ಬೆಂಗಳೂರಿಗೆ ಗ್ಯಾಸ್ ಬೆನ್ನಲ್ಲೇ ಕರೆಂಟ್ ಶಾಕ್! ಯಲಹಂಕ ಅನಿಲ ವಿದ್ಯುತ್ ಸ್ಥಾವರ ಬಂದ್; ಕತ್ತಲಿನತ್ತ ಸಿಲಿಕಾನ್ ಸಿಟಿ..
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಕೇವಲ ಅನಿಲ ಪೂರೈಕೆ ಸಮಸ್ಯೆ ಮಾತ್ರವಲ್ಲದೇ ಹೊಸದೊಂದು ಸಮಸ್ಯೆ ಸೃಷ್ಟಿಯಾಗುವ ನಿರೀಕ್ಷೆ ಇದೆ. ಎಲ್ಪಿಜಿ ಪೂರೈಕೆ ಬಿಕ್ಕಟ್ಟು ಜೊತೆಗೆ ಬೇಸಿಗೆ ಹಿನ್ನೆಲೆಯಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಪೂರೈಕೆ ಸವಾಲು ಎದುರಾಗಲಿದೆ. ಅನಿಲ ಸರಬಾಜುವಿನಲ್ಲಿ ವ್ಯತ್ಯಯವಾದ ಕಾರಣಕ್ಕೆ ಕಾರಣಕ್ಕೆ ಯಲಹಂಕದಲ್ಲಿರುವ ವಿದ್ಯುತ್ ಉತ್ಪಾದನಾ ಸ್ಥಾವರವು ತಾತ್ಕಾಲಿಕವಾಗಿ ಬಂದ್ ಆಗಿದೆ. ಈ ಮೂಲಕ ಬೆಂಗಳೂರಿಗೆ ಮತ್ತೊಂದು ಸಮಸ್ಯೆ ಎದುರಾಗುವ ಆತಂಕ ಎದುರಾಗಿದೆ.
ಬೆಂಗಳೂರಿನ ಯಲಹಂಕ ಅನಿಲ ವಿದ್ಯುತ್ ಸ್ಥಾವರವು ಅನಿಲ ಪೂರೈಕೆ ಕೊರತೆಯಿಂದಾಗಿ ಕಾರ್ಯಾಚರಣೆ ಬಂದ್ ಮಾಡಿದೆ. ಬೇಸಿಗೆ ಅವಧಿಯಾದ ಡಿಸೆಂಬರ್ ಮತ್ತು ಏಪ್ರಿಲ್ ನಡುವಿನ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ನಿರ್ವಹಿಸುವಲ್ಲಿ ಈ ಸ್ಥಾವರವು ಮಹತ್ವದ ಪಾತ್ರ ವಹಿಸುತ್ತಿತ್ತು. ಇದೀಗ ಸ್ಥಾವರದ ಕಾರ್ಯಾಚರಣೆಗೆ ಈ ಅನಿಲ ಬಿಕ್ಕಟ್ಟಿನ ತೊಂದರೆ ಆಗಿದೆ. ಹೀಗಾಗಿ ಬೇಸಿಗೆಯಲ್ಲಿ ವಿದ್ಯುತ್ ಪೂರೈಸಬೇಕಿದ್ದ ಸ್ಥಾವರವು ಸ್ಥಗಿತಗೊಂಡಿದೆ. ಈ ಮೂಲಕ ವಿದ್ಯುತ್ ಪೂರೈಕೆ ಕೊರತೆ ಸಹ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಮಧ್ಯಪ್ರಾಚ್ಯದ ಯುದ್ಧ ಪರಿಸ್ಥಿತಿ ಉಲ್ಬಣಗೊಂಡಿದೆ. ಹಾರ್ಮುಜ್ ಜಲಸಂಧಿ ಇದೀಗ ಯುದ್ಧದ ಪ್ರಮುಖ ಕೇಂದ್ರಬಿಂದುವಾಗಿದೆ. ಈ ಕೊಲ್ಲಿ ಮಾರ್ಗವಾಗಿ ಬರಬೇಕಿದ್ದ ತೈಲ ಟ್ಯಾಂಕರ್ಗಳ ಸಂಚಾರಕ್ಕೆ ನಿರ್ಬಂಧ ಹೇರಿರುವ ಇರಾನ್ ಮೇಲೆ ಯುಎಸ್-ಇಸ್ರೇಲ್ ಕ್ಷಿಪಣಿ ದಾಳಿ ಮುಂದುವರಿಸಿವೆ. ಸಂಘರ್ಷ ಮುಂದುವರಿದ ಪರಿಣಾಮ ಭಾರತ ಮಾತ್ರವಲ್ಲದೇ ಜಾಗತಿಕವಾಗಿ ಅನಿಲ ಪೂರೈಕೆಯಲ್ಲಿ ಸಮಸ್ಯೆ ಆಗಿದೆ.
ಮಾರ್ಚ್ 12ರಿಂದ ಸ್ಥಾವರಕ್ಕೆ ಅನಿಲ ಪೂರೈಕೆ ಸ್ಥಗಿತ
ಇದರ ಪ್ರಭಾವ ಕರ್ನಾಟಕದ ಮೇಲು ಆಗಿದೆ. ಬೆಂಗಳೂರಿನ ಯಲಹಂಕದಲ್ಲಿದ್ದ ಈ ಸ್ಥಾವರವು ಮಾರ್ಚ್ 12 ರಂದು ಬೆಳಗ್ಗೆ 6:00 ಗಂಟೆಗೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ಘಟಕಕ್ಕೆ ಅನಿಲ ಪೂರೈಕೆಯನ್ನು ನಿಲ್ಲಿಸಿದ್ದಾಗಿ ತಿಳಿಸಿದೆ. ಹೀಗಾಗಿ ಸ್ಥಾವರ ಕಾರ್ಯ ನಿರ್ವಹಣೆ ನಿಂತಿದೆ. ಇದರಿಂದಾಗಿ ಬೇಸಿಗೆ ವೇಳೆ ಅಗತ್ಯವಾದ ವಿದ್ಯುತ್ ಪೂರೈಕೆಯ ಉಂಟಾಗಲಿದೆ. ಒಟ್ಟು 370 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. 236.82 ಮೆಗಾವ್ಯಾಟ್ ಅನಿಲ ಟರ್ಬೈನ್ ಮೂಲಕ ಮತ್ತು 133.22 ಮೆಗಾವ್ಯಾಟ್ ಉಗಿ ಟರ್ಬೈನ್ ಜನರೇಟರ್ ಮೂಲಕ ಉತ್ಪಾದಿಸಲಾಗುತ್ತಿದೆ.
ಘಟಕದ ವಾರ್ಷಿಕ ವಿದ್ಯುತ್ ಉತ್ಪಾದನೆ ಎಷ್ಟು?
ಈ ಸ್ಥಾವರವು ವಾರ್ಷಿಕವಾಗಿ ಸುಮಾರು 2,600 ರಿಂದ 2,700 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯದ ಸ್ಥಾವರ ಅನಿಲ ಪೂರೈಕೆ ಇಲ್ಲದೇ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದರಿಂದ ಬೆಂಗಳೂರು ಅನಿಲ ಬಿಕ್ಕಟ್ಟಿನ ನಡುವೆ ಪ್ರಮುಖ ವಿದ್ಯುತ್ ಪೂರೈಕೆಯಲ್ಲೂ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.
ಇತ್ತೀಚೆಗೆ ವಿದ್ಯುತ್ ದರ ಏರಿಕೆಗೆ ಮುಂದಾಗಿರುವ ರಾಜ್ಯ ಸರ್ಕಾರ ವಿದ್ಯುತ್ ಕೊರತೆ ಸಮಸ್ಯೆಯ ಪರಿಸ್ಥಿತಿಯನ್ನು ನಿರ್ವಹಿಸಲು ಸಿದ್ಧವಾಗಿದೆ. ಈ ಅಡಚಣೆ ಕೇವಲ ಅನಿರೀಕ್ಷಿತ. ಬೇಸಿಗೆಯಲ್ಲಿ ಹೆಚ್ಚುತ್ತಿರುವ ಬೇಡಿಕೆ ಪೂರೈಕೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಚಿವ ಕೆ.ಎಚ್.ಮುನಿಯಪ್ಪ ಅವರು ಕೊಟ್ಟ ಭರವಸೆಯಂತೆ ಒಂದು ವಾರದಲ್ಲಿ ಅನಿಲ ಸರಬರಾಜು ಯಥಾ ಸ್ಥಿತಿಯಲ್ಲಿ ಮುಂದುವರಿದರೆ ಬೆಂಗಳೂರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎನ್ನಲಾಗಿದೆ.












Click it and Unblock the Notifications