆಂಕಯ್ಯಗೆ ನಾನಾ ನಾಮ

ಪಿಂಗಾಳಿ ವೆಂಕಯ್ಯ, ಡೈಮಂಡ್ ವೆಂಕಯ್ಯ, ಝಂಡಾ ವೆಂಕಯ್ಯ, ಕಾಟನ್ ವೆಂಕಯ್ಯ, ಜಪಾನ್ ವೆಂಕಯ್ಯ, ಇವು ಅವರಿಗಿದ್ದ ಕೆಲ ಬಿರುದು ಬಾವಲಿಗಳು.

ಪಿಂಗಾಳಿ ವೆಂಕಯ್ಯಗೆ ಹಲವು ನಾಮಧೇಯಗಳು ಅಂಟಿಕೊಂಡಿವೆ. ಧ್ವಜ ವಿನ್ಯಾಸ ಮಾಡಿದ ಕಾರಣಕ್ಕೆ ಇವರಿಗೆ ಝಂಡಾ ವೆಂಕಯ್ಯ ಎಂಬ ಬಿರುದು ಸಿಕ್ಕಿದೆ. ಭೂವಿಜ್ಞಾನದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಪಿಎಚ್‌ಡಿ ಪದವಿ ಪಡೆದು ವಜ್ರದ ಗಣಿಗಳಲ್ಲಿ ಸಂಶೋಧನೆ ನಡೆಸಿದ್ದ ಅವರಿಗೆ ಡೈಮಂಡ್ ವೆಂಕಯ್ಯ ಎಂಬ ಹೆಸರೂ ಬಂದಿದೆ.

ಕೃಷಿಯಲ್ಲಿ ಆಸಕ್ತಿ ಇದ್ದ ವೆಂಕಯ್ಯ ಹತ್ತಿ ಬೆಳೆ ಕುರಿತು ಸಂಶೋಧನೆ ನಡೆಸಿದ್ದರು. ಹತ್ತಿ ಬೆಳೆಯ ಇಳುವರಿ ಹೆಚ್ಚಿಸಲು ನಾನಾ ಪ್ರಯೋಗಳನ್ನು ಮಾಡಿದರು. ಈ ಕಾರಣಕ್ಕೆ ಅವರಿಗೆ ಪತ್ತಿ ವೆಂಕಯ್ಯ ಅಥವಾ ಕಾಟನ್ ವೆಂಕಯ್ಯ ಎಂಬ ಹೆಸರು ಬಂದಿತು.

ಭಾಷೆಗಳ ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದ ವೆಂಕಯ್ಯ ಜಪಾನ್ ಮೊದಲಾದ ಭಾಷೆಗಳಲ್ಲಿ ಪರಿಣಿತರಾಗಿದ್ದರು. ಈ ಕಾರಣಕ್ಕೆ ಅವರಿಗೆ ಜಪಾನ್ ವೆಂಕಯ್ಯ ಎಂದು ಕೆಲವರು ಕರೆಯುತ್ತಿದ್ದರು.

ಬಡವನಾಗಿ ಪ್ರಾಣಬಿಟ್ಟ ವೆಂಕಯ್ಯ

ಬಡವನಾಗಿ ಪ್ರಾಣಬಿಟ್ಟ ವೆಂಕಯ್ಯ

ಅಪಾರ ಪ್ರತಿಭೆ, ಜ್ಞಾನಭಂಡಾರ, ಜೀವನಾಸಕ್ತಿ, ಪರಾಕ್ರಮ ಎಲ್ಲವನ್ನೂ ಹೊಂದಿದ್ದ ಪಿಂಗಾಳಿ ವೆಂಕಯ್ಯ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರಸ್ತುತತೆ ಕಳೆದುಕೊಂಡರು. ಬಹಳ ಬಡಸ್ತನದಲ್ಲಿ ಅವರ ಅಂತಿಮ ಹಂತದ ಜೀವನ ಸಾಗಿತ್ತು. 1963 ಜುಲೈ 4ರಂದು ಅವರು ಇಹಲೋಕ ತ್ಯಜಿಸಿದರು.

ಜ್ಞಾನದಲ್ಲಿ, ಧೈರ್ಯದಲ್ಲಿ ಶ್ರೀಮಂತರಾಗಿದ್ದ ಪಿಂಗಾಳಿ ವೆಂಕಯ್ಯ ಬಡವರಾಗಿ ಅಂತ್ಯ ಕಂಡಿದ್ದು ದುರಂತ.

ಅವರು ಸಾವನ್ನಪ್ಪಿ ಅನೇಕ ವರ್ಷಗಳ ಬಳಿಕ ಗೌರವ ಸಲ್ಲಿಸುವ ಪ್ರಯತ್ನಗಳಾದವು. ಹೈದರಾಬಾದ್‌ನ ಟ್ಯಾಂಕ್ ಬಂಡ್‌ನಲ್ಲಿ 1992ರಲ್ಲಿ ಅಂದಿನ ಆಂಧ್ರ ಸಿಎಂ ಎನ್ ಟಿ ರಾಮರಾವ್ 31 ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ನಿರ್ಮಿಸಿದರು. ಅದರಲ್ಲಿ ಪಿಂಗಾಳಿ ವೆಂಕಯ್ಯರ ಪ್ರತಿಮೆಯೂ ಇದೆ.

2009ರಲ್ಲಿ ಅವರ ಗೌರವಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಲಾಯಿತು. 2014ರಲ್ಲಿ ಮರಣೋತ್ತರ ಗೌರವವಾಗಿ ಭಾರತ್ ರತ್ನ ನೀಡಲು ಪ್ರಸ್ತಾಪಿಸಲಾಯಿತು.

2015ರಲ್ಲಿ ವಿಜಯವಾಡದ ಎಐಆರ್‌ಗೆ ವೆಂಕಯ್ಯ ಹೆಸರು ಇಡಲಾಯಿತು. ಆ ಅಂಗಳದಲ್ಲಿ ಅವರ ಪ್ರತಿಮೆ ಅನಾವರಣ ಮಾಡಲಾಯಿತು. ಇದೀಗ ೨೦೨೨ ಆಗಸ್ಟ್ ೩ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಿಂಗಾಳಿ ವೆಂಕಯ್ಯರ ಗೌರವಾರ್ಥ ಮತ್ತೊಂದು ಅಂಚೆ ಚೀಟಿ ಬಿಡುಗಡೆ ಮಾಡಿದರು.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+