ಜುಲೈ 31ರೊಳಗೆ 100 ಕಸದ ಬ್ಲಾಕ್ ಸ್ಪಾಟ್ ಕ್ಲೀನ್! ಬೆಂಗಳೂರಿಗೆ ಸೌಂದರ್ಯೀಕರಣಕ್ಕೆ ವೇಗ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಾಚಾರಿ ಒತ್ತುವರಿ ತೆರವು ಕಾರ್ಯ ಮುಂದುವರಿದಿದೆ. ಬುಧವಾರದಿಂದಲೇ ನಗರದ ವಿವಿಧ ಮುಖ್ಯರಸ್ತೆಗಳು, ಮಾರುಕಟ್ಟೆ, ಜಂಕ್ಷನ್ಗಳ ಒತ್ತುವರಿ ಸ್ಥಳದಲ್ಲಿ ಬುಲ್ಡೋಜರ್ಗಳ ಘರ್ಜಿಸುತ್ತಿವೆ. ಮತ್ತೊಂದೆಡೆ ಮುಂದಿನ ಜುಲೈ 31ರ ಹೊತ್ತಿಗೆ ಒಟ್ಟು ಸುಮಾರು 100 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಲು ಬೆಂಗಳೂರು ಉತ್ತರ ನಗರ ಪಾಲಿಕೆ ಗುರಿ ಹಾಕಿಕೊಂಡಿದೆ.
ವಿಶ್ವ ಪರಿಸರ ದಿನಾಚರಣೆಯ (ಜೂನ್ 5) ಅಂಗವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ಕೃಷ್ಣ ಬೈರೇಗೌಡ ಅವರ ಸೂಚನೆ ಮೇರೆಗೆ ಸ್ವಚ್ಛತಾ ಕಾರ್ಯ ಆರಂಭಿಸಲಾಗಿತ್ತು. ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಈಗಾಗಲೇ ವಿವಿಧ ಸ್ಥಳಗಳಲ್ಲಿ ಈಗಾಗಲೇ 50 ಸ್ಥಳಗಳಲ್ಲಿ ತೆರವು ಕೆಲಸ ಪೂರ್ಣಗೊಂಡಿದೆ. ಮುಂದಿನ 45 ದಿನಗಳೊಳಗಾಗಿ ಕಾರ್ಯ ಸಂಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.

ಶೇ. 50ರಷ್ಟು ಬ್ಲಾಕ್ ಸ್ಪಾಟ್ ಸ್ವಚ್ಛತೆ ಪೂರ್ಣ
ಪಾಲಿಕೆ ವಿಶೇಷ ಸ್ವಚ್ಛತಾ ಅಭಿಯಾನವು ಇದೇ ಜೂನ್ 15ರಿಂದ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಈಗಾಗಲೇ ಶೇ. 50ರಷ್ಟು ಪ್ರಗತಿಯೊಂದಿಗೆ 50 ಕಸದ ಬ್ಲಾಕ್ ಸ್ಪಾಟ್ ಗಳನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಲಾಗಿದೆ. ಉಳಿದ 50 ಸ್ಥಳಗಳ ಸ್ವಚ್ಛತಾ ಕಾರ್ಯವನ್ನು ಇದೇ ಜುಲೈ 31ರೊಳಗೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಆಯುಕ್ತರು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಕಸ ಸಂಗ್ರಹಣೆ, ಅನಧಿಕೃತ ತ್ಯಾಜ್ಯ ವಿಸರ್ಜನೆ ಹಾಗೂ ನಿರ್ವಹಣೆಯ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದ 100 ಪ್ರಮುಖ ಕಸದ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಯಿತು. ಅವುಗಳನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಿ, ಸ್ವಚ್ಛ ಹಾಗೂ ಸಾರ್ವಜನಿಕ ಸ್ನೇಹಿ ಸ್ಥಳಗಳಾಗಿ ಪರಿವರ್ತಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನವನ್ನು ಬೆಂಗಳೂರಿನಗ ನಾಗರಿಕರು ಪ್ರಶಂಸಿಸಿದ್ದಾರೆ.
ಬ್ಲಾಕ್ ಸ್ಪಾಟ್ಗಳ ಸೌಂದರೀಕರಣ ಪೂರ್ಣ
ಅಭಿಯಾನ ಭಾಗವಾಗಿ ಪಾಲಿಕೆ ಅಧಿಕಾರಿಗಳು ಗುರುತಿಸಿದ್ದ 100 ಕಸದ ಬ್ಲಾಕ್ ಸ್ಪಾಟ್ ಗಳ ಪೈಕಿ ಇದುವರೆಗೆ 50 ಸ್ಥಳಗಳಲ್ಲಿ ಸ್ವಚ್ಛತಾ ಹಾಗೂ ಸೌಂದರ್ಯೀಕರಣ ಕಾರ್ಯಗಳನ್ನು ಯಶಸ್ವಿಯಾಗಿದೆ. ಕಸ ಹಾಗೂ ತ್ಯಾಜ್ಯ ತೆರವು, ಪಾದಚಾರಿ ಮಾರ್ಗಗಳ ದುರಸ್ತಿ, ರಸ್ತೆಬದಿ ಸ್ವಚ್ಛತೆ, ಬೀದಿ ದೀಪಗಳ ನಿರ್ವಹಣೆ, ಗೋಡೆಗಳ ಸೌಂದರೀಕರಣ, ಹಸಿರೀಕರಣ ಹಾಗೂ ಸಾರ್ವಜನಿಕ ಉಪಯೋಗಕ್ಕೆ ಅನುಕೂಲವಾಗುವ ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ವಿವಿಧ ಕಾರ್ಯ ಮುಗಿದಿವೆ ಎಂದು ಅವರು ವಿವರಿಸಿದರು.
ಈ ಪ್ರದೇಶಗಳಲ್ಲಿ ಹಿಂದೆ ಕಸದ ರಾಶಿಗಳು ಕಂಡುಬರುತ್ತಿದ್ದ ಸ್ಥಳಗಳು ಇಂದು ಸ್ವಚ್ಛ, ಸುಂದರ ಹಾಗೂ ಸಾರ್ವಜನಿಕರಿಗೆ ಅನುಕೂಲಕರ ಸ್ಥಳಗಳಾಗಿ ಪರಿವರ್ತನೆಗೊಂಡಿವೆ. ಯುಬಿ 100 ಅಭಿಯಾನದಡಿ ಗುರುತಿಸಲಾದ ಎಲ್ಲಾ ಬ್ಲಾಕ್ ಸ್ಪಾಟ್ ಗಳನ್ನು ಶಾಶ್ವತವಾಗಿ ನಿರ್ಮೂಲನೆಗೊಳಿಸಲಾಗುವುದು. ಈ ಮೂಲಕ ನಗರದ ಸೌಂದರ್ಯ ಹೆಚ್ಚಿಸಲು ಪಾಲಿಕೆ ಸದಾ ಬದ್ಧವಾಗಿದೆ. ಜುಲೈ 31ರೊಳಗೆ ಬಾಕಿ ಎಲ್ಲ ಬ್ಲ್ಯಾಕ್ ಸ್ಪಾಟ್ಗಳು ಸ್ವಚ್ಛತಾ ಕೆಲಸ ಪೂರ್ಣಗೊಳ್ಳಲಿವೆ ಎಂದರು.
ಸ್ವಚ್ಛತೆ ಬಳಿಕ ಮುಂದೇನು?
ಬ್ಲಾಕ್ ಸ್ಪಾಟ್ ಸ್ಥಳ ಸ್ವಚ್ಛಗೊಳಿಸಿದ ಬಳಿಕ ಸ್ಥಳದ ಅಗತ್ಯಕ್ಕೆ ಅನುಗುಣವಾಗಿ ಗೋಡೆಗಳ ಸೌಂದರೀಕರಣ, ಹಸಿರೀಕರಣ, ಬೀದಿ ದೀಪಗಳ ಅಳವಡಿಕೆ, ಪಾದಚಾರಿ ಮಾರ್ಗಗಳ ಅಭಿವೃದ್ಧಿ, ಸಣ್ಣ ಉದ್ಯಾನಗಳ ನಿರ್ಮಾಣ ಹಾಗೂ ಸಾರ್ವಜನಿಕ ಬಳಕೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಮೂರು ಹಂತಗಳಲ್ಲಿ ಅಭಿಯಾನ
ಮೊದಲ ಹಂತದಲ್ಲಿ ಸ್ವಚ್ಛಗೊಳಿಸಿ, ಮೂಲಸೌಕರ್ಯ ದುರಸ್ತಿ ಮಾಡಲಾಗುವುದು. ಕಸ, ತ್ಯಾಜ್ಯ ಹಾಗೂ ಅನಗತ್ಯ ವಸ್ತುಗಳ ಸಂಪೂರ್ಣ ತೆರವು, ಪಾದಚಾರಿ ಮಾರ್ಗ ಹಾಗೂ ರಸ್ತೆಬದಿ ದುರಸ್ತಿ, ಬೀದಿ ದೀಪಗಳ ದುರಸ್ತಿ ಮತ್ತು ಹೊಸ ದೀಪಗಳ ಅಳವಡಿಕೆಯಾಗಿದೆ.
ಎರಡನೇ ಹಂತದಲ್ಲಿ ಸ್ಥಳ ಪರಿವರ್ತಿಸಿ ಸೌಂದರ್ಯ ಹೆಚ್ಚಿಸಲು ಒತ್ತು ನೀಡಲಾಗುವುದು. ಗೋಡೆ ಚಿತ್ರಕಲೆ ಹಾಗೂ ಕಲಾತ್ಮಕ ವಿನ್ಯಾಸಗಳ ಅಳವಡಿಕೆ, ಹಸಿರೀಕರಣ ಮತ್ತು ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗುವುದು. ಇದರೊಂದಿಗೆ ಆ ಸ್ಥಳದಲ್ಲಿ ಬೆಂಚ್ ಹಾಕಿ ಜನ ಕುಳಿತುಕೊಳ್ಳುವಂತೆ ಮಾಡಲಾಗುವುದು. ಮೂರನೇ ಹಂತದಲ್ಲಿ ಅಭಿವೃದ್ಧಿಗೊಳಿಸಿದ ಬ್ಲಾಸ್ಸ್ಟಾಪ್ಗಳ ಮೇಲೆ ನಿಗಾ ಇಡುವುದು, ಮಾರ್ಷಲ್ಗಳ ಮೂಲಕ ಕಸ ಸಂಗ್ರಹವಾಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













Click it and Unblock the Notifications