National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ
National Highway: ಕರ್ನಾಟಕದ ವಿವಿಧ ಭಾಗಗಳಲ್ಲಿ ನಿರ್ಮಾಣವಾಗಿರುವ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ತಾಂತ್ರಿಕ ಲೋಪಗಳು ಕಂಡುಬಂದಿದೆ. ಈ ಸಂಬಂಧ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ರಾಜ್ಯದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಲೋಪಗಳು ಕಂಡುಬಂದಿದ್ದು, ಈ ಸಂಬಂಧ ಹೊಣೆಗಾರ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ನಿತಿನ್ ಗಡ್ಕರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ-ಬೆಂಗಳೂರು ಮಾರ್ಗ, ಹೊಸಪೇಟೆ-ಬಳ್ಳಾರಿ-ಕರ್ನಾಟಕ ಗಡಿ ಹೆದ್ದಾರಿ, ಹುಬ್ಬಳ್ಳಿ-ಹೊಸಪೇಟೆ ಚತುಷ್ಪಥ ಮತ್ತು ಕುಂದಾಪುರ-ಗೋವಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಬಿರುಕು ಹಾಗೂ ಸೇತುವೆ ಕುಸಿತದಂತಹ ದೋಷಗಳು ವರದಿಯಾಗಿದ್ದು, ತಾಂತ್ರಿಕ ವರದಿಗಳ ಅನ್ವಯ ಈ ಯೋಜನೆಗಳ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ದುರಸ್ತಿ ಕಾರ್ಯವನ್ನು ತುರ್ತಾಗಿ ಪೂರ್ಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ರಾಜ್ಯದ ರಾಷ್ಟ್ರೀಯ ಹೆದ್ದಾರಿ ಜಾಲದಲ್ಲಿ ಕಂಡುಬಂದ ಒಟ್ಟು 1,278 ರಸ್ತೆ ಗುಂಡಿಗಳ ಪೈಕಿ, ಈಗಾಗಲೇ 701 ಸ್ಥಳಗಳಲ್ಲಿ ದೀರ್ಘಾವಧಿಯ ದುರಸ್ತಿ ಕಾಮಗಾರಿಗಳನ್ನು ಯಶಸ್ವಿಯಾಗಿ ಮುಗಿಸಲಾಗಿದೆ ಎಂದು ತಿಳಿಸಿದ್ದಾರೆ. ಕಾಳಿ ಸೇತುವೆಯ ಮೂರು ಸ್ಪ್ಯಾನ್ಗಳು ಕುಸಿದು ಬಿದ್ದಿದ್ದಂತಹ ಅಸಮರ್ಪಕ ಕಾಮಗಾರಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವಾಲಯ, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಹಾಗೂ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ರಾಜ್ಯದಾದ್ಯಂತ ಬಾಕಿ ಉಳಿದಿರುವ ಗುಂಡಿಗಳನ್ನು ಮುಚ್ಚಲು ಮತ್ತು ಗುಣಮಟ್ಟವನ್ನು ಮರುಪರಿಶೀಲಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಯಾವ್ಯಾವ ಹೆದ್ದಾರಿ ಕಾಮಗಾರಿಗಳಲ್ಲಿ ಲೋಪ?
* ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ
* ಹೊಸಪೇಟೆ-ಬಳ್ಳಾರಿ-ಕರ್ನಾಟಕ ಗಡಿ ಹೆದ್ದಾರಿ
* ಹುಬ್ಬಳ್ಳಿ-ಹೊಸಪೇಟೆ ಚತುಷ್ಪಥ ಹೆದ್ದಾರಿ
* ಕುಂದಾಪುರ-ಗೋವಾ ಚತುಷ್ಪಥ ಹೆದ್ದಾರಿ
ನಾಲ್ಕು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಲೋಪ
* ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶ-ಬೆಂಗಳೂರು ಹೆದ್ದಾರಿ: ಈ ಮಾರ್ಗದಲ್ಲಿ ಲೋಕ ಕಂಡುಬಂದಿದ್ದು, ಭಾರತೀಯ ವಿಜ್ಞಾನ ಸಂಸ್ಥೆಯ (IISc) ವರದಿಯ ಆಧಾರದ ಮೇಲೆ ಗುತ್ತಿಗೆದಾರರಿಂದ ದುರಸ್ತಿ ಕಾಮಗಾರಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
* ಹೊಸಪೇಟೆ-ಬಳ್ಳಾರಿ-ಕರ್ನಾಟಕ ಗಡಿ ಹೆದ್ದಾರಿ: ಇಲ್ಲಿನ 8.30 ಕಿಲೋ ಮೀಟರ್ ಪ್ರದೇಶದಲ್ಲಿ ಬಿರುಕುಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಮೂಲ ಗುತ್ತಿಗೆದಾರರನ್ನು ಕೈಬಿಡಲಾಗುವುದು. ಬದಲಿಗೆ ಹೊಸ ಗುತ್ತಿಗೆದಾರರ ಮೂಲಕ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
* ಹುಬ್ಬಳ್ಳಿ-ಹೊಸಪೇಟೆ ಚತುಷ್ಪಥ ಹೆದ್ದಾರಿ: ಕಾಮಗಾರಿ ಸಂದರ್ಭದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಗುತ್ತಿಗೆದಾರರು ಹಾನಿ ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
* ಕುಂದಾಪುರ-ಗೋವಾ ಚತುಷ್ಪಥ ಹೆದ್ದಾರಿ: ಕಾಳಿ ಸೇತುವೆಯ ಮೂರು ಸ್ಪ್ಯಾನ್ಗಳು ಕುಸಿದು ಬಿದ್ದಿದ್ದವು. ಅಸಮರ್ಪಕ ಕಾಮಗಾರಿ ನಡೆಸಿದ ಕಾರಣಕ್ಕೆ ಗುತ್ತಿಗೆದಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಕಳಪೆ ಕಾಮಗಾರಿ ಕಂಡುಬಂದರೆ, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಅಂತಲೂ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೇವಲ ಗುತ್ತಿಗೆದಾರರ ಮೇಲೆ ಕ್ರಮವಲ್ಲದೆ, ಮೇಲ್ವಿಚಾರಣೆ ನಡೆಸಿದ ಅಂದಿನ ಅಧಿಕಾರಿಗಳ ಜವಾಬ್ದಾರಿಯನ್ನೂ ಈ ಬಾರಿ ಪ್ರಶ್ನಿಸುವ ಸಾಧ್ಯತೆಯಿದೆ. ತಾತ್ಕಾಲಿಕವಾಗಿ ರಸ್ತೆ ಗುಂಡಿ ಮುಚ್ಚುವ ಪದ್ಧತಿಯನ್ನು ಕೈಬಿಟ್ಟು, ಮುಂದಿನ 5-10 ವರ್ಷಗಳವರೆಗೆ ರಸ್ತೆ ಸುಸ್ಥಿರವಾಗಿರಲು ಅಗತ್ಯವಿರುವ ವೈಜ್ಞಾನಿಕ ದುರಸ್ತಿ ತಂತ್ರಗಳನ್ನು ಅನುಸರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ












Click it and Unblock the Notifications