'ವೈಭವ್ ಸೂರ್ಯವಂಶಿಗೆ ಸ್ಥಾನ ನೀಡಿದ್ರೆ ತಂಡಕ್ಕೆ ಆಗಲಿದೆ ದೊಡ್ಡ ಪ್ಲಸ್ ಪಾಯಿಂಟ್'
IND Vs ENG T20 Series: ಐಪಿಎಲ್ 2026ರಲ್ಲಿ ಆಕ್ರಮಣಕಾರಿ ಆಟದಿಂದ ಇಡೀ ಕ್ರಿಕೆಟ್ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ವೈಭವ್ ಸೂರ್ಯವಂಶಿ ಅವರು ಇತ್ತೀಚೆಗಷ್ಟೇ ಭಾರತದ ಹಿರಿಯರ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅವರಿಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಎರಡೂ ಪಂದ್ಯಗಳಲ್ಲೂ ಅವಕಾಶ ಸಿಗದೆ ಹೊರಗುಳಿದರು. ಇಂಗ್ಲೆಂಡ್ ಪ್ರವಾಸದಲ್ಲೂ ಅದೇ ಮುಂದುವರೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಈ ಬಾಲಕನನ್ನ ಆಡಿಸಿದರೆ ತಂಡಕ್ಕೆ ಪ್ಲಸ್ ಪಾಯಿಂಟ್ ಏನು ಅಂತಲೂ ತಿಳಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ತರಬೇತುದಾರ ರವಿಶಾಸ್ತ್ರಿ ಅವರು ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಟ್ಟಿರುವ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ನಿರ್ಧಾರವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದಾರೆ. ಐಪಿಎಲ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನಗಳ ಮೂಲಕ ಭಾರಿ ಸಂಚಲನ ಮೂಡಿಸಿರುವ 15 ವರ್ಷದ ಈ ಯುವ ಆಟಗಾರನನ್ನು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಟಿ20 ಸರಣಿಗಳಿಗೆ ಆಯ್ಕೆ ಮಾಡಲಾಗಿತ್ತು.

ಒಂದು ಚಾನ್ಸ್ ಸಿಕ್ಕರೆ ಸಚಿನ್ ದಾಖಲೆ ಉಡೀಸ್
ಆದರೆ ಐರ್ಲೆಂಡ್ ವಿರುದ್ಧದ ಸರಣಿಯ ಎರಡೂ ಪಂದ್ಯಗಳಲ್ಲಿ ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ಅವರಿಗೆ ಆಡುವ ಅವಕಾಶ ನೀಡದೆ ಬೆಂಚ್ ಕಾಯುವಂತೆ ಮಾಡಲಾಗಿದೆ. ವೈಭವ್ ಸೂರ್ಯವಂಶಿ ಇನ್ನೂ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆಗಾಗಿ ಕಾಯುತ್ತಿದ್ದಾರೆ. ಇದು ಸಕಾರಗೊಂಡರೆ ಈ 15 ವರ್ಷದ ಬಾಲಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (16ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ) ಅವರ ದಾಖಲೆಯನ್ನು ಮುರಿಯಲಿದ್ದಾರೆ.
ಟೀಮ್ ಇಂಡಿಯಾ ಮಾಜಿ ಕೋಚ್ ಅಸಮಾಧಾನ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ನೇರ ಪ್ರಸಾರದ ವೇಳೆ ಮಾತನಾಡಿದ ರವಿಶಾಸ್ತ್ರಿ, ಐರ್ಲೆಂಡ್ ಸರಣಿಯಲ್ಲೇ ಈ ಯುವ ಆಟಗಾರನಿಗೆ ಅವಕಾಶ ನೀಡಬೇಕಾಗಿತ್ತು. ಅಲ್ಲಿನ ಮೈದಾನದ ಪರಿಸ್ಥಿತಿಗಳು ಮತ್ತು ಪಿಚ್ ವೈಭವ್ ಬ್ಯಾಟಿಂಗ್ ಶೈಲಿಗೆ ಸೂಕ್ತವಾಗಿದ್ದವು ಎಂದು ಅವರು ತಿಳಿಸಿದರು. ಇದೇ ವೇಳೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ನ ಈ ನಿರ್ಧಾರದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
'ವೈಭವ್ಗೆ ಬೆಂಚ್ ಕಾಯಿಸುವುದು ಸರಿಯಲ್ಲ'
'ವೈಭವ್ ಸೂರ್ಯವಂಶಿ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡಬೇಕಾಗಿತ್ತು. ಅಲ್ಲಿನ ನಿಧಾನಗತಿಯ ಹಾಗೂ ಚಿಕ್ಕ ಮೈದಾನದಲ್ಲಿ ಅವರು ಆಕ್ರಮಣಕಾರಿ ಆಟ ಆಡುತ್ತಿದ್ದರು. ಇದೀಗ ಇಂಗ್ಲೆಂಡ್ನಲ್ಲಿ ಅವರಿಗೆ ಅವಕಾಶ ಸಿಗುತ್ತದೆಯೇ ಇಲ್ಲವೇ ಎಂಬುದು ನನಗೆ ತಿಳಿದಿಲ್ಲ. ಆದರೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅವರನ್ನು ಕಣಕ್ಕಿಳಿಸಬೇಕು. ಐಪಿಎಲ್ನಲ್ಲಿ ವಿಶ್ವದರ್ಜೆಯ ಎಲ್ಲಾ ವೇಗದ ಬೌಲರ್ಗಳನ್ನು ದಂಡಿಸಿದ್ದಾರೆ. ಅಂತಹ ಆಟಗಾರನನ್ನು ಬೆಂಚ್ ಕಾಯಿಸುವುಸು ಸರಿಯಲ್ಲ,' ಎಂದು ರವಿಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದರು.
ವೈಭವ್ ಆಡಿಸಿದ್ರೆ ತಂಡಕ್ಕೆ ಪ್ಲಸ್ ಪಾಯಿಂಟ್ ಏನು?
ವೈಭವ್ ಸೂರ್ಯವಂಶಿ ಅವರಲ್ಲಿ ಯಾವುದೇ ಭಯವಿಲ್ಲದ ಆಟದ ಶೈಲಿ ಇದೆ. ಇದು ಭಾರತ ತಂಡಕ್ಕೆ ಅಗ್ರ ಕ್ರಮಾಂಕದಲ್ಲಿ ದೊಡ್ಡ ಪ್ಲಸ್ ಪಾಯಿಂಟ್ ಆಗಬಹುದು. ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯು ಪಂದ್ಯದ ಆರಂಭದಲ್ಲೇ ದೊಡ್ಡ ಮೊತ್ತವನ್ನು ಕಲೆಹಾಕಲು ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಗೆ ಒತ್ತಡವಿಲ್ಲದೆ ಆಡಲು ಸಹಾಯ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರವಿಶಾಸ್ತ್ರಿ ಮಹತ್ವದ ಸಲಹೆ
'ವೈಭವ್ಗೆ ಯಾವುದೇ ಹಳೆಯ ಹೊರೆ ಅಥವಾ ಒತ್ತಡಗಳಿಲ್ಲ. ಆರಂಭದ 2-3 ಓವರ್ಗಳಲ್ಲಿ ಅವರು ನೀಡುವ ಬಿರುಸಿನ ಆರಂಭವು ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಗೆ ನೆರವಾಗುತ್ತದೆ. ಆದ್ದರಿಂದ ಅವರಿಗಾಗಿ ತಂಡದಲ್ಲಿ ಸ್ಥಾನ ಹುಡುಕುವುದು ಎಷ್ಟು ಬೇಗ ಸಾಧ್ಯವೋ ಅಷ್ಟು ಒಳ್ಳೆಯದು,' ಎಂದು ಮಾಜಿ ಕೋಚ್ ರವಿಶಾಸ್ತ್ರಿ ಅವರು ಸಲಹೆ ನೀಡಿದರು.
ದುರದೃಷ್ಟವಶಾತ್ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ವೈಭವ್ಗೆ ಅವಕಾಶ ಸಿಗಲಿಲ್ಲ ಮತ್ತು ಆ ಪಂದ್ಯವು ಮಳೆಯಿಂದಾಗಿ ರದ್ದಾಯಿತು. ಸರಣಿಯ ಮುಂಬರುವ ಪಂದ್ಯಗಳಲ್ಲಾದರೂ ಈ ಯುವ ಆಟಗಾರನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಲು ಭಾರತೀಯ ತಂಡದ ಮ್ಯಾನೇಜ್ಮೆಂಟ್ ಅವಕಾಶ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಆಟ ನೋಡಲು ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ.












Click it and Unblock the Notifications