ವೈರಲ್ ವಿಡಿಯೋ: ಬಸ್ ಮೇಲೆ ಆನೆ ದಾಳಿ, ಚಾಲಕ ಪರಿಸ್ಥಿತಿ ನಿಭಾಯಿಸಿದ್ದು ಹೇಗೆ ನೋಡಿ?
ನೀಲ್ಗಿರೀಸ್, ಸೆಪ್ಟೆಂಬರ್ 29: ತಮಿಳುನಾಡಿನಲ್ಲಿ ಸರ್ಕಾರಿ ಬಸ್ ಒಂದರ ಮೇಲೆ ಆನೆ ದಾಳಿ ನಡೆಸಿರುವ ಘಟನೆ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರಿ ಬಸ್ ಮೇಲೆ ದಾಳಿ ನಡೆಸಿದ ಆನೆ ಬಸ್ನ ಗಾಜನ್ನು ತನ್ನ ದಂತದಿಂದ ಒಡೆದು ಹಾಕಿದೆ. ಆದರೆ ಈ ಆನೆ ದಾಳಿಯ ಸಂದರ್ಭದಲ್ಲಿ ಚಾಲಕನು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ವಿಡಿಯೋ ಸುಮಾರು 58 ಸೆಕೆಂಡುಗಳು ಇದ್ದು, ಆಕ್ರೋಶಿತ ಆನೆಯು ಸರ್ಕಾರಿ ಬಸ್ ಮೇಲೆ ದಾಳಿ ನಡೆಸಿರುವುದು ಕಂಡು ಬಂದಿದೆ. ಆನೆಯು ಮೊದಲು ಬಸ್ ಬಳಿ ಬಂದಿದ್ದು, ಜನರು ಆತಂಕಕ್ಕೆ ಒಳಗಾಗಿ ಬೊಬ್ಬೆ ಹೊಡೆಯುತ್ತಿದ್ದಂತೆ ಗಾಜನ್ನು ತನ್ನ ದಂತದಿಂದ ಒಡೆದಿರುವುದು ಕೂಡಾ ವಿಡಿಯೋದಲ್ಲಿ ನಾವು ಕಾಣಬಹುದು. ಸದ್ಯ ಈ ವಿಡಿಯೋವನ್ನು ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ.
ಮೈಸೂರು ದಸರಾ ವಿಶೇಷ; ಕ್ಯಾಪ್ಟನ್ 'ಅಭಿಮನ್ಯು' ದಿನಚರಿ ಬಲ್ಲಿರಾ?
ಈ ಘಟನೆಯು ಸೆಪ್ಟೆಂಬರ್ 25 ರಂದು ತಮಿಳುನಾಡಿನ ನೀಲ್ಗಿರೀಸ್ನಲ್ಲಿ ನಡೆದಿದೆ. ತಮಿಳು ನಾಡು ರಾಜ್ಯದ ಸರ್ಕಾರಿ ಬಸ್ ಮೆಟ್ಟುಪಾಳ್ಯಂನಿಂದ ಕೋಟಗಿರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಿನಿಂದ ಆನೆಯೊಂದು ರಸ್ತೆಯನ್ನು ದಾಟಲು ಆರಂಭಿಸಿತ್ತು. ಸಹಜವಾಗಿ ಆನೆಗಳು ವಾಹನದ ಶಬ್ದ ಕೇಳಿ ಉದ್ರೇಕಕ್ಕೆ ಒಳಗಾಗುವ ಕಾರಣದಿಂದಾಗಿ ಬಸ್ನ ಚಾಲಕ ಬಸ್ ಅನ್ನು ಬದಿಯಲ್ಲಿ ನಿಲ್ಲಿಸಿ ಆನೆ ರಸ್ತೆ ದಾಟಲು ಕಾದು ಕೂತಿದ್ದರು. ಆದರೆ ಆನೆ ನಿಂತಿದ್ದ ಬಸ್ ಮೇಲೆ ದಾಳಿ ನಡೆಸಿದೆ.
ಈ ವೈರಲ್ ವಿಡಿಯೋವನ್ನು ಸುಪ್ರಿಯಾ ಸಾಹೋ ಎಂಬವರು ಶೇರ್ ಮಾಡಿದ್ದಾರೆ. ಸುಪ್ರಿಯಾ ಸಾಹೋ ತಮಿಳುನಾಡಿನ ಪರಿಸರ ಹಾಗೂ ಅರಣ್ಯಗಳ ಹವಾಮಾನ ಬದಲಾವಣೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಸುಪ್ರಿಯಾ ಸಾಹೋ ಬಸ್ ಚಾಲಕನನ್ನು ಶ್ಲಾಘಿಸಿದ್ದಾರೆ.
ಇನ್ನು ಈ ವಿಡಿಯೋದಲ್ಲಿ ಆನೆಯು ಸರ್ಕಾರಿ ಬಸ್ ಬಳಿ ಬರುತ್ತಿದ್ದಂತೆ ಪ್ರಯಾಣಿಕರು ಆತಂಕಕ್ಕೆ ಒಳಗಾಗಿ ಕಿರುಚಾಡಿದ್ದು ಈ ಸಂದರ್ಭ ಆನೆ ಬಸ್ನ ಗಾಜಿಗೆ ದಂತದಿಂದ ಹಾನಿ ಗುದ್ದಿರುವುದು ಕಂಡು ಬಂದಿದೆ. ಇನ್ನು ಈ ಸಂದರ್ಭದಲ್ಲಿ ಬಸ್ ಚಾಲಕ ತನ್ನ ಸೀಟಿನಿಂದ ಮೆಲ್ಲನೇ ಎದ್ದು ಎಲ್ಲಾ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಹಿಂದಕ್ಕೆ ಸರಿಸಿದ್ದಾರೆ. ಈ ದೃಶ್ಯವು ಕೂಡಾ ವಿಡಿಯೋದಲ್ಲಿ ಕಂಡು ಬಂದಿದೆ. ಈ ವಿಡಿಯೋವನ್ನು ಶೇರ್ ಮಾಡಿದ ಐಎಎಸ್ ಅಧಿಕಾರಿ ಈ ಘಟನೆ ನಡೆದ ಸಂದರ್ಭದಲ್ಲಿ ಯಾವುದೇ ಗಲಿಬಿಲಿಗೊಳ್ಳದೆ, ಶಾಂತಯುತವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ: 'ಸೀರೆ ಹಾಕಿದ್ದೀರಿ ನಮ್ಮ ರೆಸ್ಟೋರೆಂಟ್ಗೆ ಬರಬೇಡಿ'!
"ನೀಲ್ಗಿರೀಸ್ನ ಈ ಸರ್ಕಾರಿ ಬಸ್ ಚಾಲಕನಿಗೆ ನನ್ನ ಅತೀವ ಗೌರವವನ್ನು ಸಲ್ಲಿಸುತ್ತೇನೆ. ಈ ಆತಂಕಕಾರಿ ಸಂದರ್ಭದಲ್ಲೂ ಪರಿಸ್ಥಿತಿಯನ್ನು ಶಾಂತ ರೀತಿಯಲ್ಲಿ ನಿಭಾಯಿಸಿದ ಈತನ ಕಾರ್ಯಕ್ಕೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಪ್ರಯಾಣಿಕರು ಸುರಕ್ಷಿತವಾಗಿ ಹಿಂದಕ್ಕೆ ಸರಿಯಲು ಈತ ಸಹಾಯ ಮಾಡಿದ್ದಾನೆ. ಶಾಂತಯುತವಾದ ಮನಸ್ಸು ಎಂದಿಗೂ ಕಾರ್ಯವನ್ನು ಸಾಧಿಸುತ್ತದೆ ಎಂದು ಹೇಳುವುದು ಇದಕ್ಕೆ," ಎಂದು ಟ್ವೀಟ್ ಮಾಡಿದ್ದಾರೆ.
Huge respect for the driver of this Government bus in Nilgiris who kept his cool even under the terrifying hits on the bus from an agitated tusker.He helped passengers move back safely, in an incident today morning. Thats why they say a cool mind works wonders VC- by a friend pic.twitter.com/SGb3yqUWqK
— Supriya Sahu IAS (@supriyasahuias) September 25, 2021
ಇನ್ನು ಆನೆ ದಾಳಿಯನ್ನು ನಡೆಸುತ್ತಿದ್ದಂತೆ ಚಾಲಕನು ಜನರನ್ನು ಹಿಂದಕ್ಕೆ ಸರಿಸಿದ್ದು, ಆ ಬಳಿಕ ಆನೆಯು ಹಿಂದಕ್ಕೆ ತೆರಳಿದೆ. ಈ ನಡುವೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕ ಮಂದಿ ಚಾಲಕನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಕಾಡು ಪ್ರಾಣಿಗಳ ದಾಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
"ಸಮಯ ಪ್ರಜ್ಞೆ, ದೈರ್ಯ, ತಾಳ್ಮೆಗೆ ನಮ್ಮ ನಮಸ್ಕಾರ. ಪ್ರಾಣಿ ದಾಳಿ ಮಾಡಲು ಬರುವ ಸಂದರ್ಭದಲ್ಲಿ ಆ ಘಾಟಿಯಲ್ಲಿ ಬಸ್ ಅನ್ನು ಹಿಂದಕ್ಕೆ ಕೊಂಡೊಯ್ಯುವುದು ಅತೀ ಅಪಾಯಕಾರಿ. ಆದರೆ ಚಾಲಕ ಬಹಳ ಜಾಗರೂಕವಾಗಿ ಪರಿಸ್ಥಿತಿ ನಿಭಾಯಿಸಿದ್ದಾನೆ. ಟಿಎನ್ಎಸ್ಟಿಸಿ ತಮ್ಮ ಚಾಲಕನ ಬಗ್ಗೆ ಹೆಮ್ಮೆ ಪಡಬೇಕು," ಎಂದು ಕೂಡಾ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.
(ಒನ್ಇಂಡಿಯಾ ಸುದ್ದಿ)