ಬಾಗೇಪಲ್ಲಿ- ಗುಡಿಬಂಡೆ: ಜೀವ ಉಳಿಸುವ ನೀರು ನೀಡಿದರೆ ಅವರೇ ದೇವರು
ಬಾಗೇಪಲ್ಲಿ ಹಾಗೂ ಗುಡಿಬಂಡೆ ಎರಡೂ ತಾಲೂಕು ಸೇರಿ ಒಂದು ವಿಧಾನಸಭಾ ಕ್ಷೇತ್ರ ಮಾಡಲಾಗಿದೆ. ಇಲ್ಲಿನ ಜನರ ಅಸಮಾಧಾನ ಶುರುವಾಗುವುದು ಅಲ್ಲಿಂದ. ಮೊದಲಿಗೆ ಬಾಗೇಪಲ್ಲಿ ತಾಲೂಕಿನ ಸ್ಥಿತಿ ಹೇಳುವುದಾದರೆ, ತೆಲುಗು ಭಾಷೆಯನ್ನು ಹೆಚ್ಚು ಬಳಕೆ ಮಾಡುತ್ತಾರೆ ಇಲ್ಲಿನ ಜನ. ಹಿಂದುಳಿದ ತಾಲೂಕು ಎಂಬುದು ಬಹಳ ಕಾಲದಿಂದ ಈ ತಾಲೂಕಿಗೆ ಅಂಟಿಕೊಂಡಿರುವ ಹಣೆಪಟ್ಟಿ.
ಮೊದಲಿನಿಂದಲೂ ಕಮ್ಯುನಿಸ್ಟ್ ಮತ್ತು ಎಡ ಚಿಂತನೆ ಪರ ಹೋರಾಟದ ದಟ್ಟ ಪ್ರಭಾವ ಇದೆ. ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ಇದು ಗಡಿ ತಾಲ್ಲೂಕು. ಸಿಪಿಎಂನ ಜಿ.ವಿ.ಶ್ರೀರಾಮರೆಡ್ಡಿ ಅವರು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಪಕ್ಷೇತರರಾಗಿ ಸ್ಪರ್ಧಿಸಿ ಸದ್ಯಕ್ಕೆ ಶಾಸಕರಾಗಿರುವ ಎಸ್.ಎನ್.ಸುಬ್ಬಾರೆಡ್ಡಿ ಕಾಂಗ್ರೆಸ್ ಕಡೆಗೆ ವಾಲಿದ್ದಾರೆ.
ಚುನಾವಣೆ ವೇಳೆ ಹಣದ ಹೊಳೆ ಹರಿಯುವ, ಮತ ಗಳಿಕೆಗಾಗಿ ಜನರನ್ನು ಓಲೈಸಲು ಸಮಾಜ ಸೇವೆಯೂ ಜೋರಾಗಿ ನಡೆಯುತ್ತದೆ. ತಾಲೂಕಿನ ಕೆಲ ಗ್ರಾಮಗಳಲ್ಲಿ ಇದುವರೆಗೆ ಸಮರ್ಪಕವಾದ ಸಾರಿಗೆ ಸೌಕರ್ಯ ಕೂಡ ಇಲ್ಲ. ಬಹುತೇಕ ಮಂದಿ ಅನಕ್ಷರಸ್ಥರಾಗಿದ್ದು, ಅವರ ಜೀವನಮಟ್ಟ ಹೆಚ್ಚು ಸುಧಾರಣೆ ಕಂಡಿಲ್ಲ.

ಐತಿಹಾಸಿಕ ಗಡಿದಂ ದೇಗುಲ ಸೇರಿದಂತೆ ಅನೇಕ ಪುರಾತನ ದೇಗುಲಗಳು ಇಲ್ಲಿವೆ. ಇತರೆ ತಾಲೂಕುಗಳಿಗೆ ಹೋಲಿಸಿದರೆ, ಇಲ್ಲಿನ ಜನರು ಕೊಂಚ ಬಿರುಸು. ಬಹುತೇಕ ಗ್ರಾಮಗಳಲ್ಲಿ ಕೊಳವೆಬಾವಿ ಮೂಲಕ ವಿಷಯುಕ್ತ ಫ್ಲೋರೈಡ್ ನೀರು ಪೂರೈಕೆಯಾಗುತ್ತಿದ್ದು, ಅದನ್ನು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಇನ್ನು ಗುಡಿಬಂಡೆ ತಾಲೂಕಿನ ಬಗ್ಗೆ ಹೇಳುವುದಾದರೆ, ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಈ ತಾಲೂಕು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಪ್ರತ್ಯೇಕ ಕ್ಷೇತ್ರಕ್ಕೆ ಬೇಡಿಕೆಯಿದೆ. ಫ್ಲೋರೈಡ್ ನೀರಿನ ಸಮಸ್ಯೆಯಿದ್ದು, ಶುದ್ಧ ಕುಡಿಯುವ ನೀರು ಸಿಗುವುದಿಲ್ಲ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವರ್ಲಕೊಂಡ ಗ್ರಾಮದಲ್ಲಿ ಏಕಶಿಲಾ ಬೆಟ್ಟವಿದ್ದು, ಈ ಭಾಗದಲ್ಲಿ ಪ್ರಸಿದ್ಧ. ಗುಡಿಬಂಡೆ ಅಮಾನಿಸಾಗರ ಕೆರೆ ಬತ್ತಿದಂಥ ಉದಾಹರಣೆಯೇ ಕಡಿಮೆ. ಚಿತ್ರದುರ್ಗದಂತೆಯೇ ಇಲ್ಲಿಯೂ ಏಳು ಸುತ್ತಿನ ಕೋಟೆಯಿದೆ. ದಶಕಗಳ ಬೇಡಿಕೆ ನಂತರ ಎರಡು ವರ್ಷದ ಹಿಂದೆಯಷ್ಟೇ ರಸ್ತೆ ವಿಸ್ತರಣೆಯಾಗಿದೆ.
ಬಾಗೇಪಲ್ಲಿಗೆ ಹೋಲಿಸಿದರೆ, ಇಲ್ಲಿ ಹೆಚ್ಚು ಆದ್ಯತೆ ನೀಡಿಲ್ಲ ಎಂಬ ಆರೋಪವಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಅತಿ ಹೆಚ್ಚು ಮಳೆ ಗುಡಿಬಂಡೆಯಲ್ಲಿ ಆಗುತ್ತದೆ. ಗ್ರಾಮೀಣ ಪ್ರದೇಶಕ್ಕೆ ಬಸ್ ಮತ್ತು ಇತರೆ ಸಾರಿಗೆ ಸೌಕರ್ಯ ಕಡಿಮೆಯಿದೆ.












Click it and Unblock the Notifications