ಚಾಮರಾಜನಗರ: ರಸ್ತೆಗಿಳಿದ ಪ್ರಯಾಣಿಕರನ್ನು ಅಟ್ಟಾಡಿಸಿಕೊಂಡು ಹೋದ ಕಾಡಾನೆ, ವೀಡಿಯೋ ಭಾರೀ ವೈರಲ್
ಚಾಮರಾಜನಗರ, ಫೆಬ್ರವರಿ, 02: ಕಾರು ಬಿಟ್ಟು ಕಾಡಿನಲ್ಲಿ ರಸ್ತೆಗಿಳಿದ ಇಬ್ಬರನ್ನು ಆನೆ ಅಟ್ಟಾಡಿಸಿ ದಾಳಿಗೆ ಮುಂದಾದ ಘಟನೆ ಕರ್ನಾಟಕ ಗಡಿಯಲ್ಲಿರುವ ವೈನಾಡಿನ ಮುತ್ತಂಗ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಾರು ಬಿಟ್ಟು ಸೆಲ್ಫಿಗೋ, ಮೂತ್ರ ವಿಸರ್ಜನೆಗೋ ಇಳಿದಿದ್ದ ಇಬ್ಬರನ್ನು ಏಕಾಏಕಿ ಕಾಡಾನೆ ಅಟ್ಟಾಡಿಸಿದೆ.

ಓಡುವ ಭರದಲ್ಲಿ ಬಿದ್ದ ಓಬ್ಬಾತನ ಮೇಲೆ ಆನೆ ತುಳಿಯುವ ಪ್ರಯತ್ನ ಮಾಡಿದ್ದು, ಅದೃಷ್ಟವಶಾತ್ ವ್ಯಕ್ತಿಗೆ ಯಾವುದೇ ಮಾರಣಾಂತಿಕ ಗಾಯಗಳಾಗಿಲ್ಲ. ಸದ್ಯ, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಬಂಡೀಪುರದಲ್ಲಿ ಹುಲಿ ಸಾವು: ಮತ್ತೊಂದೆಡೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯ ಮದ್ದೂರು ಗಸ್ತಿನಲ್ಲಿ ಹುಲಿಯೊಂದು ಮೃತಪಟ್ಟಿದೆ.
ಮೃತ ಹುಲಿಯು 03-04 ವರ್ಷದ ಗಂಡು ಹುಲಿಯಾಗಿದ್ದು, ಕಾಡಿನಲ್ಲಿ ಮತ್ತೊಂದು ಹುಲಿ ಜೊತೆ ಕಾದಾಟ ನಡೆಸುವಾಗ ದೇಹಕ್ಕೆ ಬಲವಾದ ಪೆಟ್ಟುಬಿದ್ದಿದೆ.
ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಹುಲಿಯ ಹೊಟ್ಟೆಯ ಒಳಭಾಗದಲ್ಲಿ ಮುಳ್ಳು ಹಂದಿಯ ಮುಳ್ಳುಗಳು ಕಂಡುಬಂದಿದ್ದು, ಹೊಟ್ಟೆಯ ಒಳ ಭಾಗದಲ್ಲಿ ಮುಳ್ಳುಗಳು ಚುಚ್ಚಿ ರಕ್ತ ಸ್ರಾವವಾಗಿ ಹುಲಿಯು ಮೃತಪಟ್ಟಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಯಮಾನುಸಾರ ಶರೀರವನ್ನು ಸುಡಲಾಗಿದೆ.












Click it and Unblock the Notifications