New Railway Line: ಬೆಂಗಳೂರು-ತುಮಕೂರು ರೈಲು ಮಾರ್ಗ: 224 ಕೋಟಿ ರೂ ವೆಚ್ಚದ ಯೋಜನೆಗಳಿಗೆ ಅಧಿಸೂಚನೆ
ಬೆಂಗಳೂರು: ಬೆಂಗಳೂರಿನ ಸುತ್ತ 100 ಕಿಲೋ ಮೀಟರ್ ಚತುಷ್ಪಥ ರೈಲ್ವೆ ಮಾರ್ಗ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಮುಂದಾದ ಬೆನ್ನಲ್ಲೆ ನಿರ್ಮಾಣ ಹಂತದ ಬೆಂಗಳೂರು-ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗದಲ್ಲಿ ಹೊಸ ಯೋಜನೆಗಳಿಗೆ ಅಧಿಕೃತ ಮಂಜೂರಾತಿ ಸಿಕ್ಕಿದೆ. ಬರೋಬ್ಬರಿ 224 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆಗಳ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ನೆನ್ನೆ ಯಲಹಂಕ ರೈಲು ನಿಲ್ದಾಣದಲ್ಲಿ ಲೋಕಮಾನ್ಯ ತಿಲಕ್ ಟರ್ಮಿನಸ್ (ಮುಂಬೈ) - ಕೊಯಮತ್ತೂರು ಎಕ್ಸ್ಪ್ರೆಸ್ ರೈಲು ( 11013/11014) ರೈಲಿನ ಯಲಹಂಕ ನಿಲ್ದಾಣದ ಅಧಿಕೃತ ನಿಲುಗಡೆಗೆ ಚಾಲನೆ ನೀಡಿದರು. ಬೆಂಗಳೂರು-ತುಮಕೂರು ನೇರ ರೈಲ್ವೆ ಮಾರ್ಗದಲ್ಲಿ ಬಹುಕೋಟಿ ವೆಚ್ಚದಲ್ಲಿ ಎರಡು ರೈಲ್ವೆ ಮೇಲ್ಸೇತುವೆ (ROB) ಹಾಗೂ ಸಬ್ವೇ ಯೋಜನೆಗಳಿಗೆ ಅನುಮತಿ ನೀಡಿರುವ ಬಗ್ಗೆ ಸಂಸದ ಡಾ.ಕೆ ಸುಧಾಕರ್ ತಿಳಿಸಿದರು.

ಎಕ್ಸ್ ಪೋಸ್ಟ್ ಮಾಡಿರುವ ಅವರು, ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತಿರುವ ನೀಡಿರುವ ರೈಲ್ವೆ ಇಲಾಖೆಯು, ಬೆಂಗಳೂರು-ತುಮಕೂರು (SBC-TK) ರೈಲು ಮಾರ್ಗದ ಚಿಕ್ಕಬಾಣಾವರ-ಗೊಲ್ಲಹಳ್ಳಿ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 10 ಮತ್ತು 11ರ ಬದಲಿಗೆ ಉದ್ದೇಶಿಸಿರುವ ಎರಡು ರೈಲ್ವೆ ಮೇಲ್ಸೇತುವೆ (ROB) ಹಾಗೂ ಸಬ್ವೇ ಯೋಜನೆಗಳಿಗೆ ಅನುಮತಿ ನೀಡಿ ಅಧಿಸೂಚನೆ ಹೊರಡಿಸಿದೆ. ಯೋಜನೆಗೆ ಅಧಿಕೃತ ಮಂಜೂರಾತಿ ಸಿಕ್ಕಿದ್ದು, ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದು ಅವರು ತಿಳಿಸಿದರು.
ಭೂಸ್ವಾಧೀನ ಪ್ರಕ್ರಿಯೆ ಶೀಘ್ರವೇ ಪೂರ್ಣ
ಈ ಯೋಜನೆಗಳಿಗೆ ಭೂಸ್ವಾಧೀನ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪ್ರಗತಿಯಲ್ಲಿದೆ. ರಾಜ್ಯ ಸರ್ಕಾರದ ಹಂತದ ಬಾಕಿ ಪ್ರಕ್ರಿಯೆಗಳು ಪೂರ್ಣಗೊಂಡ ತಕ್ಷಣ ಕಾಮಗಾರಿಗೆ ಮತ್ತಷ್ಟು ವೇಗ ದೊರೆಯಲಿದೆ. ಚಿಕ್ಕಬಾಣಾವರ-ಗೊಲ್ಲಹಳ್ಳಿ ಭಾಗದ ಮೇಲ್ಸೇತುವೆ 10ರ ಯೋಜನೆಗೆ 125.12 ಕೋಟಿ ರೂ. ಮತ್ತು 11ರ ಮೇಲ್ಸೇತುವೆ 99.61 ಕೋಟಿ ಸೇರಿ ಒಟ್ಟು ಯೋಜನಾ ವೆಚ್ಚ 224.73 ಕೋಟಿ ರೂ. ಅಂದಾಜಿಸಲಾಗಿದೆ.
ಮೇಲ್ಸೇತುವೆ ನಿರ್ಮಾಣದಿಂದ ಪ್ರಯೋಜನಗಳೇನು?
ರಾಜ್ಯದ ಪ್ರಮುಖ ಈ ಎರಡು ಯೋಜನೆಗಳು ಪೂರ್ಣಗೊಂಡ ಬಳಿಕ ರೈಲ್ವೆ ಗೇಟ್ಗಳಿಂದ ಉಂಟಾಗುವ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ. ದಿನನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರಿಗೆ, ಶಾಲಾ ಕಾಲೇಜು ಬಸ್ಸುಗಳಿಗೆ, ಆಂಬ್ಯುಲೆನ್ಸ್ ಗಳಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ನೆರವಾಗಲಿದೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರು ಉತ್ತರದ ಯಲಹಂಕಕ್ಕೆ ಹೊಸ ರೈಲು ನಿಲುಗಡೆ ಹಾಗೂ ಈ ಮಹತ್ವದ ಮೂಲಸೌಕರ್ಯ ಯೋಜನೆಗಳಿಗೆ ಅನುಮೋದನೆಗೆ ಕಾರಣರಾದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಸುಧಾಕರ್ ಅಭಿನಂದನೆ ತಿಳಿಸಿದರು.
ಯಲಹಂಕ ನಿಲ್ದಾಣದ ನಿಲುಗಡೆಗೆ ಗ್ರೀನ್ ಸಿಗ್ನಲ್
ಲೋಕಮಾನ್ಯ ತಿಲಕ್ ಟರ್ಮಿನಸ್ (ಮುಂಬೈ) - ಕೊಯಮತ್ತೂರು ಎಕ್ಸ್ಪ್ರೆಸ್ ರೈಲು (ಸಂಖ್ಯೆ 11013/11014) ಯಲಹಂಕ ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ. ಈ ಹೊಸ ನಿಲುಗಡೆಯಿಂದ ಬೆಂಗಳೂರಿನ ಉತ್ತರ ಭಾಗ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಯಲಹಂಕದ ರೈಲು ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ ಎಂದು ಅವರು ಹೇಳಿದರು.














Click it and Unblock the Notifications