Get Updates
Get notified of breaking news, exclusive insights, and must-see stories!

ಬ್ರಿಟಿಷರ ನಿದ್ದೆಗೆಡಿಸಿದ್ದ ಗೆರಿಲ್ಲಾ ಯುದ್ಧ ನಿಷ್ಣಾತ ಅಲ್ಲೂರಿ ಸೀತಾರಾಮರಾಜು

ಅಲ್ಲೂರಿ ಸೀತಾರಾಮ ರಾಜು ಹೆಸರು ಕೇಳಿರಬಹುದು. ಕೇಳಿರದಿದ್ದರೆ ಟಾಲಿವುಡ್‌ನ ಆರ್ ಆರ್ ಆರ್ ಸಿನಿಮಾ ನೆನಪಿಸಿಕೊಳ್ಳಿ. ಅದರಲ್ಲಿ ರಾಮಚರಣ್ ಮಾಡಿದ್ದ ಪಾತ್ರ ಇದೇ ಅಲ್ಲೂರಿ ಸೀತಾರಾಮ ರಾಜು ನಿಜಜೀವನದ ವ್ಯಕ್ತಿತ್ವವನ್ನಾಧರಿಸಿದ್ದಾಗಿದೆ.

ಆಂಧ್ರದ ವಿಶಾಖಪಟ್ಟಣಂ ಜಿಲ್ಲೆಯ ಪಾಂಡರಂಗಿ ಗ್ರಾಮದಲ್ಲಿ 1897, ಜುಲೈ 4ರಂದು ಜನಿಸಿದ ಅಲ್ಲೂರಿ ಸೀತಾರಾಮ ರಾಜು ಮಾನ್ಯಮ್ ವೀರುಡು ಎಂದೇ ಖ್ಯಾತರಾಗಿದ್ದವರು. ತಮ್ಮ ಅಗಾಧ ಬಾಹುಬಲ ಮತ್ತು ಸಮರಕಲೆಗಳಿಂದ ಬ್ರಿಟಿಷರ ನಿದ್ದೆಗೆಡಿಸಿದವರು.

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಭೀಮಾವರಂನಲ್ಲಿ 30 ಅಡಿ ಎತ್ತರದ ಅಲ್ಲೂರಿ ಸೀತಾರಾಮ ರಾಜುವಿನ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ಈ ಪ್ರತಿಮೆ ಕಡೆಯಲಾಗಿದೆ.

ಅಲ್ಲೂರಿ ಸೀತಾರಾಮ ರಾಜು ಅವರ ಸ್ವಾತಂತ್ರ್ಯ ಹೋರಾಟಗಳು ಹೇಗಿದ್ದವು? ಆರ್ ಆರ್ ಆರ್ ಸಿನಿಮಾದ ಆ ಪಾತ್ರ ಸಂಪೂರ್ಣ ನಿಜ ಜೀವನ ಆಧಾರಿತವಾದುದೇ? ಸೀತಾರಾಮ ರಾಜು ಅಂತ್ಯ ಹೇಗಾಯಿತು? ಎಂಬಿತ್ಯಾದಿ ವಿವರಗಳು ಇಲ್ಲಿವೆ.

ಅಲ್ಲೂರಿ ಸೀತಾರಾಮ ರಾಜು ಯಾರು?

ಅಲ್ಲೂರಿ ಸೀತಾರಾಮ ರಾಜು ಯಾರು?

ವಿಶಾಖಪಟ್ಟಣಂನ ಒಂದು ಸಣ್ಣ ಗ್ರಾಮದಲ್ಲಿ 1897 ಜುಲೈ 4ರಂದು ಜನಿಸಿದ ಅಲ್ಲೂರಿ ಸೀತಾರಾಮರಾಜು ಬದುಕಿದ್ದು ಕೇವಲ 27 ವರ್ಷ ಮಾತ್ರ. ಆದರೆ ಅಷ್ಟು ಸಣ್ಣ ವಯಸ್ಸಿನಲ್ಲಿ ಬಹಳ ದೊಡ್ಡ ಹೋರಾಟಗಳನ್ನು ರೂಪಿಸಿದರು. ಬ್ರಿಟಿಷರ ವಿರುದ್ಧ ಬುಡಕಟ್ಟು ಸಮುದಾಯಗಳನ್ನು ಒಗ್ಗೂಡಿಸಿ ಹೋರಾಟಕ್ಕೆ ಹಚ್ಚಿದರು. ಗೆರಿಲ್ಲಾ ದಾಳಿಗಳ ಮೂಲಕ ಬ್ರಿಟಿಷರನ್ನು ಕಂಗೆಡಿಸಿದರು. ಅಗಿನ ಮದ್ರಾಸ್ ಪ್ರಾಂತ್ಯದ ಹಲವೆಡೆ ಇವರ ಕಾರ್ಯಾಚರಣೆ ನಡೆದಿತ್ತು.

ಚಿಕ್ಕಂದಿನಲ್ಲೇ ಅಪ್ಪನನ್ನು ಕಳೆದುಕೊಂಡ ಸೀತಾರಾಮರಾಜು, ಶಾಲೆಯನ್ನು ಅರ್ಧದಲ್ಲೇ ಬಿಟ್ಟು ಉತ್ತರ ಭಾರತದ ಹಲವೆಡೆ ಸಂಚಾರ ಮಾಡಿಬರುತ್ತಾರೆ. ಬ್ರಿಟಿಷರ ಆಡಳಿತದಲ್ಲಿ ದೇಶದಲ್ಲಿದ್ದ ಸಾಮಾಜಿಕ ಮತ್ತು ಆರ್ಥಿಕ ದುಸ್ಥಿತಿಯನ್ನು ಕಂಡು ಅವರಿಗೆ ಬೇಸರವಾಗುತ್ತದೆ.

ಬಾಂಗ್ಲಾದೇಶದಲ್ಲಿ ಉತ್ತೇಜನ

ಬಾಂಗ್ಲಾದೇಶದಲ್ಲಿ ಉತ್ತೇಜನ

ಸೀತಾರಾಮರಾಜು ದೇಶ ಸಂಚಾರ ಮಾಡುವಾಗ, ಆಗ ಬೆಂಗಾಲ್ ಪ್ರೆಸಿಡೆನ್ಸಿಯ ಭಾಗವಾಗಿದ್ದ ಚಿತ್ತಗಾಂಗ್ (ಈಗಿನ ಬಾಂಗ್ಲಾದೇಶದ ನಗರ) ನಗರದಲ್ಲಿ ಹಲವು ಕ್ರಾಂತಿಕಾರಿಗಳನ್ನು ಭೇಟಿ ಮಾಡುತ್ತಾರೆ. ಅಲ್ಲಿ ಅವರಿಗೆ ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟ ಮಾಡುವ ಪ್ರೇರಣೆ ಸಿಗುತ್ತದೆ. ಗೆರಿಲ್ಲಾ ಯುದ್ಧ ತಂತ್ರಗಳನ್ನು ತಿಳಿದುಕೊಳ್ಳುತ್ತಾರೆ.

ತಮ್ಮ ಮೂಲಸ್ಥಾನಕ್ಕೆ ವಾಪಸ್ ಬಂದು ಜನ ಸಂಘಟನೆ ಮಾಡುತ್ತಾರೆ, ಗೆರಿಲ್ಲಾ ಯುದ್ಧ ತಂತ್ರಗಳನ್ನು ಅಳವಡಿಸಿಕೊಂಡು ಬ್ರಿಟಿಷರ ಮೇಲೆ ದಾಳಿ ಮಾಡಲು ತೊಡಗುತ್ತಾರೆ. ವಿಶಾಖಪಟ್ಟಣಂ ಮತ್ತು ಈಸ್ಟ್ ಗೋದಾವರಿ ಜಿಲ್ಲೆಗಳಲ್ಲಿನ ಅರಣ್ಯಪ್ರದೇಶಗಳಲ್ಲಿ ಆದಿವಾಸಿಗಳನ್ನು ಸೇರಿಸಿ ಬ್ರಿಟಿಷ್ ಪಡೆಗಳ ಮೇಲೆ ನಿರಂತರ ದಾಳಿ ಮಾಡುತ್ತಾರೆ.

ಸ್ಟೇಷನ್‌ನಲ್ಲಿ ಹೆಸರು ಬರೆಯುತ್ತಿದ್ದ ರಾಜು

ಸ್ಟೇಷನ್‌ನಲ್ಲಿ ಹೆಸರು ಬರೆಯುತ್ತಿದ್ದ ರಾಜು

ಅಲ್ಲೂರಿ ಸೀತಾರಾಮರಾಜು ಗೆರಿಲ್ಲಾ ದಾಳಿಯಲ್ಲಿ ಪಳಗಿಹೋಗಿರುತ್ತಾರೆ. ಆರಂಭದಲ್ಲಿ ಅವರು ಆದಿವಾಸಿ ಜನರು ಬಳಸುವ ಬಿಲ್ಲು ಬಾಣ, ಭರ್ಜಿಗಳನ್ನೇ ಉಪೋಗಿಸಿಕೊಂಡ ಬ್ರಿಟಿಷ್ ಪಡೆಗಳ ಮೇಲೆ ದಾಳಿ ಮಾಡುತ್ತಿರುತ್ತಾರೆ. ಆದರೆ, ಬಂದೂಕು, ಮದ್ದು ಗುಂಡುಗಳನ್ನು ಹೊಂದಿದ ಬ್ರಿಟಿಷರನ್ನು ಎದುರಿಸಲು ಬಿಲ್ಲು ಬಾಣ ಸಾಕಾಗುವುದಿಲ್ಲ ಎಂಬ ಸತ್ಯ ಅರಿವಾಗುತ್ತದೆ. ಆಗ ಅವರು ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ ಶಸ್ತ್ರಾಸ್ತ್ರ ಲೂಟಿ ಮಾಡುವ ಕೆಲಸ ಆರಂಭಿಸುತ್ತಾರೆ.

ಅದರಲ್ಲಿ ಬಹಳ ಖ್ಯಾತವಾದುದು ಚಿಂತಪಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ದಾಳಿ. ೧೯೨೨, ಏಪ್ರಿಲ್ ೨೨ರಂದು ಸುಮಾರು 300 ಮಂದಿ ಕ್ರಾಂತಿಕಾರಿಗಳ ತಂಡದ ಜೊತೆ ಸೀತಾರಾಮರಾಜು ಚಿಂತಪಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಬಂದೂಕು ಇತ್ಯಾದಿ ಶಸ್ತ್ರಾಸ್ತ್ರಗಳನ್ನ ಲಪಟಾಯಿಸುತ್ತಾರೆ.

ಕುತೂಹಲ ಎಂದರೆ ದಾಳಿಗೆ ಮುನ್ನ ತಾನು ಯಾವಾಗ ಯಾವ ಸಮಯದಲ್ಲಿ ಎಲ್ಲಿ ದಾಳಿ ಮಾಡುತ್ತೇನೆ ಎಂದು ಬ್ರಿಟಿಷರಿಗೆ ಅವರು ಎಚ್ಚರಿಕೆಯನ್ನೂ ಕೊಟ್ಟಿರುತ್ತಾರೆ. ಮುಂದೆ ನಡೆದ ಎಲ್ಲಾ ದಾಳಿಯಲ್ಲೂ ಅವರು ಇದೇ ರೀತಿ ಮುನ್ನೆಚ್ಚರಿಕೆ ಕೊಡುತ್ತಾರೆ.

ಇನ್ನೊಂದು ಕುತೂಹಲವೆಂದರೆ ಲೂಟಿ ಮಾಡಿದ ಪೊಲೀಸ್ ಠಾಣೆಯಲ್ಲಿ ಇವರು ಅಲ್ಲಿನ ಡೈರಿಯಲ್ಲಿ ತಾನು ಎಷ್ಟು ಲೂಟಿ ಮಾಡಿದೆ ಎಂದು ಪಟ್ಟಿಯನ್ನೂ ಮಾಡಿಟ್ಟು ಹೋಗುತ್ತಿದ್ದರಂತೆ.

ಪೊಲೀಸ್ ಠಾಣೆಯ ಮೇಲೆ ಇವರು ದಾಳಿ ಮಾಡಲು ಪ್ರಮುಖ ಕಾರಣವೇ ಶಸ್ತ್ರಾಸ್ತ್ರ ಸಂಗ್ರಹ ಮಾಡುವುದಾಗಿತ್ತು. ಈ ಶಸ್ತ್ರಾಸ್ತ್ರವನ್ನು ಉಪಯೋಗಿಸಿಕೊಂಡು ಬ್ರಿಟಿಷ್ ಸೈನಿಕರ ಮೇಲೆ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವುದು ಅಲ್ಲೂರಿ ಸೀತಾರಾಮರಾಜು ಉದ್ದೇಶವಾಗಿತ್ತು.

ಆರ್ ಆರ್ ಆರ್ ಸಿನಿಮಾ?

ಆರ್ ಆರ್ ಆರ್ ಸಿನಿಮಾ?

ಆರ್ ಆರ್ ಆರ್ ಸಿನಿಮಾದಲ್ಲಿ ಅಲ್ಲೂರಿ ಸೀತಾರಾಮರಾಜು ಪಾತ್ರವನ್ನು ರಾಮಚರಣ್ ಮಾಡಿದ್ದಾರೆ. ಆ ಸಿನಿಮಾದಲ್ಲಿ ಸೀತಾರಾಮರಾಜು ಪೊಲೀಸ್ ಅಧಿಕಾರಿಯಾಗಿರುತ್ತಾರೆ. ಬ್ರಿಟಿಷರ ವಿಶ್ವಾಸ ಗೆದ್ದು ಶಸ್ತ್ರಾಸ್ತ್ರವನ್ನು ಸಂಗ್ರಹಿಸುವುದು ಆ ಪಾತ್ರದ ಉದ್ದೇಶವಾಗಿರುತ್ತದೆ. ರಿಯಲ್ ಲೈಫ್‌ನ ಸೀತಾರಾಮರಾಜುಗೂ ಆರ್ ಆರ್ ಆರ್ ಸಿನಿಮಾದ ಆ ಪಾತ್ರಕ್ಕೂ ಒಂದೇ ಸಾಮ್ಯತೆ ಇರುವುದು ಶಸ್ತ್ರಾಸ್ತ್ರ ಸಂಗ್ರಹಿಸುವ ಉದ್ದೇಶದಲ್ಲಿ ಮಾತ್ರ. ಅದು ಬಿಟ್ಟರೆ ಎರಡಕ್ಕೂ ಹೋಲಿಕೆ ಅಸಾಧ್ಯವಾಗುತ್ತದೆ.

ಅಲ್ಲೂರಿ ಅಂತ್ಯ ಹೇಗೆ?

ಅಲ್ಲೂರಿ ಅಂತ್ಯ ಹೇಗೆ?

ಅಲ್ಲೂರಿ ಸೀತಾರಾಮರಾಜು ಬ್ರಿಟಿಷರಿಗೆ ಹೆಚ್ಚೆಚ್ಚು ಅಪಾಯಕಾರಿಯಾಗುತ್ತಾ ಹೋದಂತೆ ಅವರನ್ನು ಮುಗಿಸುವ ಪ್ರಯತ್ನ ಹೆಚ್ಚಾಯಿತು. ಅಲ್ಲೂರಿ ತಲೆಗೆ ಆಗಿನ ಕಾಲಕ್ಕೆ 10 ಸಾವಿರ ರೂ ಬಹುಮಾನ ಘೋಷಿಸಲಾಗಿತ್ತು. ಸೀತಾರಾಮರಾಜು ಬಲಗೈ ಮತ್ತು ಎಡಗೈ ಬಂಟರಂಗಿದ್ದ ಗಂಟಂ ದೋರಾ ಮತ್ತು ಮಲ್ಲು ದೋರಾ ತಲೆಗೆ ತಲಾ ಒಂದು ಸಾವಿರ ರೂ ಬಹುಮಾನ ಇಟ್ಟಿತು ಬ್ರಿಟಿಷ್ ಸರಕಾರ.

ಮಾನ್ಯಂ ಕ್ರಾಂತಿ ಎಂದು ಖ್ಯಾತವಾಗಿದ್ದ ಅಲ್ಲೂರಿ ಹೋರಾಟವನ್ನು ಹತ್ತಿಕ್ಕಲು 1924ರಲ್ಲಿ ಟಿಜಿ ರುದರ್‌ಫೋರ್ಡ್ ಅವರನ್ನು ಹೊಸ ಕಮಿಷನರ್ ಆಗಿ ನಿಯೋಜಿಸಲಾಯಿತು. ಮಲಬಾರ್ ಸ್ಪೆಷಲ್ ಪೊಲೀಸ್ ಮತ್ತು ಅಸ್ಸಾಮ್ ರೈಫಲ್ಸ್ ತುಕಡಿಗಳ ಸಹಾಯ ಪಡೆಯಲಾಯಿತು.

ರುದರ್‌ಫೋರ್ಡ್ ಕ್ರೂರ ವಿಧಾನಗಳನ್ನು ಅನುಸರಿಸಲಾರಂಭಿಸಿದ. ಸೀತಾರಾಮರಾಜು ಮತ್ತವರ ಸಹವರ್ತಿಗಳನ್ನು ಹುಡುಕಲು ಜನಸಾಮಾನ್ಯರನ್ನು ಹಿಂಸಿಸತೊಡಗಿದ. ಅಲ್ಲೂರಿಯನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಬ್ರಿಟಿಷರಿಗೆ 40 ಲಕ್ಷ ರೂ ವೆಚ್ಚವಾಗಿತ್ತಂತೆ.

ಕಮಿಷನರ್ ರುದರ್‌ಫೋರ್ಡ್ ಸಾಮಾನ್ಯ ಜನರ, ಅದರಲ್ಲೂ ಆದಿವಾಸಿಗಳ ಮೇಲೆ ಹಿಂಸಾಚಾರ ನಡೆಸುತ್ತಿದ್ದುದನ್ನು ತಾಳಲಾಗದೇ ಅಲ್ಲೂರಿ ಸೀತಾರಾಮರಾಜು ತಾನೇ ಖುದ್ದಾಗಿ ಬ್ರಿಟಿಷರಿಗೆ ಶರಣಾದರು. ಮೇ 7ರಂದು ಅವರನ್ನು ನೇಣಿಗೆ ಹಾಕಲಾಯಿತು.

ಇಂಥ ಹಲವು ಕ್ರಾಂತಿಕಾರಿಗಳ ಬಲಿದಾನಗಳಿಂದಾಗಿ ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದು ಸುಲಭವಾಗಿದ್ದೆಂಬುದು ಹೌದು.

(ಒನ್ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+