ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್
ಮಧ್ಯಪ್ರಾಚ್ಯದಲ್ಲಿ ಯುದ್ಧ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ಇದರ ನಡುವೆ ಸೌದಿ ಅರೇಬಿಯಾದ ರಾಸ್ ತನುರಾ ಬಂದರಿನಿಂದ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಲೈಬೀರಿಯಾ ಧ್ವಜ ಹೊತ್ತ ತೈಲ ಟ್ಯಾಂಕರ್ 'ಶೆನ್ಲಾಂಗ್' ಸುರಕ್ಷಿತವಾಗಿ ಗಮ್ಯಸ್ಥಾನ ತಲುಪಿದೆ. ಇರಾನ್ ನಿರ್ಬಂಧಿಸಿದ್ದ 'ಹಾರ್ಮುಜ್ ಜಲಸಂಧಿ'ಯನ್ನು ದಾಟಿ ಸುರಕ್ಷಿತವಾಗಿ ಮುಂಬೈಗೆ ಆಗಮಿಸಿದೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡ ಬಳಿಕವೂ ಭಾರತಕ್ಕೆ ತೆರಳುತ್ತಿರುವ ಮೊದಲ ಹಡಗು ಇದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರ ಸಚಿವ ಜೈಶಂಕರ್ ಸಂಧಾನದ ಫಲ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಇರಾನ್ ಹಾರ್ಮುಜ್ ಜಲಸಂಧಿಗೆ ನಿರ್ಬಂಧ ವಿಧಿಸಿತ್ತು. ಇದರಿಂದ ಭಾರತಕ್ಕೂ ಸಂಕಷ್ಟ ಎದುರಾಗಿತ್ತು. ಜಾಗತಿಕವಾಗಿಯೂ ಕಚ್ಚಾ ತೈಲ ಪೂರೈಕೆಯಲ್ಲಿ ಅಡಚಣೆ ಆಗಿತ್ತು. ಭಾರತದಲ್ಲಿ ಎದುರಾಗಿರುವ ಇಂಧನ ಭದ್ರತೆಯ ಆತಂಕವನ್ನು ಕೊನೆಗೊಣಿಸುವಲ್ಲಿ ಕೇಂದ್ರ ಸರ್ಕಾರವು ಇರಾನ್ ರಾಜತಾಂತ್ರಿಕ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯು ಫಲ ನೀಡಿದೆ. ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಂಕರ್ ಅವರು ಇರಾನ್ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಭಾರತ 2 ತೈಲ ಟ್ಯಾಂಕರ್ಗಳು ಹಾರ್ಮುಜ್ ಜಲಸಂಧಿ ಮೂಲಕ ಸುರಕ್ಷಿತವಾಗಿ ಭಾರತಕ್ಕೆ ಬಂದಿವೆ.

ಕೊಲ್ಲಿ ಮಾರ್ಗವಾಗಿ ತೈಲ ಟ್ಯಾಂಕರ್ ಬಂದಿದ್ದೇ ರೋಚಕ!
ಇರಾನ್ ಮೇಲೆ ಇಸ್ರೇಲ್ ಹಾಗೂ ಯುಎಸ್ ಜಂಟಿ ವೈಮಾನಿಕ ದಾಳಿ ಮುಂದುವರಿಸಿವೆ. ಈ ಮಧ್ಯೆ ಇರಾನ್ ವ್ಯಾಪ್ತಿಗೆ ಒಳಪಡುವ ಹಾರ್ಮುಜ್ ಜಲಸಂಧಿ ಮಾರ್ಗವಾಗಿ ತೈಲ ಹಡುಗುಗಳ ಸಂಚಾರವನ್ನು ಇರಾನ್ ನಿರ್ಬಂಧಿಸಿತ್ತು. ಒಂದು ವೇಳೆ ನೌಕೆಗಳು ಇಲ್ಲಿ ಬಂದರೆ ದಾಳಿ ಮಾಡುವ ಎಚ್ಚರಿಕೆ ಸಹ ನೀಡಿತ್ತು. ಥೈಲ್ಯಾಂಡ್ ತೈಲ ಹಡಗು ಸೇರಿ ಕೆಲವು ನೌಕೆಗಳ ಮೇಲೆ ಬಾಂಬ್ ದಾಳಿಗಳು ಆಗಿವೆ. ಇದರ ನಡುವೆಯೂ ಸೌದಿ ಅರೇಬಿಯಾದ ರಾಸ್ ತನುರಾ ಬಂದರಿನಿಂದ ಕಚ್ಚಾ ತೈಲದೊಂದಿಗೆ ಲೈಬೀರಿಯಾ ಧ್ವಜ ಹೊತ್ತ 'ಶೆನ್ಲಾಂಗ್' ಟ್ಯಾಂಕರ್ ಕೊಲ್ಲಿ ಮಾರ್ಗವಾಗಿ ಮುಂಬೈಗೆ ಆಗಮಿಸಿತು.
ಮಾರ್ಚ್ 1 ರಂದು ರಾಸ್ ತನುರಾ ಬಂದರಿನಲ್ಲಿ ಕಚ್ಚಾ ತೈಲವನ್ನು ಲೋಡ್ ಮಾಡಲಾಗಿತ್ತು. ಅಲ್ಲಿಂದ ಎರಡು ದಿನಗಳ ನಂತರ ಈ ಟ್ಯಾಂಕ್ ಸಂಚಾರ ಆರಂಭಿಸಿತು. ಸಮುದ್ರ ಗುಪ್ತಚರ ಸಂಸ್ಥೆಗಳಾದ ಲಾಯ್ಡ್ಸ್ ಲಿಸ್ಟ್ ಇಂಟೆಲಿಜೆನ್ಸ್ ಮತ್ತು ಟ್ಯಾಂಕರ್ಟ್ರಾಕರ್ಸ್ ಸಹಾಯ, ಮಾಹಿತಿ ಮೇರೆಗೆ ಕತ್ತಲೆಯಾಗುವ ಮೊದಲು ಜಲಸಂಧಿಯೊಳಗೆ ನಿಗದಿತ ಸ್ಥಾನವನ್ನು ಮಾರ್ಚ್ 8 ರಂದು ತಲುಪಿದೆ. ನಿರ್ಬಂಧಿತ ಕೊಲ್ಲಿ ಮಾರ್ಗವಾಗಿ ಬರುವಾಗ ಇರಾನ್ಗೆ ಡಿಟೆಕ್ಟರ್್ಗಳಿಗೆ ಪತ್ತೆ ಅಗದಂತೆ ಕಣ್ತಪ್ಪಿಸಲು ನೌಕೆಯ ಟ್ರಾನ್ಸ್ಪಾಂಡರ್ಗಳು ಮತ್ತು ಸ್ವಯಂಚಾಲಿತ ಗುರುತಿನ ವ್ಯವಸ್ಥೆಯನ್ನು ಬಂದ್ ಮಾಡಲಾಯಿತು. ನಿರ್ದಿಷ್ಟ ಕೊಲ್ಲಿ ಮಾರ್ಗ ದಾಟುತ್ತಿದ್ದಂತೆ ಮತ್ತೆ ಮಾರ್ಚ್ 9 ರಂದು ಅದು ಟ್ರ್ಯಾಕಿಂಗ್ ಡೇಟಾಬೇಸ್ಗಳಲ್ಲಿ ಆನ್ ಮಾಡಿಕೊಂಡಿತು. ಹೀಗೆ ಹರಸಾಹಸ ಮೂಲಕ ಸಮುದ್ರ ಮಾರ್ಗವಾಗಿಯೇ ಬಂದ ಮೊದಲ ತೈಲ ಟ್ಯಾಂಕರ್ ಭಾರತ ತಲುಪುವಲ್ಲಿ ಯಶಸ್ವಿ ಆಯಿತು.












Click it and Unblock the Notifications