ಪ್ರಧಾನಿಯಿಂದ ಸಚಿವರವರೆಗೆ ಹೊಸ ನಿಯಮ: 30 ದಿನ ಜೈಲಿನಲ್ಲಿದ್ದರೆ ಜನಪ್ರತಿನಿಧಿಗಳ ಹುದ್ದೆ ಸ್ವಯಂ ತೆರವು!
ನವದೆಹಲಿ: ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ ಅಕ್ರಮ, ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುವವರಿಗೆ ಕೇಂದ್ರ ಸರ್ಕಾರದ ಈ ಮಹತ್ವದ ತಿದ್ದುಪಡಿಯು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಅಂದರೆ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಸತತ 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರೆ ಅಂಥವರು ಸ್ವಯಂ ಆಗಿ ತಮ್ಮ ಹುದ್ದೆ ಕಳೆದುಕೊಳ್ಳಲಿದ್ದಾರೆ. ಇಂಥದೊಂಡು ನಿಯಮ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಪ್ರಧಾನ ಮಂತ್ರಿ, ರಾಜ್ಯಗಳ ಮುಖ್ಯಮಂತ್ರಿಗಳು ಅಥವಾ ಕೇಂದ್ರ ಇಲ್ಲವೇ ರಾಜ್ಯ ಸಚಿವರೇ ಆಗಿರಲಿ, ಅವರುಗಳು ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಸತತ 30 ದಿನಗಳ ಕಾಲ ಜೈಲು ಸೇರಿದರೆ ಅವರ ಸ್ಥಾನವು 31 ದಿನಕ್ಕೆ ಸ್ವಯಂ ವಜಾಗೊಳ್ಳುವಂತಹ ಕಾನೂನನ್ನು ತಿದ್ದುಪಡಿ ಮೂಲಕ ತರಲು ಕೇಂದ್ರ ಮುಂದಾಗಿದೆ. ಈ ಸಾಂವಿಧಾನಿಕ ತಿದ್ದುಪಡಿ ಪ್ರಸ್ತಾಪಕ್ಕೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಬೆಂಬಲಿಸಲಿದೆ. ಮಸೂದೆಯಲ್ಲಿರುವ ಈ ಮಹತ್ವದ ಹಾಗೂ ಚರ್ಚಾಸ್ಪದ ನಿಯಮ ಹಾಗೇ ಉಳಿಸಿಕೊಳ್ಳಲು ಸಮಿತಿ ಮುಂದಾಗಿದೆ ಎಂದು ತಿಳಿದು ಬಂದಿದೆ.

ಸಂಸತ್ನಲ್ಲಿ ಅಮಿತ್ ಶಾರಿಂದ ಮಸೂದೆ ಮಂಡನೆ
2025ರ ಆಗಸ್ಟ್ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ 130ನೇ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಿದ್ದರು. ಅದರ ಪ್ರಕಾರ, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಬಹುದಾದ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದ, ಅಥವಾ ಆರೋಪ ಕೇಳಿ ಬಂದು ಒಂದು ತಿಂಗಳ ಕಾಲ ಜೈಲಿನಲ್ಲಿದ್ದರೆ ಅಂತವರಿಗೆ ಈ ನಿಯಮ ಅನ್ವಯಿಸಲಿದೆ. ಅವರು ಪ್ರಧಾನಿ ಆಗಿರಬಹುದು, ಯಾವುದೇ ರಾಜ್ಯದ ಮುಖ್ಯಮಂತ್ರಿ ಆಗಿರಬಹುದು, ಕೇಂದ್ರ ಮತ್ತು ರಾಜ್ಯ ಸಚಿವರೇ ಆಗಿದ್ದರು ಅವರು ಈ ಹೊಸ ನಿಯಮದ ವ್ಯಾಪ್ತಿಗೆ ಬರಲಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಎಂಬಂತೆ ಜನಪ್ರತಿನಿಧಿಗಳು 31 ದಿನಕ್ಕೆ ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರಧಾನಿ ಮತ್ತು ಕೇಂದ್ರ ಸಚಿವರ ವಜಾ ಪ್ರಕ್ರಿಯೆಯನ್ನು ರಾಷ್ಟ್ರಪತಿಗಳು ನಿರ್ಧರಿಸುತ್ತಾರೆ. ಮುಖ್ಯಮಂತ್ರಿಗಳು ಮತ್ತು ರಾಜ್ಯ ಸಚಿವರ ವಜಾಗೊಳಿಸುವ ಅಧಿಕಾರವನ್ನು ಆಯಾ ರಾಜ್ಯಗಳ ರಾಜ್ಯಪಾಲರು ಅಂತಿಮಗೊಳಿಸಲಿದ್ದಾರೆ ಎಂಬ ಅಂಶವನ್ನು ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.
ಸಂಸದೀಯ ಸಮಿತಿ ಶಿಫಾರಸು ಮತ್ತು ರಕ್ಷಣೆಗಳು
ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ನೇತೃತ್ವದ 31 ಸದಸ್ಯರ ಜಂಟಿ ಸಂಸದೀಯ ಸಮಿತಿಯು ಮುಂಬರುವ ಜುಲೈ 17ರಂದು ಈ ಮಸೂದೆಯ ಕುರಿತು ಅಂತಿಮ ವರದಿ ಸಲ್ಲಿಸಲಿದೆ. ರಾಜಕೀಯ ದ್ವೇಷ ಸಾಧನೆಗಾಗಿ, ವಿನಾಕಾರಣ ಪ್ರತಿಕಾರ ತೀರಿಸಿಕೊಳ್ಳಲು ಈ ಕಾಯ್ದೆಯ ದುರುಪಯೋಗ ತಡೆಗೆ ಸಮಿತಿಯು ಒಂದಷ್ಟು ರಕ್ಷಣಾತ್ಮಕ ನಿಯಮಗಳ ಜಾರಿಗೆ ಶಿಫಾರಸು ಮಾಡಿದೆ. ಇತ್ತ ಬಿಜೆಪಿ ನಿಶ್ಚಿತ ಗಂಭೀರ ಅಪರಾಧಗಳಿಗೆ ಮಾತ್ರ ಈ ತಿದ್ದುಪಡಿ ನಿಯಮ ಸೀಮಿತಗೊಳಿಸಲು ಜೆಪಿಸಿ ಸಲಹೆ ನೀಡಿದೆ.
ಹಾಲಿ ನಿಯಮಗಳ ಪ್ರಕಾರ, ಇಂತಹ ಗಂಭೀರ ಪ್ರಕರಣಗಳಲ್ಲಿ ದೂಷಿಯಾಗಿ ಶಿಕ್ಷೆ ಸಾಬೀತಾದ ನಂತರವೇ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಬೇಕು. ಅಥವಾ ತಪ್ಪು ಸಾಬೀತಾಗಿ ಶಿಕ್ಷೆ ಪ್ರಮಾಣ ಪ್ರಕಟವಾದ ನಮತರವೇ ರಾಜಕಾರಣಿಗಲು ಹುದ್ದೆಯಿಂದ ಕೆಳಗಿಳಿಯುತ್ತಾರೆ. ಆದರೆ ಕೇವಲ ನ್ಯಾಯಾಂಗ ಬಂಧನವನ್ನೇ ಆಧಾರವಾಗಿಟ್ಟುಕೊಂಡು ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದುಹಾಕುವ ಈ ಹೊಸ ಪ್ರಸ್ತಾವನೆಗೆ ಕೇಂದ್ರ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ಅಪರಾಧ ಆರೋಪಗಳ ಮೇಲೆ ನ್ಯಾಯಾಂಗ ಬಂಧನದಲ್ಲಿದ್ದರೆ ಸರಾಗ ಆಡಳಿತ ನಡೆಸಲು ಅಸಾಧ್ಯ. ಆದ್ದರಿಂದ ಸಾರ್ವಜನಿಕ ಹುದ್ದೆ, ಘನತೆ ಹಾಗೂ ಪ್ರಾಮಾಣಿಕತೆ ರಕ್ಷಣೆ ನಿಟ್ಟಿನಲ್ಲಿ ಕಠಿಣ ಕ್ರಮ ಅಗತ್ಯ ಎಂದು ಕೇಂದ್ರ ಸರ್ಕಾರ ಬಲವಾಗಿ ಪ್ರತಿಪಾದಿಸಿದೆ. ಈ ನಿಯಮಗಳು ಜಾರಿಬರುವಷ್ಟರಲ್ಲಿ ಇನ್ನಷ್ಟು ಆಕ್ಷೇಪಣೆ, ವಿರೋಧ ಕೇಳಿ ಬಂದರೂ ಅಚ್ಚರಿಯಿಲ್ಲ.













Click it and Unblock the Notifications